ಚಿಮ್ಮಡ; ಕ್ರಾಂತಿಕಾರಿ ಬಸವಣ್ಣನವರ ಪುಣ್ಯಭೂಮಿ ಅಲ್ಲಮ ಪ್ರಭುವಿನ ಜನ್ಮಭೂಮಿಯಲ್ಲಿ ಹಲವಾರು ಶರಣರು, ಸಂತರು, ಮಹಾಂತರು ಜನಿಸಿದರು. ಅಂತಹ ಮಹಾಂತರಲ್ಲಿ ವಿರಕ್ತ ಮಹಾಸ್ವಾಮಿಗಳೂ ಒಬ್ಬರು.
ಬಾಗಲಕೋಟ ಜಿಲ್ಲೆ ಬೀಳಗಿ ತಾಲೂಕಿನ ಜೋಡಾಪುರದಲ್ಲಿ ತಂದೆ ವಿರುಪಾಕ್ಷ ಯ್ಯ ತಾಯಿ ಚೇರಮ್ಮನವರ ಉದರದಲ್ಲಿ ತೃತೀಯ ಪುತ್ರರಾಗಿ ಈರತಯ್ಯನವರು ಜನಿಸಿದರು. ಬಾಲ್ಯದಲ್ಲಿಯೇ ಅನೇಕ ಮಹತ್ವದ ಪವಾಡ ಮಾಡುತ್ತ ಜೋಡಾಪುರದ ಜನತೆಗೆ ಕಾಮಧೇನು ಕಕಲ್ಪವೃಕ್ಷ ನಂತೆ ಕಂಡರು.
ತಾಯಿ ಚೇರಮ್ಮನವರು ದೈವಭಕ್ತಳಾಗಿದ್ದು ಅವರ ಇಚ್ಛೆಯಂತೆ ತನ್ನ ಮಗ ಈರತಯ್ಯನವರನ್ನು ಎಂಟನೇಯ ವಯಸ್ಸಿನಲ್ಲಿಯೇ ಜಮಖಂಡಿ ತಾಲೂಕಿನ ಕೊಣ್ಣೂರು ಗ್ರಾಮದ ಹಿರೇಮಠಕ್ಕೆ ಒಪ್ಪಿಸಿದರು. ವಿದ್ಯಾಭ್ಯಾಸದಲ್ಲಿದ್ದಾಗ ಚಿಮ್ಮಡ ವಿರಕ್ತಮಠದ ಪೀಠಾಧಿಪತಿ ಗುರುಸಿದ್ದ ಸ್ವಾಮಿಗಳು ಕೊಣ್ಣೂರ ಹಿರೇಮಠಕ್ಕೆ ಅನಿರೀಕ್ಷಿತ ಭೇಟಿ ನೀಡಿದಾಗ ಅಲ್ಲಿ ಈರತಯ್ಯನವರನ್ನು ಚಿಮ್ಮಡ ವಿರಕ್ತಮಠಕ್ಕೆ ಕರೆದುಕೊಂಡು ಬಂದರು.
ಗುರುಸಿದ್ದ ಸ್ವಾಮಿಗಳ ಗುರುಭಕ್ತಿ ಅಂತಃಕರಣದ ಶಿಷ್ಯನಾಗಿ ಬೆಳೆದು ಆಗಿನಕಾಲದಲ್ಲಿ ಅನೇಕ ರೋಗ- ರುಜಿನಗಳಿಗೆ ಆಯುರ್ವೇದ ಚಿಕಿತ್ಸಾ ಪದ್ದತಿಯಿಂದ ಹಾಗೂ ಮಾಟ ಮಂತ್ರಗಳಿಗೆ ಪ್ರತಿ ತಂತ್ರ ಅಲ್ಲದೇ ವಿಷಜಂತುಗಳ ಕಡಿತಕ್ಕೆ ಮಂತ್ರೌಷಧಿ ನೀಡುವಲ್ಲಿ ಸಿದ್ದಹಸ್ತರಾಗಿದ್ದರು. ಕುಸ್ತಿ ಗ್ರಾಮೀಣ ಕ್ರೀಡೆ ಹಾಗೂ ಇನ್ನಿತರ ಸಾಹಸಗಳಲ್ಲಿ ಇವರನ್ನು ಮೀರಿಸುವವರೇ ಇರಲಿಲ್ಲ. ಅವರು ಇಂದಿಗೂ ಕೂಡ ಅಥಣಿ, ಮಹಾಲಿಂಗಪುರ, ಬಬಲೇಶ್ವರ, ಉತ್ತೂರು, ಧಾರವಾಡ ಹಾಗೂ ಚಿತ್ರದುರ್ಗ ಶ್ರೀಮಠಗಳ ಪರಂಪರೆಯಲ್ಲಿ ಭಕ್ತರಿಗೆ ಚಿರಪರಿಚಿತರು. ಮಹಾನ್ ದೈವಭಕ್ತರೂ, ಶಕ್ತಿಶಾಲಿಯೂ ಆದ ಶ್ರೀಗಳು ಮಠದ ಪಕ್ಕದಲ್ಲಿ ಒಬ್ಬರೇ 25 ಅಡಿ ಆಳದ ಬಾವಿ ಅಗೆದು ಸಾಹಸ ಮೆರೆದವರು. ಹತ್ತು ಜೋಳದ ಚೀಲಗಳನ್ನು ಒಂದು ಮೈಲಿ ದೂರದವರೆಗೆ ಆಯಾಸವಿಲ್ಲದೆ ಹೊತ್ತೊಯ್ಯುತ್ತಿದ್ದರು, ಅಥಣಿ ಶ್ರೀಮಠದ ಸಿದ್ದಲಿಂಗಪ್ಪನವರನ್ನು ಹೆಗಲಮೇಲೆ ಹೊತ್ತು ಪುಣ್ಯ ಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಪಾದಯಾತ್ರೆಗೈದಿದ್ದಾರೆ. ಚಿಮ್ಮಡ ಹಾಗೂ ಮಹಾಲಿಂಗಪುರ ಸದ್ಭಕ್ತರ ಇಚ್ಛೆಯಂತೆ 1970 ರಲ್ಲಿ ಚಿಮ್ಮಡ ವಿರಕ್ತಮಠದ ಪಟ್ಟಾಧಿಕಾರ ವಹಿಸಿದರು. ಚಿಕ್ಕವರಿದ್ದಾಗ ಬಾಲಗ್ರಹ ಪೀಡಿತರಾಗಿದ್ದ ಶ್ರೀಗಳು ಚಿಮ್ಮಡದಲ್ಲಿ ಹಲವಾರು ಪವಾಡ ಮಾಡುತ್ತ 1993 ಏಪ್ರಿಲ್ 3 ರಂದು ವಿರಕ್ತಮಹಾಸ್ವಾಮಿಗಳು ಲಿಂಗೈಕ್ಯರಾದರು. ಅಂದಿನಿಂದ ಪ್ರತಿವರ್ಷ ಅವರ ಪುಣ್ಯ ಸ್ಮರಣೋತ್ಸವ ನಿಮಿತ್ತ ಹಲವಾರು ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಈಗಿನ ಧರ್ಮೋಪದೇಶದ ಪೀಠಾಧಿಪತಿ ಶ್ರೀ ಪ್ರಭು ಸ್ವಾಮಿಗಳು ಭಕ್ತರ ಸಹಾಯದೊಂದಿಗೆ ನಡೆಸಿಕೊಂಡು ಬರುತ್ತಿದ್ದಾರೆ.