ಆ್ಯಪ್ನಗರ

ಬೀಫ್ ಹೇಳಿಕೆ: ಸಿದ್ದರಾಮಯ್ಯ ಮನುಷ್ಯರು ತಿನ್ನುವುದನ್ನು ತಿನ್ನಲಿ ಎಂದ ಈಶ್ವರಪ್ಪ

ಸಿದ್ದರಾಮಯ್ಯನವರು ದನದ ಮಾಂಸ ತಿಂತಾರೊ, ಎಮ್ಮೆ ಮಾಂಸ ತಿಂತಾರೋ ಅವರಿಗೆ ಬಿಟ್ಟಿದ್ದು. ಆದರೆ ಮನುಷ್ಯರು ತಿನ್ನುವುದನ್ನು ತಿನ್ನಲಿ ' ಎಂದು ಕೆ.ಎಸ್.ಈಶ್ವರಪ್ಪ ಜರಿದಿದ್ದಾರೆ.

Vijaya Karnataka Web 29 Oct 2018, 11:24 am
ಬಾಗಲಕೋಟ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೀಫ್ ಹೇಳಿಕೆಗೆ ತೀಕ್ಷವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ, ' ಅವರು ಏನಾದರೂ ಸೇವಿಸಲಿ. ಆದರೆ, ಮನುಷ್ಯರು ತಿನ್ನುವುದನ್ನು ತಿನ್ನಲಿ' ಎಂದು ತಿರುಗೇಟು ನೀಡಿದ್ದಾರೆ
Vijaya Karnataka Web ks


'ನಾನು ಇಲ್ಲಿಯವರೆಗೂ ದನದ ಮಾಂಸ (ಬೀಫ್) ತಿಂದಿಲ್ಲ. ತಿನ್ನಬೇಕು ಅನ್ನಿಸಿದರೆ, ತಿನ್ನುತ್ತೇನೆ. ಕೇಳೋಕೆ ನೀವ್ಯಾರು (ಬಿಜೆಪಿಯವರು)' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಮಖಂಡಿಯಲ್ಲಿ ನಡೆದ ಅಲ್ಪಸಂಖ್ಯಾತರ ವಿಶೇಷ ಸಭೆಯಲ್ಲಿ ನೀಡಿದ ಹೇಳಿಕೆಗೆ ಪ್ರತಿಯಾಗಿ ಈಶ್ವರಪ್ಪನವರು ಈ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯನವರು ದನದ ಮಾಂಸ ತಿಂತಾರೊ, ಎಮ್ಮೆ ಮಾಂಸ ತಿಂತಾರೋ ಅವರಿಗೆ ಬಿಟ್ಟಿದ್ದು. ಆದರೆ ಮನುಷ್ಯರು ತಿನ್ನುವುದನ್ನು ತಿನ್ನಲಿ ' ಎಂದು ಜರಿದಿದ್ದಾರೆ.

ಬೀಫ್ ತಿಂದಿಲ್ಲ, ತಿನ್ನಬೇಕು ಅನ್ನಿಸಿದ್ರೆ ತಿನ್ನುತ್ತೇನೆ, ನೀವ್ಯಾರು ಕೇಳೋಕೆ?: ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಜಿ ಪ್ರಧಾನಿ ದೇವೆಗೌಡರ ಬೆನ್ನಿಗೆ ಚಾಕು ಹಿಡಿದು ನಿಂತಿದ್ದಾರೆ. ಅದರಂತೆ, ಸಿದ್ದರಾಮಯ್ಯರ ಬೆನ್ನಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಾಕು ಹಿಡಿದು ನಿಂತಿದ್ದಾರೆ. ಅವರು ಯಾವಾಗ ಸಾಯುತ್ತಾರೋ ಗೊತ್ತಿಲ್ಲ. ಇವರು ಯಾವಾಗ ಸಾಯುತ್ತಾರೊ ಗೊತ್ತಿಲ್ಲ ಎಂದು ಕುಟುಕಿದ್ದಾರೆ.

ಸಮ್ಮಿಶ್ರ ಸರಕಾರ ಮುಳುಗುತ್ತಿರುವ ಹಡಗು. ಕಾಂಗ್ರೆಸ್-ಜೆಡಿಎಸ್‌ನವರು ಈಜು ಬಾರದವರಾಗಿದ್ದು, ಒಬ್ಬರಿಗೊಬ್ಬರು ತಬ್ಬಿಕೊಂಡಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆ ಮುಳುಗಿ ಹೋಗುತ್ತಾರೆ. ಇದಕ್ಕೆ ಟೆಸ್ಟ ಡೋಸ್ ಜಮಖಂಡಿ ಉಪ ಚುನಾವಣೆ ಎಂದು ಹೇಳಿದರು.

ಕಾಂಗ್ರೆಸ್‌ನವರು ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸಿದ್ದರಾಮಯ್ಯನವರು ಅವಳು ಎಂದು ಏಕವಚನ ಬಳಸುತ್ತಾರೆ. ನನಗೆ ಸಿದ್ದರಾಮಯ್ಯನವರ ಪತ್ನಿ ತಾಯಿ ಸಮಾನರಾಗಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕಾಲು ಕಸ ಎಂದು ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ. ಇವರು ಹೆಣ್ಣು ಮಕ್ಕಳನ್ನು ಎಷ್ಟರ ಮಟ್ಟಿಗೆ ಗೌರವಿಸುತ್ತಾರೆ ಎನ್ನುವುದು ಇದರಿಂದಲೇ ತಿಳಿಯುತ್ತದೆ ಎಂದು ವಾಗ್ದಾಳಿ ನಡೆಸಿದರು.

'ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯನವರು ಹಗಲು, ರಾತ್ರಿ ಕನಸು ಕಾಣುತ್ತಿದ್ದಾರೆ. ಬ್ರಹ್ಮ ಬಂದರೂ ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗುವುದಿಲ್ಲ' ಎಂದು ಛೇಡಿಸಿದರು.

ರಾಹು, ಕೇತು, ಶನಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, 'ಸಿದ್ದರಾಮಯ್ಯನವರಿಗೆ ಡಿಸಿಎಂ ಜಿ.ಪರಮೇಶ್ವರ್ ಅವರೇ ರಾಹು, ಮಾಜಿ ಪ್ರಧಾನಿ ದೇವೇಗೌಡರೇ ಶನಿ, ಸಚಿವ ಎಚ್.ಡಿ.ರೇವಣ್ಣರೇ ಕೇತುವಾಗಿದ್ದಾರೆ. ಶನಿಯಂತಿರುವ ಜನತಾದಳ ಕಟ್ಟಿಕೊಂಡು ಸಿದ್ದರಾಮಯ್ಯನವರು ಮುನ್ನುಗುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ