ಆ್ಯಪ್ನಗರ

ಚುನಾವಣೆ ಕಣಕ್ಕೆ ತಾರಾ ಮೆರಗು

ಬಾಗಲಕೋಟ: ಲೋಕಸಭೆ ಕ್ಷೇತ್ರದ ಚುನಾವಣೆಗಾಗಿ ನಾನಾ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿದ್ದು, ಶುಕ್ರವಾರ ಖ್ಯಾತ ನಟ ಉಪೇಂದ್ರ ಫೀಲ್ಡಿಗಿಳಿದು ಅಭ್ಯರ್ಥಿ ಪರ ಬ್ಯಾಟಿಂಗ್‌ ನಡೆಸಿದರು.

Vijaya Karnataka 13 Apr 2019, 5:00 am
ಬಾಗಲಕೋಟ: ಲೋಕಸಭೆ ಕ್ಷೇತ್ರದ ಚುನಾವಣೆಗಾಗಿ ನಾನಾ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿದ್ದು, ಶುಕ್ರವಾರ ಖ್ಯಾತ ನಟ ಉಪೇಂದ್ರ ಫೀಲ್ಡಿಗಿಳಿದು ಅಭ್ಯರ್ಥಿ ಪರ ಬ್ಯಾಟಿಂಗ್‌ ನಡೆಸಿದರು.
Vijaya Karnataka Web election to the field in star entry
ಚುನಾವಣೆ ಕಣಕ್ಕೆ ತಾರಾ ಮೆರಗು


ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ಮತ ಯಾಚನೆ ಚುರುಕು ಪಡೆಯುತ್ತಿದೆ. ಮನೆ, ಮನೆಗೆ ತಲುಪುವ ಉಮೇದಿಯಲ್ಲಿರುವ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳು ಬೆಳಗ್ಗೆಯಿಂದ ರಾತ್ರಿಯವರೆಗೆ ಬೆವರು ಹರಿಸುತ್ತಿದ್ದಾರೆ.

ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪಿಸಿರುವ ಖ್ಯಾತ ನಟ ಉಪೇಂದ್ರ ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಅಭ್ಯರ್ಥಿ ಶಶಿಕುಮಾರ್‌ ಪರ ಪ್ರಚಾರ ನಡೆಸಿದ ಉಪೇಂದ್ರ ತಮ್ಮದು ವಿಭಿನ್ನ ಪಕ್ಷ ಎಂದು ಹೇಳಿಕೊಂಡರು. 'ರೋಡ್‌ ಶೋ, ಸಭೆ, ಸಮಾರಂಭವನ್ನು ನಾನು ನಡೆಸೋಲ್ಲ' ಎಂದು ಖಡಾಖಂಡಿತವಾಗಿ ಹೇಳಿದ ಉಪೇಂದ್ರ ಪಕ್ಷದ ಕಚೇರಿಗೆ ಭೇಟಿ ನೀಡಿದರು. ನಂತರ ಅಲ್ಲಿದ್ದ ಯುವಕರು, ಮಹಿಳೆಯರಿಗೆ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಎಂದು ಕೇಳಿಕೊಂಡರು. ಪಕ್ಷದ ಸಂಸ್ಥಾಪಕರಾದರೂ ಸಾರ್ವಜನಿಕವಾಗಿ ಅವರು ಮತ ಕೇಳಲಿಲ್ಲ. ಇದರಿಂದಾಗಿ ಉಪೇಂದ್ರ ಅವರನ್ನು ನೋಡಬಹುದು ಎಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆಯಾಯಿತು.

ಕಾಂಗ್ರೆಸ್‌ ಮತ ಯಾಚನೆ

ಚುನಾವಣೆ ಪ್ರಚಾರದಲ್ಲಿ ಒಂದು ಹಂತ ಪೂರೈಸಿರುವ ಕಾಂಗ್ರೆಸ್‌ ಅಭ್ಯರ್ಥಿ ವೀಣಾ ಕಾಶಪ್ಪನವರ ತೇರದಾಳದಲ್ಲಿ ರೋಡ್‌ ಶೋ ನಡೆಸಿದರು. ವೀಣಾ ಅವರಿಗೆ ತೇರದಾಳ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿದ್ದ ಬಸವರಾಜ ಕೊಣ್ಣೂರ ಸಾಥ್‌ ನೀಡಿದರು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಧ್ವಜಗಳನ್ನು ಬೀಸುತ್ತಿದ್ದ ಕಾರ್ಯಕರ್ತರು ಮೈತ್ರಿಯ ಸಂಕೇತ ಸಾರಿದರು. ತೇರದಾಳದಲ್ಲಿ ರೋಡ್‌ ಶೋ ನಡೆಸಿದ ನಂತರ ವೀಣಾ ಮತ ಯಾಚಿಸಿದರು. ಮಾಜಿ ಸಚಿವೆ ಉಮಾಶ್ರೀ ಕೂಡ ರಾರ‍ಯಲಿಯಲ್ಲಿ ಕಾಣಿಸಿಕೊಂಡರು. ವಿಧಾನಪರಿಷತ್‌ ಸದಸ್ಯ ಎಸ್‌.ಆರ್‌.ಪಾಟೀಲ ಇದ್ದರು. ಬಾಗಲಕೋಟದಲ್ಲಿ ವೀಣಾ ಪರ ಬಾಯಕ್ಕ ಮೇಟಿ, ನಾಗರಾಜ ಹದ್ಲಿ ಪ್ರಚಾರ ನಡೆಸಿದರು.

ಸರಣಿ ಸಭೆ

ಈ ಮಧ್ಯೆ ಬಾಗಲಕೋಟದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದು ಸವದಿ, ಶಾಸಕ ಗೋವಿಂದ ಕಾರಜೋಳ ಮೈತ್ರಿ ಪಕ್ಷಗಳ ವಿರುದ್ಧ ಹರಿಹಾಯ್ದರು. ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಶುಕ್ರವಾರ ಬಹಿರಂಗ ಪ್ರಚಾರದ ಬದಲು ಸಭೆಗಳಿಗೆ ಒತ್ತು ನೀಡಿದರು. ಬಾದಾಮಿಯಲ್ಲಿ ಸಮಾನ ಮನಸ್ಕ ಸ್ನೇಹಿತರ ಸಭೆ ನಡೆಸಿ ಚುನಾವಣೆ ಪ್ರಚಾರದ ಬಗ್ಗೆ ಚರ್ಚಿಸಿದರು. ನಂತರ ನಾನಾ ಸಮಾಜಗಳ ಮುಖಂಡರೊಂದಿಗೆ ಸಭೆ ನಡೆಸಿ ಬೆಂಬಲಕ್ಕೆ ಮನವಿ ಮಾಡಿಕೊಂಡರು. ಬಾಗಲಕೋಟದ ವಿದ್ಯಾಗಿರಿ, ನಂದೀಶ್ವರ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶಾಸಕ ವೀರಣ್ಣ ಚರಂತಿಮಠ, ಮುಖಂಡ ಪ್ರಕಾಶ ತಪಶೆಟ್ಟಿ ಪಾದಯಾತ್ರೆ ಮೂಲಕ ಮತ ಯಾಚಿಸಿದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್‌ ಏ.13 ರಂದು ಜಮಖಂಡಿಯಲ್ಲಿ ಪ್ರಬುದ್ಧರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

21ಕ್ಕೆ ಅಮಿತ್‌ ಶಾ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಏ.21ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಬಾದಾಮಿ, ಗುಳೇದಗುಡ್ಡಗಳಲ್ಲಿ ರೋಡ್‌ ಶೋ ನಡೆಸಲಿರುವ ಶಾ ನಂತರ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬಹಿರಂಗ ಪ್ರಚಾರದ ಕೊನೆ ದಿನವಾದ ಏ.21ರಂದು ಜಿಲ್ಲೆಗೆ ಬರಲಿರುವ ಶಾ ಮತಗಳಿಕೆ ಹೆಚ್ಚಿಸುವ ಯತ್ನ ನಡೆಸಲಿದ್ದಾರೆ. ಶಾಸಕ ಶ್ರೀರಾಮುಲು ಕೂಡ ಅಂದು ಬಾದಾಮಿ, ಗುಳೇದಗುಡ್ಡಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ