ಆ್ಯಪ್ನಗರ

ಪ್ರಧಾನಿಯಿಂದ ಸೇನೆಗೆ ದ್ರೋಹ: ಮಾಜಿ ಸಚಿವ ಎಚ್‌ಕೆ ವಾಗ್ದಾಳಿ

ಬಾಗಲಕೋಟ: 'ಗಾಗಲ್‌ ಹಾಕಿಕೊಂಡು ಸೇನೆಯ ಸಮವಸ್ತ್ರ ಧರಿಸಿದ ಪ್ರಧಾನಿ ಮೋದಿ ಸೈನ್ಯಕ್ಕೆ ಅವಮಾನ ಮಾಡಿದ್ದಾರೆ' ಎಂದು ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಎಚ್‌.ಕೆ.ಪಾಟೀಲ ವಾಗ್ದಾಳಿ ನಡೆಸಿದರು.

Vijaya Karnataka 11 Apr 2019, 5:00 am
ಬಾಗಲಕೋಟ: 'ಗಾಗಲ್‌ ಹಾಕಿಕೊಂಡು ಸೇನೆಯ ಸಮವಸ್ತ್ರ ಧರಿಸಿದ ಪ್ರಧಾನಿ ಮೋದಿ ಸೈನ್ಯಕ್ಕೆ ಅವಮಾನ ಮಾಡಿದ್ದಾರೆ' ಎಂದು ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಎಚ್‌.ಕೆ.ಪಾಟೀಲ ವಾಗ್ದಾಳಿ ನಡೆಸಿದರು.
Vijaya Karnataka Web betrayal of army from pm former minister hk
ಪ್ರಧಾನಿಯಿಂದ ಸೇನೆಗೆ ದ್ರೋಹ: ಮಾಜಿ ಸಚಿವ ಎಚ್‌ಕೆ ವಾಗ್ದಾಳಿ


ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 'ದೇಶದ ಮಿಲಿಟರಿಗೆ ದ್ರೋಹ ಮಾಡಿರುವ ಮೋದಿಯವರ ನಡೆ ದೇಶದ ಹಿತದೃಷ್ಟಿಯಿಂದ ಸರಿಯಲ್ಲ. ಈ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮೋದಿಯವರನ್ನು ಚುನಾವಣೆಯಿಂದ ಅನರ್ಹಗೊಳಿಸಬೇಕೆಂದು ಚುನಾವಣೆ ಆಯೋಗವನ್ನು ಒತ್ತಾಯಿಸುತ್ತೇನೆ' ಎಂದರು.

'ಕಾಂಗ್ರೆಸ್‌ ಪ್ರಣಾಳಿಕೆಯಿಂದ ಗಲಿಬಿಲಿಯಾಗಿರುವ ಬಿಜೆಪಿಯಿಂದ ನೀತಿ ಆಯೋಗದ ಉಪಾಧ್ಯಕ್ಷರ ಮೂಲಕ ಟೀಕೆ ಮಾಡಿಸಲಾಗುತ್ತಿದೆ. ಬಿಜೆಪಿ ಪ್ರಣಾಳಿಕೆ ಅಪಹಾಸ್ಯಕ್ಕೀಡಾಗಿದೆ, ಅದಕ್ಕೆ ಮೌಲ್ಯವೇ ಇಲ್ಲ. ಈ ಮೊದಲು ಘೋಷಿಸಿದಂತೆ ರಾಮ ಮಂದಿರ ನಿರ್ಮಾಣ ಸೇರಿದಂತೆ ಹಲವು ಭರವಸೆಗಳನ್ನು ಬಿಜೆಪಿ ಈಡೇರಿಸಿಲ್ಲ. ಕಪ್ಪು ಹಣ ವಾಪಸ್‌ ತರುತ್ತೇವೆ, 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದೆಲ್ಲ ಹೇಳಿದ್ದ ಪ್ರಧಾನಿ ಯಾವ ಭರವಸೆಯನ್ನೂ ಈಡೇರಿಸಿಲ್ಲ' ಎಂದು ಆರೋಪಿಸಿದರು.

ಪಾಠ ಬೇಕಿಲ್ಲ

'ಪಾಕ್‌ ಮೇಲೆ ದಾಳಿ ನಡೆದರೆ ಕಾಂಗ್ರೆಸ್‌, ಜೆಡಿಎಸ್‌ ಕಣ್ಣೀರು ಹಾಕುತ್ತವೆ ಎಂದು ಪ್ರಧಾನಿ ಮೋದಿ ಹೇಳಿರುವುದು ರಾಜಕಾರಣದ ಕೆಳಮಟ್ಟದ ವ್ಯಕ್ತಿ ನೀಡುವಂತಹ ಹೇಳಿಕೆಯಾಗಿದೆ. ಕಾಂಗ್ರೆಸ್‌ಗೆ ಅವರು ದೇಶಭಕ್ತಿ ಬಗ್ಗೆ ಪಾಠ ಮಾಡುವ ಅಗತ್ಯವಿಲ್ಲ, ಗಾಂಧೀಜಿ ಫೋಟೊಗೆ ಗುಂಡು ಹೊಡೆದವರ ಬಗ್ಗೆ ಅವರು ಏನು ಹೇಳುತ್ತಾರೆ?. ಫುಲ್ವಾಮಾ ದಾಳಿ ಬಗ್ಗೆ ಮೋದಿಯವರಿಗೆ 8 ಗಂಟೆಯ ಬಳಿಕ ಮಾಹಿತಿ ದೊರೆತಿದೆ. ಇವರಿಂದ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ಬುದ್ಧಿ ಹೇಳಿಸಿಕೊಳ್ಳಬೇಕಿಲ್ಲ. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿರುವುದು ಕಷ್ಟ ಸಾಧ್ಯವಲ್ಲ, ನಾವು ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸುತ್ತೇವೆ. ರಾಜ್ಯದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮಧ್ಯೆ ಯಾವುದೇ ಭಿನ್ನಮತವಿಲ್ಲ. ದೇವೇಗೌಡರು ಹಾಗೂ ಸಿದ್ದರಾಮಯ್ಯನವರು ಒಟ್ಟಾಗಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. ಸಹೋದರರಂತೆ ನಾವು ಜೆಡಿಎಸ್‌ನವರು ಸಂಘಟಿತರಾಗಿ ಪ್ರಚಾರ ಕೈಗೊಂಡಿದ್ದೇವೆ. ಒಳಹೊಡೆತ ಎಂದುಕೊಂಡವರಿಗೆ ಫಲಿತಾಂಶದ ನಂತರ ನಿರಾಸೆಯಾಗಲಿದೆ' ಎಂದರು.

ಮೋದಿ ಡೀಲ್‌

'ರಫೇಲ್‌ ಹಗರಣದ ದಾಖಲೆ ಕಳೆದುಹೋಗಿವೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಹೇಳುತ್ತದೆ. ಮೂರು ದಿನಗಳ ನಂತರ ದಾಖಲೆಯಿವೆ, ಝೆರಾಕ್ಸ್‌ ಕಳೆದಿವೆ ಎನ್ನುತ್ತಾರೆ. ರಫೇಲ್‌ ಡೀಲ್‌ಗಾಗಿ ಮೋದಿ ಯಾರಾರ‍ಯರನ್ನು ಕರೆದುಕೊಂಡು ಹೋಗಿದ್ದರು ?. ಅಂಬಾನಿ ಹಾಗೂ ಸಹಚರರನ್ನು ಕರೆದುಕೊಂಡು ಹೋಗಿದ್ದು ಸರಿ ಎಂದು ಹೇಳಲು ಆಗುತ್ತದೆಯೇ ?. ಸರಕಾರದ ಪ್ರತಿನಿಧಿಗಳ ಬದಲು ಅಂಬಾನಿ ಡೀಲ್‌ಗೆ ಹೋಗಿದ್ದಕ್ಕಿಂತ ಮತ್ತೇನೂ ಸಾಕ್ಷಿ ಬೇಕಾಗಿಲ್ಲ. ಹಗರಣದಲ್ಲಿ ಸಿಲುಕಿರುವ ಮೋದಿ ಈಗ ನಾಟಕ ಮಾಡುತ್ತಿದ್ದಾರೆ. ರಾಹುಲ್‌ ಅವರನ್ನು ಪಪ್ಪು ಎಂದು ಮೂದಲಿಸಿದ್ದ ನಿಮಗೆ ನಾಚಿಕೆಯಾಗುವುದಿಲ್ಲವಾ ?' ಎಂದು ಪ್ರಶ್ನಿಸಿದರು.

'ಮಂಡ್ಯದಲ್ಲಿ ಯಾವುದೇ ಭಿನ್ನಮತವಿಲ್ಲ, ಎಲ್ಲ ಭಿನ್ನಾಭಿಪ್ರಾಯ ಬಗೆ ಹರಿದಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಹಳ್ಳಿಯೊಳಗಿನ ಪ್ರೀತಿಯಂತಿದೆ. ಸುಮಲತಾ ವಿರುದ್ಧದ ಪ್ರಚಾರದ ಬಗ್ಗೆ ನನಗೆ ಗೊತ್ತಿಲ್ಲ' ಎಂದರು. ಮಾಜಿ ಸಂಸದ ಅಜಯಕುಮಾರ್‌ ಸರನಾಯಕ, ಕಾಂಗ್ರೆಸ್‌ ಚುನಾವಣೆ ಪ್ರಚಾರ ಸಮಿತಿಯ ರಾಜ್ಯ ಉಪಾಧ್ಯಕ್ಷ ಎಸ್‌.ಜಿ.ನಂಜಯ್ಯನಮಠ, ಜಿಲ್ಲಾಧ್ಯಕ್ಷ ಮಂಜುನಾಥ ವಾಸನದ, ಮಾಜಿ ಶಾಸಕ ಜೆ.ಟಿ.ಪಾಟೀಲ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ