ಆ್ಯಪ್ನಗರ

ಉರಿ ಬಿಸಿಲಲ್ಲೂ ಪ್ರಚಾರ ಬಿರುಸು

ರವಿ ಕೆಲೂರ ಬಾಗಲಕೋಟ ಲೋಕಸಭೆ ಚುನಾವಣೆ ರಣಕಣ ಸಿದ್ಧಗೊಂಡಿದೆ. ಮತಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಪಕ್ಷೇತರ ಅಭ್ಯರ್ಥಿಗಳು ಪ್ರಚಾರ ಕಾರ್ಯ ರಂಗೇರಿದೆ. ಚುರುಗುಟ್ಟುವ ಬಿಸಿಲಿನಲ್ಲೂ ಚುನಾವಣೆ ಕಾವು ತಾರಕಕ್ಕೇರುತ್ತಿದೆ.

Vijaya Karnataka 10 Apr 2019, 5:00 am
ರವಿ ಕೆಲೂರ ಬಾಗಲಕೋಟ
Vijaya Karnataka Web bagalkot lok sabha constituency party function
ಉರಿ ಬಿಸಿಲಲ್ಲೂ ಪ್ರಚಾರ ಬಿರುಸು


ಲೋಕಸಭೆ ಚುನಾವಣೆ ರಣಕಣ ಸಿದ್ಧಗೊಂಡಿದೆ. ಮತಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಪಕ್ಷೇತರ ಅಭ್ಯರ್ಥಿಗಳು ಪ್ರಚಾರ ಕಾರ್ಯ ರಂಗೇರಿದೆ. ಚುರುಗುಟ್ಟುವ ಬಿಸಿಲಿನಲ್ಲೂ ಚುನಾವಣೆ ಕಾವು ತಾರಕಕ್ಕೇರುತ್ತಿದೆ.

ಏ.8ರಂದು ನಾಮಪತ್ರ ಹಿಂಪಡೆಯುವ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಅಂತಿಮವಾಗಿ ಚುನಾವಣೆ ಅಖಾಡಾ ಸಿದ್ಧಗೊಂಡಿದೆ. ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳೆಲ್ಲ ಕ್ಷೇತ್ರದೆಲ್ಲೆಡೆ ಪ್ರಚಾರಕ್ಕೆ ಕಾರ್ಯಕ್ಕೆ ಚುರುಕು ನೀಡಿದ್ದಾರೆ.

ಲೋಕಸಭೆ ಚುನಾವಣೆ ಘೋಷಣೆಯಾಗುತ್ತಲೇ ಪ್ರಚಾರ ಕಾರ್ಯ ಪ್ರಾರಂಭಿಸಿದ ಬಿಜೆಪಿ ಈಗಾಗಲೆ ಬಹುತೇಕ ನಗರ ಪ್ರದೇಶದಲ್ಲಿ ಒಂದು ಸುತ್ತಿನ ಪ್ರಚಾರ ಕಾರ್ಯ ಕೈಗೊಂಡು ನಾಮಪತ್ರ ಹಿಂಪಡೆಯುವ ದಿನಾಂಕ ಮುಗಿಯುತ್ತಲೇ ಗ್ರಾಮೀಣ ಪ್ರದೇಶದ ಮತಗಳತ್ತ ದೃಷ್ಠಿ ನೆಟ್ಟಿದೆ. ಲೋಕಸಭೆ ಚುನಾವಣೆ ಉಸ್ತುವಾರಿ ಹೊಣೆ ಹೊತ್ತ ಶಾಸಕ ಕೆ.ಎಸ್‌.ಈಶ್ವರಪ್ಪ ಕಳೆದೆರಡು ದಿನದಿಂದ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ಚುರುಕಾಗಿದ್ದಾರೆ.

ಬಿಜೆಪಿ ಲೋಕಸಭೆ ಉಸ್ತುವಾರಿ ಕೆ.ಎಸ್‌.ಈಶ್ವರಪ್ಪ ಏ.8ರಿಂದ ಅಭ್ಯರ್ಥಿ, ಸಂಸದ ಪಿ.ಸಿ.ಗದ್ದಿಗೌಡರ ಪರ ಪ್ರಚಾರ ಕಾರ್ಯ ಆರಂಭಿಸಿದ್ದು ಶಿರೂರು, ಬೇವೂರು ಹಾಗೂ ರಾಂಪೂರ ಜಿಪಂ ಕ್ಷೇತ್ರದೆಲ್ಲೆಡೆ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಮಂಗಳವಾರವೂ ಅವರ ಮತ ಬೇಟೆ ಮುಂದುವರೆದಿದ್ದು ಬೀಳಗಿ ಮತಕ್ಷೇತ್ರದ ಗಿರಿಸಾಗರ, ಗಲಗಲಿ, ಕಲಾದಗಿಯಲ್ಲಿ ಬಹಿರಂಗ ಸಭೆ ಮೂಲಕ ಮತ ಯಾಚನೆಗೆ ಮುಂದಾಗಿದ್ದಾರೆ.

ಕಾಂಗ್ರೆಸ್‌ನಲ್ಲಿ ಟಿಕೆಟ್‌ ಅಂತಿಮಗೊಳ್ಳುವಿಕೆಯ ವಿಳಂಬದಿಂದ ಅಭ್ಯರ್ಥಿ ಅಂತಿಮವಾಗದೆ ಕೊಂಚ ಸುಮ್ಮನಿದ್ದ ಮುಖಂಡರು ವೀಣಾ ಕಾಶಪ್ಪನವರ ಅವರಿಗೆ ಟಿಕೆಟ್‌ ಘೋಷಣೆ ಆಗುತ್ತಿದ್ದಂತೆ ಪಕ್ಷ ಪ್ರಚಾರ ಕಾರ್ಯ ಶುರುವಿಟ್ಟುಕೊಂಡಿದೆ. ವಾರ ಕಾಲ ಪಕ್ಷ ದಲ್ಲಿನ ಒಡಕು ಮುಚ್ಚುವತ್ತ ಮುಖ ಮಾಡಿದ ಅಭ್ಯರ್ಥಿ ವೀಣಾ ಹಾಗೂ ಅವರ ಪತಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ನಂತರದಲ್ಲಿ ಪ್ರಚಾರ ಚುರುಕಾಗಿಸಿದ್ದಾರೆ. ನಾಮಪತ್ರ ಸಲ್ಲಿಕೆ ದಿನದಿಂದಲೇ ಪ್ರತಿದಿನ ಒಂದೊಂದು ಕ್ಷೇತ್ರದ ಮೇಲೆ ಕಣ್ಣಿಟ್ಟು ಅಲ್ಲಿನ ಮುಖಂಡರ ಬೆಂಬಲದೊಂದಿಗೆ ಮತಬೇಟೆ ಆರಂಭಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ , ಮಾಜಿ ಸಚಿವ ಎಚ್‌.ಕೆ.ಪಾಟೀಲ ಜಿಲ್ಲೆಗೆ ಕಾಲಿಟ್ಟಿದ್ದಾರೆ. ಏ.9ರಂದು ಬೀಳಗಿ ಮತಕ್ಷೇತ್ರದಲ್ಲಿನ ಸುನಗ, ಗಿರಿಸಾಗರ, ಗಲಗಲಿ ಸೇರಿದಂತೆ ಬಹುತೇಕ ಪ್ರದೇಶದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದು ಪ್ರಚಾರ ಸಮಿತಿ ಉಪಾಧ್ಯಕ್ಷ ಎಸ್‌.ಜಿ.ನಂಜಯ್ಯನಮಠ ಸೇರಿದಂತೆ ಹಲವು ಮುಖಂಡರು ಸಾಥ್‌ ನೀಡಿದ್ದಾರೆ. ಮೈತ್ರಿ ಪಕ್ಷ ಜೆಡಿಎಸ್‌ ಸಹ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಪ್ರಚಾರ ಕಾರ್ಯ ಚುರುಕಾಗಿಸಿದೆ. ಇಳಕಲ್‌, ಜಮಖಂಡಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಪ್ರಚಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ, ಸಂಸದ ಪಿ.ಸಿ.ಗದ್ದಿಗೌಡರ ಹಾಗೂ ಮುಖಂಡರು ಮೋದಿ ಸಾಧನೆಯೊಂದಿಗೆ ಮತ ಬೇಟೆ ಆರಂಭಿಸಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ವೀಣಾ ಹಾಗೂ ಮುಖಂಡರು ಹೊಸಬರಿಗೆ ಅದರಲ್ಲೂ ಮಹಿಳೆಗೆ ಆದ್ಯತೆ ನೀಡಿದ್ದು 2 ವರ್ಷಕ್ಕೂ ಹೆಚ್ಚು ಅವಧಿಯಲ್ಲಿ ಜಿಪಂ ಅಧ್ಯಕ್ಷ ಳಾಗಿ ತಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

ಮತ್ತೊಂದೆಡೆ ಕಣದಲ್ಲಿರುವ ಬಿಎಸ್‌ಪಿ, ಆರ್‌ಪಿಐ, ರೈತ ಭಾರತ ಪಕ್ಷ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳೂ ಸಹ ಮಂಗಳವಾರದಿಂದ ತಮ್ಮ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಪ್ರಚಾರಕ್ಕೆ 12 ದಿನ ಬಾಕಿ ಇದ್ದು ಬಿಜೆಪಿ, ಕಾಂಗ್ರೆಸ್‌ ಹಾಗೂ ಇತರೆ ಪಕ್ಷ ಗಳ ಅಭ್ಯರ್ಥಿಗಳು ಬಿರುಬಿಸಿಲು ಲೆಕ್ಕಿಸದೆ ಪ್ರಚಾರದಲ್ಲಿ ತೊಡಗುವ ಸಾಧ್ಯತೆ ಇದೆ. ಬಿಜೆಪಿ ಅಭ್ಯರ್ಥಿ ಪರ ಏ.18ರಂದು ನಗರದಲ್ಲಿ ಪ್ರಧಾನಿಯೇ ಆಗಮಿಸಲಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಿಯಾಂಕಾ ಗಾಂಧಿ, ರಾಹುಲ್‌ಗಾಂಧಿ ಅವರನ್ನು ಕರೆ ತರುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ