ಆ್ಯಪ್ನಗರ

ಭದ್ರ ‘ಕೋಟೆ ‘ ಜಿಲ್ಲೆಯಲ್ಲಿ ನಿಷ್ಠೆ ಬದಲಿಸುವರೇ?

ರವಿರಾಜ ಗಲಗಲಿ ಬಾಗಲಕೋಟ ಐವರು ಬಿಜೆಪಿ ಹಾಗೂ ಇಬ್ಬರು ಕಾಂಗ್ರೆಸ್‌ ಶಾಸಕರ ಭದ್ರ 'ಕೋಟೆ' ಜಿಲ್ಲೆಯಲ್ಲಿ ಶಾಸಕರ ಪಕ್ಷಾಂತರದ ಅವಕಾಶ ಇದೆಯೇ?

Vijaya Karnataka 7 Jul 2019, 5:00 am
ರವಿರಾಜ ಗಲಗಲಿ ಬಾಗಲಕೋಟ
Vijaya Karnataka Web does loyalty change in the district
ಭದ್ರ ‘ಕೋಟೆ ‘ ಜಿಲ್ಲೆಯಲ್ಲಿ ನಿಷ್ಠೆ ಬದಲಿಸುವರೇ?


ಐವರು ಬಿಜೆಪಿ ಹಾಗೂ ಇಬ್ಬರು ಕಾಂಗ್ರೆಸ್‌ ಶಾಸಕರ ಭದ್ರ 'ಕೋಟೆ' ಜಿಲ್ಲೆಯಲ್ಲಿ ಶಾಸಕರ ಪಕ್ಷಾಂತರದ ಅವಕಾಶ ಇದೆಯೇ?

ಹಿಂದೆ ಶಾಸಕರ ಪಕ್ಷಾಂತರ ಅನುಭವ ಇದ್ದರೂ ಇತ್ತೀಚಿನ ವರ್ಷಗಳಲ್ಲಿ ಅಂಥ ಬೆಳವಣಿಗೆ ಜಿಲ್ಲೆಯಲ್ಲಿ ಕಂಡು ಬಂದಿಲ್ಲ. ಒಮ್ಮೆ ಒಂದು ಪಕ್ಷಕ್ಕೆ ಬೆಂಬಲ ನೀಡಿದರೆ, ಮತ್ತೊಂದು ಇನ್ನೊಂದು ಪಕ್ಷ ಬೆಂಬಲಿಸುವ ಜಾಣತನ ಬಾಗಲಕೋಟ ಜಿಲ್ಲಾ ಮತದಾರರದ್ದು. ಈ ಬಾರಿ ಐದು ಕಡೆ ಬಿಜೆಪಿ ಗೆದ್ದರೆ, ಕಾಂಗ್ರೆಸ್‌ ಎರಡು ಸ್ಥಾನ ಪಡೆದಿದೆ. ಮರು ಚುನಾವಣೆಯಲ್ಲೂ ಕೈ ಗೆಲುವು ದಾಖಲಿಸಿದೆ. ಈಗಿನ ಶಾಸಕರ ಪಕ್ಷಾಂತರ ಪರ್ವದಲ್ಲಿ ಜಿಲ್ಲೆಯ ಶಾಸಕರ ಹೆಸರು ಪ್ರಸ್ತಾಪ ಕಡಿಮೆ ಎಂದೇ ಹೇಳಲಾಗುತ್ತಿದೆ.

ಜನತಾದಳ ಮೂಲದಿಂದ ಬಂದು ನಂತರ ಬಿಜೆಪಿಯಿಂದ ಗೆದ್ದಿರುವ ಗೋವಿಂದ ಕಾರಜೋಳ ಐದು ಬಾರಿ ಶಾಸಕರಾದರೆ, ಡಾ.ವೀರಣ್ಣ ಚರಂತಿಮಠ, ಮುರುಗೇಶ ನಿರಾಣಿ, ದೊಡ್ಡನಗೌಡ ಪಾಟೀಲ ಸಿದ್ದು ಸವದಿ ಮೂರನೇ ಬಾರಿ ಶಾಸನ ಸಭೆ ಪ್ರವೇಶಿಸಿದ್ದಾರೆ. ಬಿಜೆಪಿ ಶಾಸಕರಲ್ಲಿ ಬಹುತೇಕರು ಪಕ್ಷ ನಿಷ್ಠರು ಇರುವುದರಿಂದ ಅಲ್ಲಿ ಅಂಥ ಸಮಸ್ಯೆ ಇಲ್ಲ. ಇನ್ನು ಕಾಂಗ್ರೆಸ್‌ನಲ್ಲಿ ಇಬ್ಬರು ಶಾಸಕರು ಮಾತ್ರ ಇದ್ಧಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿಯಿಂದ ಗೆದ್ದರೆ, ತಂದೆ ನಿಧನದ ನಂತರದ ಮರು ಚುನಾವಣೆಯಲ್ಲಿ ಜಮಖಂಡಿಯಲ್ಲಿ ಗೆದ್ದವರು ಆನಂದ್‌ ನ್ಯಾಮಗೌಡ, ಸಿದ್ದರಾಮಯ್ಯ ಈಗ ಟ್ರಬಲ್‌ ಶೂಟರ್‌ ಆಗಿರುವುದರಿಂದ ಅವರ ಚಿತ್ತ ಸರಕಾರ ಉಳಿಸಿಕೊಳ್ಳುವೆಡೆಗೆ ಇದೆ. ತಂದೆಯ ಕಾಲದಿಂದಲೂ ಕಾಂಗ್ರೆಸ್‌ ಕುಟುಂಬವಾಗಿರುವ ನ್ಯಾಮಗೌಡರ ಪುತ್ರ ಆನಂದ್‌ ಪಕ್ಷ ಬಿಡುವ ಯೋಚನೆ ಕಡಿಮೆ. ಇದರಿಂದ ಕಾಂಗ್ರೆಸ್‌ನಲ್ಲೂ ಸಮಸ್ಯೆಯಿಲ್ಲ.

ಮೈತ್ರಿ ಸರಕಾರದ 12 ಶಾಸಕರು ರಾಜೀನಾಮೆ ನೀಡುತ್ತಿದ್ದಂತೆ ಜಿಲ್ಲೆಯ ರಾಜಕಾರಣದ ಪಡಸಾಲೆಯಲ್ಲಿ ಚರ್ಚೆಗಳು ಶುರುವಾಗಿವೆ. ಇತ್ತೀಚೆಗಷ್ಟೇ ಸಕ್ಕರೆ ಖಾತೆ ಸಚಿವ ಆರ್‌.ಬಿ.ತಿಮ್ಮಾಪುರ 'ಬಿಜೆಪಿ ಆಪರೇಶನ್‌ ಮಾಡಿದರೆ ನಾವು ರಿವರ್ಸ್‌ ಆಪರೇಶನ್‌ ಮಾಡುತ್ತೇವೆ' ಎಂದು ಹೇಳಿದ್ದರು. ಸದ್ಯ ರಾಜ್ಯ ರಾಜಕೀಯದ ಬೆಳವಣಿಗೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಶಾಸಕರು ರಾಜೀನಾಮೆ ಪರ್ವ ಆರಂಭಿಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್‌ ರಿವರ್ಸ್‌ ಆಪರೇಶನ್‌ ಆರಂಭಿಸಿದರೆ ಜಿಲ್ಲೆಯ ಶಾಸಕರು ಯಾರಾರ‍ಯದರೂ ಸ್ಥಾನ ಪಲ್ಲಟ ಮಾಡಬಹುದಾ ಎಂಬ ಕುತೂಹಲವೂ ಇದೆ. ಆದರೆ ಅಂತಹ ಸಾಧ್ಯತೆಗಳು ಸದ್ಯಕ್ಕೆ ಇಲ್ಲ ಎಂಬುದು ರಾಜಕೀಯ ವಲಯದ ತಜ್ಞರ ಮಾತು. ಸದ್ಯ ಜಿಲ್ಲೆಯ ಬಾದಾಮಿ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಸರಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತೀವ್ರ ಪ್ರಯತ್ನ ನಡೆಸಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಬೆಂಗಳೂರಿನಲ್ಲೇ ಇದ್ದು ಆಪರೇಶನ್‌ ತಡೆಯುವ ಯತ್ನ ಮುಂದುವರಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಶಾಸಕರು ಪಕ್ಷಾಂತರ ಮಾಡಿದ ಉದಾಹರಣೆಗಳು ಕಡಿಮೆ. 1980ರಲ್ಲಿ ಬಾದಾಮಿ ಶಾಸಕರಾಗಿದ್ದ ಬಿ.ಬಿ.ಚಿಮ್ಮನಕಟ್ಟಿ ದೇವರಾಜ ಅರಸು ಅವರ ಕರ್ನಾಟಕ ಕಾಂಗ್ರೆಸ್‌ ತೊರೆದು ಗುಂಡೂರಾವ್‌ ನೇತೃತ್ವದ ಕಾಂಗ್ರೆಸ್‌ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದರು. ಇದು ಬಹುತೇಕ ಒಂದೇ ಪಕ್ಷದಲ್ಲಿನ ಎರಡು ಬಣಗಳ ಜಿದ್ದಾಜಿದ್ದಿಗೆ ಸಾಕ್ಷಿಯಾದ ಘಟನೆ. ಗುಂಡೂರಾವ್‌ ಬಣ ಸೇರಿದ ಚಿಮ್ಮನಕಟ್ಟಿ ನಂತರ ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇನ್ನು 1983ರಲ್ಲಿ ಜಿ.ಬಿ.ಮಂಟೂರ ಕಾಂಗ್ರೆಸ್‌ ಬಂಡುಕೋರ ಅಭ್ಯರ್ಥಿಯಾಗಿ ಪಕ್ಷೇತರರಾಗಿ ಬಾಗಲಕೋಟ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆಗ ರಾಜ್ಯದಲ್ಲಿ 80 ಪಕ್ಷೇತರರು ಆಯ್ಕೆಯಾಗಿದ್ದು ದಾಖಲೆಯಾಗಿತ್ತು. ಎಚ್‌ವೈ ಮೇಟಿ, ಅಜಯಕುಮಾರ ಸರನಾಯಕ ಸಹಿತ ಹಲವರು ಸಹಜ ರಾಜಕೀಯ ಬೆಳವಣಿಗೆಯಲ್ಲಿ ನಾಯಕರ ನಿಷ್ಠೆ ಕಾರಣಕ್ಕೆ ಪಕ್ಷ ಬದಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ