ಆ್ಯಪ್ನಗರ

ಇಂದಿರಾ ಕ್ಯಾಂಟೀನ್‌ ಫುಲ್‌ ರಶ್‌

ರವಿ ಕೆಲೂರ ಬಾಗಲಕೋಟ ನಗರದಲ್ಲಿ ಜೂ.29ರಿಂದ ಪ್ರಾರಂಭವಾದ ಇಂದಿರಾ ಕ್ಯಾಂಟೀನ್‌ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ದಿನಾಲು ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ವೇಳೆಯಲ್ಲಿ ಕ್ಯಾಂಟೀನ್‌ಗಳು ಭೋಜನ ಪ್ರಿಯರಿಂದ ತುಂಬುತ್ತಿವೆ.

Vijaya Karnataka 9 Jul 2019, 5:00 am
ರವಿ ಕೆಲೂರ ಬಾಗಲಕೋಟ
Vijaya Karnataka Web bagalkot indira canteen full rush
ಇಂದಿರಾ ಕ್ಯಾಂಟೀನ್‌ ಫುಲ್‌ ರಶ್‌


ನಗರದಲ್ಲಿ ಜೂ.29ರಿಂದ ಪ್ರಾರಂಭವಾದ ಇಂದಿರಾ ಕ್ಯಾಂಟೀನ್‌ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ದಿನಾಲು ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ವೇಳೆಯಲ್ಲಿ ಕ್ಯಾಂಟೀನ್‌ಗಳು ಭೋಜನ ಪ್ರಿಯರಿಂದ ತುಂಬುತ್ತಿವೆ.

ಹಿಂದಿನ ಕಾಂಗ್ರೆಸ್‌ ಸರಕಾರದ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರ ಬಹು ನಿರೀಕ್ಷೆ ಹುಟ್ಟಿಸಿದ ಯೋಜನೆ ಇಂದಿರಾ ಕ್ಯಾಂಟೀನ್‌. ಬಡವರು, ಕಾರ್ಮಿಕರು ಹೊಟ್ಟೆ ತುಂಬ ಉಣ್ಣಬೇಕು ಎಂದು ಇಂದಿರಾ ಕ್ಯಾಂಟೀನ್‌ ಯೋಜನೆ ರೂಪಿಸಿದ ಸಿದ್ದರಾಮಯ್ಯ ಅವರು ಮೊದಲ ಹಂತದಲ್ಲಿ ಬೆಂಗಳೂರಿನ ಪ್ರತಿ ವಾರ್ಡ್‌ಗೊಂದರಂತೆ ಆರಂಭಿಸಿದ್ದರು. ನಂತರದಲ್ಲಿ ಅದನ್ನು ರಾಜ್ಯವ್ಯಾಪ್ತಿ ವಿಸ್ತರಿಸಲಾಗಿತ್ತು. ಅದರಂತೆ ನಗರದ ಹಳೆ ಬಸ್‌ನಿಲ್ದಾಣ ಹಾಗೂ ನವನಗರದ ಬಸ್‌ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಕ್ಕೆ ಯೋಜನೆ ರೂಪಿಸಲಾಯಿತು. ನಾನಾ ಕಾರಣದಿಂದ ವರ್ಷಗಳು ಉರುಳಿದರೂ ಆರಂಭವಾಗದ ಕ್ಯಾಂಟೀನ್‌ ಜೂ.29ರಂದು ಸ್ವತ: ಯೋಜನೆ ರೂಪಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದಲೇ ಉದ್ಘಾಟನೆ ಭಾಗ್ಯ ಕಂಡವು.

ರುಚಿಕರ ಊಟ:


ಬೆಳಗ್ಗೆ ಇಡ್ಲಿ, ಶಿರಾ, ಉಪ್ಪಿಟ್ಟು, ಪುಳಿಯೊಗರೆ, ಪೊಂಗಲ್‌, ರವಾ ಕಿಚಡಿ, ಚಿತ್ರನ್ನ, ವಾಂಗಿಬಾತ್‌ ಸೇರಿದಂತೆ ಪ್ರತಿನಿತ್ಯ ಒಂದೊಂದು ರೀತಿಯ ಉಪಾಹಾರ ಕೇವಲ 5 ರೂ.ನಲ್ಲಿ ದೊರೆಯುತ್ತಿದೆ.

ಮಧ್ಯಾಹ್ನ ಹಾಗೂ ರಾತ್ರಿ ಅವಧಿಯಲ್ಲಿ ತರಕಾರಿ ಸಾಂಬಾರ್‌, ಮೊಸರನ್ನ, ಟೊಮೆಟೋಬಾತ್‌ ಮತ್ತು ಚಿತ್ರನ್ನ, ಮೆಂತೆ ಫಲಾವ್‌, ಪುಳಿಯೊಗರೆ ಸೇರಿದಂತೆ ಪ್ರತಿದಿನ ಒಂದೊಂದು ಬಗೆಯ ಆಹಾರ ದೊರೆಯುತ್ತಿದೆ. ಮಧ್ಯಾಹ್ನ ಹಾಗೂ ರಾತ್ರಿ ಊಟದಲ್ಲಿ ಮೊಸರನ್ನ ಕಡ್ಡಾಯವಾಗಿದೆ. ಬೆಳಗ್ಗೆ 9.30ರ ವರೆಗೆ, ಮಧ್ಯಾಹ್ನ 2.30ರ ವರೆಗೆ ಹಾಗೂ ರಾತ್ರಿ 9ರ ವರೆಗೆ ಇಂದಿರಾ ಕ್ಯಾಂಟೀನ್‌ ಕಾರ್ಯ ನಿರ್ವಹಿಸುತ್ತಿದೆ.

ರುಚಿಗಾಗಿ ಬಂದವರೇ ಹೆಚ್ಚು:

ಬಡವರು ಹಾಗೂ ಕಾರ್ಮಿಕರಿಗೆಂದು ಸ್ಥಾಪಿಸಿದ ಇಂದಿರಾ ಕ್ಯಾಂಟೀನ್‌ ಸದ್ಯ ಎಲ್ಲರ ಫೆವರಿಟ್‌ ಆಗಿದೆ. ನಗರದ ಎರಡೂ ಕ್ಯಾಂಟೀನ್‌ನಲ್ಲಿ ಮೊದಲು ಕ್ಯಾಂಟೀನ್‌ನತ್ತ ಬರಲು ಹಿಂಜರಿಯುತ್ತಿದ್ದ ಹಲವು ರುಚಿಯನ್ನಾದರೂ ನೋಡೋಣವೆಂದು ಆಗಮಿಸಿ ಇಲ್ಲಿನ ಆಹಾರದ ರುಚಿ ನೋಡಿ ಸದ್ಯ ದಿನನಿತ್ಯದ ಗ್ರಾಹಕರಾಗುತ್ತಿದ್ದಾರೆ. ಕಾಲೇಜ್‌ ವಿದ್ಯಾರ್ಥಿಗಳ ಫೆವರಿಟ್‌ ಆಗಿ ಕ್ಯಾಂಟೀನ್‌ ರೂಪುಗೊಳ್ಳುತ್ತಿದೆ.

ಬೇಡಿಕೆಗಿಂತ ಹೆಚ್ಚು:

ಕ್ಯಾಂಟೀನ್‌ಗೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು ಬೇಡಿಕೆಯಷ್ಟು ಉಪಾಹಾರ, ಊಟ ನೀಡಲು ಕ್ಯಾಂಟೀನ್‌ ಸಿಬ್ಬಂದಿಗೆ ಆಗುತ್ತಿಲ್ಲ. ನಿಯಮಾವಳಿಯಂತೆ ಒಂದು ಅವಧಿಗೆ 500 ಜನರಿಗೆ ಮಾತ್ರ ಆಹಾರ ನೀಡಲಾಗುತ್ತಿದೆ. ಆದರೆ ಮಧ್ಯಾಹ್ನದ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೋಜನ ಪ್ರೀಯರು ಆಗಮಿಸುತ್ತಿರುವುದರಿಂದ ಅವರ ಬೇಡಿಕೆಗೆ ತಕ್ಕಷ್ಟು ಆಹಾರ ಪೂರೈಸಲಾಗದೆ ಹಲವರು ಮರಳಿ ಹೋಗುತ್ತಿದ್ದಾರೆ.

ನಗರದ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕ್ಯಾಂಟೀನ್‌ನಲ್ಲಿ ಶುಚಿ ಹಾಗೂ ರುಚಿಗೆ ಮಹತ್ವ ನೀಡಲಾಗುತ್ತಿದೆ. ಬೇಡಿಕೆಗಿಂತ ಹೆಚ್ಚು ಜನತೆ ಆಗಮಿಸುತ್ತಿದ್ದು ಮೆನುವಿನಂತೆ ಉಪಾಹಾರ, ಊಟ ನೀಡಲಾಗುತ್ತಿದೆ.
ಪ್ರವೀಣ ಮಹಾರಾಜನವರ, ವ್ಯವಸ್ಥಾಪಕರು, ಇಂದಿರಾ ಕ್ಯಾಂಟೀನ್‌.

ಇಂದಿರಾ ಕ್ಯಾಂಟೀನ್‌ನಲ್ಲಿ 10 ರೂ.ಗೆ ಊಟ ಹೇಗೆ ನೀಡಬಹುದು ಎಂಬ ಕುತೂಹಲವಿತ್ತು. ಸದ್ಯ ಇಲ್ಲಿ ಶುಚಿ ಹಾಗೂ ರುಚಿಯಾದ ಊಟ ದೊರೆಯುತ್ತಿದೆ.
ಸಂಗಪ್ಪ ನರಬೆಂಚಿ, ನಿವೃತ್ತ ಬ್ಯಾಂಕ್‌ ನೌಕರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ