ಆ್ಯಪ್ನಗರ

ಮಹಾ ಬಿಡದಿದ್ದರೂ ಬಂತು ಜೀವಜಲ !

ವಿಕ ವಿಶೇಷ ಬಾಗಲಕೋಟ ನೀರು ಬಿಡಿ ಎಂದು ಗೋಗರೆದರೂ ಮಹಾರಾಷ್ಟ್ರ ನೀರು ಬಿಡಲಿಲ್ಲ, ಆದರೆ ನಿಸರ್ಗವೇ ಜಿಲ್ಲೆಯ ಜನರ ನೀರಿನ ದಾಹ ನೀಗಿಸಿದೆ, ನದಿಗಳಲ್ಲಿ ನೀರು ಹರಿದುಬಂದಿದೆ.

Vijaya Karnataka 13 Jul 2019, 5:00 am
ವಿಕ ವಿಶೇಷ ಬಾಗಲಕೋಟ
Vijaya Karnataka Web great water but it is life
ಮಹಾ ಬಿಡದಿದ್ದರೂ ಬಂತು ಜೀವಜಲ !


ನೀರು ಬಿಡಿ ಎಂದು ಗೋಗರೆದರೂ ಮಹಾರಾಷ್ಟ್ರ ನೀರು ಬಿಡಲಿಲ್ಲ, ಆದರೆ ನಿಸರ್ಗವೇ ಜಿಲ್ಲೆಯ ಜನರ ನೀರಿನ ದಾಹ ನೀಗಿಸಿದೆ, ನದಿಗಳಲ್ಲಿ ನೀರು ಹರಿದುಬಂದಿದೆ.

ಕುಡಿಯಲು ನೀರಿಲ್ಲದೇ ಹಾಹಾಕಾರದಲ್ಲಿದ್ದ ಜಮಖಂಡಿ ತಾಲೂಕಿನಲ್ಲಿ ಕೃಷ್ಣಾ ನದಿಗೆ ನೀರು ಬಿಡುವಂತೆ ಕೇಳಿಕೊಂಡರೂ ಮಹಾರಾಷ್ಟ್ರ ಒಪ್ಪಲಿಲ್ಲ. ಒಪ್ಪಂದ ಮಾಡಿಕೊಂಡು ನೀರು ಬಿಡುತ್ತೇವೆ ಎಂದು ಮಹಾ ಹಠ ಹಿಡಿದರೆ ರಾಜ್ಯದ ಜನಪ್ರತಿನಿಧಿಗಳ ನಿರಾಸಕ್ತಿಯಿಂದ ನೀರು ಬರಲಿಲ್ಲ. ಮಹಾರಾಷ್ಟ್ರ ಹಾಗೂ ಬೆಳಗಾವಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸದ್ಯ ಕೃಷ್ಣಾ ಹಾಗೂ ಘಟಪ್ರಭಾ ನದಿಗಳು ತುಂಬಿ ಹರಿಯುತ್ತಿವೆ.

ಜಿಲ್ಲೆಯ ಜಮಖಂಡಿ ತಾಲೂಕಿನ ನದಿ ಪಾತ್ರದ ಜನರು ಪ್ರತಿ ದಿನ ನದಿ ದಡಕ್ಕೆ ಆಗಮಿಸಿ ನೀರು ಬರುತ್ತಿರುವುದನ್ನು ನೋಡಿ ಸಂಭ್ರಮಿಸುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ನೀರು ಕೊಡಿ ಎಂಬ ಬೇಡಿಕೆಗೆ ಸರಕಾರಗಳು ಮಣಿಯಲಿಲ್ಲ. ನಿಸರ್ಗವೇ ಮಳೆಯ ಮೂಲಕ ಜನರ ಬೇಡಿಕೆ ಈಡೇರಿಸಿದೆ. ಕೃಷ್ಣಾ ನದಿ ಪಾತ್ರದಲ್ಲಿ ನೀರು ಹರಿದಿರುವುದಕ್ಕೆ ಜನರಿಗಿಂತ ಜನಪ್ರತಿನಿಧಿಗಳೇ ಸಮಾಧಾನಪಟ್ಟುಕೊಳ್ಳುತ್ತಿದ್ದಾರೆ. ಅಕಸ್ಮಾತ್‌ ಮಳೆಯಾಗದಿದ್ದರೆ ಮಹಾರಾಷ್ಟ್ರದೊಂದಿಗೆ ಸಂಘರ್ಷ ನಡೆಸುವುದು ತಪ್ಪಿತು ಎನ್ನುವುದು ಅವರ ಚಿಂತನೆಯಾಗಿರಬಹುದು ಎನ್ನುತ್ತಾರೆ ಜನರು. ಇದೀಗ ಕೊಯ್ನಾ ಜಲಾಶಯ ಭರ್ತಿಯಾದರೆ ಮಹಾರಾಷ್ಟ್ರ ಇನ್ನಷ್ಟು ನೀರು ಹರಿಸಲಿರುವುದು ನಿಶ್ಚಿತವಾಗಲಿದೆ.

ಮಹಾ ಮಳೆ

ಮಹಾರಾಷ್ಟ್ರದಲ್ಲಿ ಕೃಷ್ಣಾ ನದಿ ಉಗಮವಾಗುವ ಮಹಾಬಳೇಶ್ವರ, ಕೊಯ್ನಾ ಜಲಾಶಯ ಪ್ರದೇಶ, ರಾಜಾಪುರ ಬ್ಯಾರೇಜ್‌ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಮಹಾರಾಷ್ಟ್ರದ ಹಲವೆಡೆ ಸೇತುವೆಗಳು ನೀರಿನಲ್ಲಿ ಮುಳುಗಿದ್ದು ನದಿ ಪಾತ್ರದಲ್ಲಿ ನೀರು ಆವರಿಸಿದೆ. ಬೆಳಗಾವಿ ಜಿಲ್ಲೆಯ ಕುಡಚಿ ಸೇತುವೆ ಕೂಡ ಮುಳುಗಡೆಯಾಗಿದ್ದು ಹಲ್ಯಾಳ ಸೇತುವೆ ಮೂಲಕ ಅಪಾರ ಪ್ರಮಾಣದ ನೀರು ಜಿಲ್ಲೆ ಪ್ರವೇಶಿಸುತ್ತಿದೆ. ಪ್ರತಿ ದಿನ ಅಂದಾಜು 1 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಹಿಪ್ಪರಗಿ ಬ್ಯಾರೇಜ್‌ನಲ್ಲಿ 2.62 ಟಿಂಎಸಿಯಷ್ಟು ನೀರು ಸಂಗ್ರಹಗೊಂಡಿದೆ. ಬ್ಯಾರೇಜ್‌ನಲ್ಲಿ ಗರಿಷ್ಠ 6 ಟಿಎಂಸಿಯಷ್ಟು ನೀರು ಸಂಗ್ರಹಿಸಬಹುದಾಗಿದೆ. ಭಾರಿ ಮಳೆಯಿಂದಾಗಿ ನೀರಿನ ಪ್ರಮಾಣ ಹೆಚ್ಚಾದರೆ ಜಮಖಂಡಿ ತಾಲೂಕಿನ 11 ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ಉದ್ಭವಿಸಲಿದೆ. ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಕುಡಿವ ನೀರು ಹಾಗೂ ಕೃಷಿಗೆ ಉಂಟಾಗಿದ್ದ ಹಾಹಾಕಾರ ಶಮನಗೊಂಡಂತಾಗಿದೆ. ಬಾಗಲಕೋಟ ಹೊರವಲಯದಲ್ಲಿ ಹಿನ್ನೀರಿನ ಪ್ರಮಾಣ ಹೆಚ್ಚಾಗಿದ್ದು, ಸಿಮೆಂಟ್‌ ಕ್ವಾರಿಗಳಿಗೆ ಇನ್ನೆರಡು ದಿನಗಳಲ್ಲಿ ನೀರು ಹರಿದುಬರುವ ಸಾಧ್ಯತೆಯಿದೆ.

ಬೆಳಗಾವಿ ಕೊಡುಗೆ

ಮುಧೋಳ ತಾಲೂಕಿನ ಘಟಪ್ರಭಾ ನದಿಗೆ ಬೆಳಗಾವಿ ಜಿಲ್ಲೆಯಿಂದ ನೀರು ಬರುತ್ತಿರುವುದರಿಂದ ನದಿ ಮೈದುಂಬಿ ಹರಿಯುತ್ತಿದೆ. ಹಿಡಕಲ್‌ ಜಲಾಶಯದ ಪಾತ್ರದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ನದಿಗೆ ನೀರು ಹರಿಯುತ್ತಿದೆ. ಮುಧೋಳ ತಾಲೂಕಿನ ಗಡಿಗೆ ಅಂಟಿಕೊಂಡ ಬೆಳಗಾವಿ ಜಿಲ್ಲೆಯಲ್ಲಿ ಸೇತುವೆಗಳು ನೀರಿನಲ್ಲಿವೆ. ನಿರಂತರ ನೀರಿನ ಹರಿವು ಮುಂದುವರಿದರೆ ತಾಲೂಕಿನ ಐದು ಗ್ರಾಮಗಳಿಗೆ ನೀರು ನುಗ್ಗುತ್ತದೆ. ನದಿ ಮೈದುಂಬಿ ಹರಿಯುತ್ತಿರುವುದರಿಂದ ಕುಡಿವ ನೀರಿನ ಸಮಸ್ಯೆ ನೀಗಲಿದ್ದು, ಅಂತರ್ಜಲವೂ ಹೆಚ್ಚಾಗಲಿದೆ. ಆದರೆ ಬಾದಾಮಿ ತಾಲೂಕಿನ ಮಲಪ್ರಭಾ ನದಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಹರಿವು ಕಂಡುಬಂದಿಲ್ಲ. ಸದ್ಯ ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರದ ಮಳೆಯಿಂದ ನದಿಗಳು ಭರ್ತಿಯಾಗಿವೆ !.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ