ಆ್ಯಪ್ನಗರ

ನಾನಾ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ನಗರದ ತಾಪಂ ಕಚೇರಿಯಿಂದ ತಹಸೀಲ್ದಾರ್‌ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ವಿಕ ಸುದ್ದಿಲೋಕ 21 Dec 2016, 9:00 am

ಜಮಖಂಡಿ : ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ನಗರದ ತಾಪಂ ಕಚೇರಿಯಿಂದ ತಹಸೀಲ್ದಾರ್‌ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ತಾಲೂಕು ಅಧ್ಯಕ್ಷೆ ರೇಣುಕಾ ಪೂಜಾರಿ ಮಾತನಾಡಿ, 41 ವರ್ಷಗಳಿಂದ ಅಂಗನವಾಡಿ ನೌಕರರು ಗೌರವ ಧನದ ಆಧಾರದಲ್ಲಿ ದುಡಿಯುತ್ತಿದ್ದಾರೆ. ಇವರು ಸ್ವಯಂಸೇವಕರೆಂದೂ ಸರಕಾರ 4ಗಂಟೆಯಿಂದ 6ಗಂಟೆಗೆ ಕೆಲಸದ ಅವಧಿ ಹೆಚ್ಚಿಸಿ, ಕೇವಲ 3000 ರಿಂದ 6000ರೂ.ಗಳಿಗೆ ದುಡಿಸುತ್ತಿದ್ದಾರೆ. ಈಗಿನ ಕಾಲಮಾನದಲ್ಲಿ ಇಷ್ಟೇ ಹಣದಲ್ಲಿ ಸಂಸಾರ ನಿಭಾಯಿಸುವುದು ಕಷ್ಟಕರವಾಗಿದೆ. ಗೋವಾದಲ್ಲಿ ಅಂಗನವಾಡಿ ನೌಕರರಿಗೆ 12ರಿಂದ 13 ಸಾವಿರ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ 7500ರೂ. ಕೇರಳದಲ್ಲಿ 10 ಸಾವಿರ ರೂ.ಗಳನ್ನು ಹೀಗೆ ಇನ್ನಿತರ ರಾಜ್ಯಗಳಲ್ಲಿ ವೇತನ ಜಾರಿಯಾಗಿದೆ. ಆದರೆ ಕರ್ನಾಟಕದಲ್ಲಿ ತೀವ್ರ ಹೋರಾಟಕ್ಕಿಳಿದಾಗ ಮಾತ್ರ 500ರೂ.ಗಳನ್ನು ಹೆಚ್ಚಿಸಲಾಗುತ್ತಿದೆ. ಆದ್ದರಿಂದ ಕೆಲಸದ ಅವಧಿ ಹೆಚ್ಚಳಕ್ಕೆ ತಕ್ಕಂತೆ ಕನಿಷ್ಠ ವೇತನದ ವ್ಯಾಪ್ತಿಗೆ ಒಳಪಡಿಸಿ ಕನಿಷ್ಠ ವೇತನ ನಿಗದಿಪಡಿಸಬೇಕು ಎಂದರು.

ತಾಲೂಕಿನ ಹುಣಸಿಕಟ್ಟಿ ಗ್ರಾಮದ ಅಮಾನ್ಯಗೊಳಿಸಿದ ಕಾರ್ಯಕರ್ತೆಯನ್ನು ತಕ್ಷ ಣ ಸೇವೆಗೆ ಹಾಜರಿಪಡಿಸಿಕೊಳ್ಳಬೇಕು ಎಂದರು. ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಪ್ರತ್ಯೇಕ ಸೇವಾ ನಿಯಮಾವಳಿ ರೂಪಿಸಬೇಕು. ಸಣ್ಣ ಪುಟ್ಟ ದೋಷಗಳಿಗೆ ಕೆಲಸದಿಂದ ಅಮಾನ್ಯ ಮಾಡಬಾರದು. ಗುಲ್ಬರ್ಗಾ, ರಾಯಚೂರು ಮತ್ತು ಗದಗ್‌ ಜಿಲ್ಲೆಗಳಲ್ಲಿ ಕೆಲಸದಿಂದ ಅಮಾನ್ಯ ಮಾಡಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಪುನಃ ಕೆಲಸಕ್ಕೆ ನೇಮಿಸಬೇಕು. ಸೇವಾವಧಿ ಭತ್ಯೆ ಕೊಡಬೇಕು. ಮೇಲ್ವಿಚಾರಕಿ ಹುದ್ದೆ ಶೇ. 100 ರಷ್ಟು ಕಾರ್ಯಕರ್ತೆಯರಿಗೆ ನೀಡಬೇಕು. ವಯಸ್ಸಿನ ವಯೋಮಿತಿ ನಿಗದಿ, ಲಿಖಿತ ಪರೀಕ್ಷೆ ಇರಬಾರದು, ಸೇವಾ ಜೇಷ್ಠತೆ ಆಧಾರದ ಮೇಲೆ ಮುಂಬಡ್ತಿ ನೀಡಬೇಕು ಎಂಬುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು. ನಂತರ ಅಂಗನವಾಡಿಯ ನೂರಾರು ಕಾರ್ಯಕರ್ತೆಯರು ತಹಸೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಖಜಾಂಚಿ ಕಸ್ತೂರಿ ಎಂ.ಅಂಗಡಿ, ಕಾರ್ಯದರ್ಶಿ ಅನ್ನಪೂರ್ಣಾ ಕಾಮರೆಡ್ಡಿ, ಎಸ್‌.ಜಿ.ಗೋಳಸಂಗೆ, ಎಸ್‌.ಬಿ.ಹಿರೇಮಠ, ಎಸ್‌.ವಾಯ್‌.ಚಿಂಚಖಂಡಿ, ಜೆ.ಪಿ.ಕಂದಗಲ್ಲ, ಎಸ್‌.ಎಚ್‌.ಹೂಗಾರ, ಎಸ್‌.ಎಂ.ಬಿಜ್ಜರಗಿ, ಎಂ.ಬಿ.ಸೊರಗೊಂಡ, ಸಿ.ಎಚ್‌.ಆಲಗೂರ, ಎಸ್‌.ಎಚ್‌.ಚಿಚಖಂಡಿ, ಎಂ.ಎಂ.ಡುಮ್ಮಕಿ, ಪಿ.ಎ.ಆದೇನ್ನವರ ಹಾಗೂ ತಾಲೂಕಿನ ನೂರಾರು ಕಾರ್ಯಕರ್ತೆಯರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ