ಆ್ಯಪ್ನಗರ

Sugarcane Tractor: ಮುಧೋಳದಲ್ಲಿ ರಸ್ತೆಗಿಳಿದ ಕಬ್ಬಿನ ಟ್ರ್ಯಾಕ್ಟರ್‌ಗಳು; ಎಲ್ಲೆಲ್ಲೂ ಟ್ರಾಫಿಕ್‌ ಜಾಮ್‌

ದರ ಸಮರ ಮುಗಿದ ಬಳಿಕ ಬಾಗಲಕೋಟೆ ಜಿಲ್ಲೆಯಲ್ಲಿ 13 ಸಕ್ಕರೆ ಕಾರ್ಖಾನೆಗಳು ಆರಂಭವಾಗಿದ್ದು, ಸಕ್ಕರೆ ಕಾರ್ಖಾನೆಗಳಿಂದಲೂ ನಿತ್ಯವೂ ಲಕ್ಷಾಂತರ ಟನ್‌ ಕಬ್ಬು ನುರಿಸುವ ಯತ್ನಗಳು ನಡೆದಿವೆ. ಈ ಹಿನ್ನೆಲೆ ಕಬ್ಬು ತುಂಬಿದ ಟ್ರಾಕ್ಟರ್‌ಗಳು ರಸ್ತೆಗೆ ಇಳಿದಿವೆ. ಇದರಿಂದ ಮುಧೋಳ ತಾಲೂಕಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ವಾಹನ ಸವಾರರು ಪರದಾಡಬೇಕಾಗಿದೆ.

Edited byಅವಿನಾಶ ವಗರನಾಳ | Vijaya Karnataka Web 26 Nov 2022, 6:28 am

ಹೈಲೈಟ್ಸ್‌:


  • ಬಾಗಲಕೋಟೆ ಜಿಲ್ಲೆಯಲ್ಲಿ 13 ಸಕ್ಕರೆ ಕಾರ್ಖಾನೆಗಳು ಆರಂಭ
  • ಮುಧೋಳದಲ್ಲಿ ಕಬ್ಬು ತುಂಬಿದ ಟ್ರಾಕ್ಟರ್‌ಗಳು, ಟ್ರಾಫಿಕ್‌ ಜಾಮ್‌
  • ನಿಯಮ ಪಾಲಿಸಲು ಪೊಲೀಸ್‌ ಇಲಾಖೆಯಿಂದ ಸೂಚನೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Sugarcane tractors
ಮುಧೋಳ (ಬಾಗಲಕೋಟೆ): ಕಾರ್ಖಾನೆ ಹಾಗೂ ರೈತರ ನಡುವಿನ ದರ ಸಮರ ಮುಗಿದ ಬಳಿಕ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳು ರಸ್ತೆಗೆ ಲಗ್ಗೆ ಇಡುತ್ತಿದ್ದು, ಜನ ಹಾಗೂ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಎಲ್ಲೆಲ್ಲೂ ಟ್ರಾಫಿಕ್‌ ಜಾಮ್‌ ಸೃಷ್ಟಿಯಾಗುತ್ತಿದೆ.
ಕೊನೆಗೂ ಪ್ರಸ್ತಕ ವರ್ಷದ ಕಬ್ಬಿನ ಹಂಗಾಮು ಆರಂಭಗೊಂಡಿದೆ. ಕಬ್ಬಿಗೆ ಸೂಕ್ತ ಬೆಲೆ ನೀಡಲು ಆಗ್ರಹಿಸಿ 53 ದಿನಗಳಿಂದಲೂ ರೈತರು ಪ್ರತಿಭಟನೆಯಲ್ಲಿ ತೊಡಗಿದ್ದರು. ಸರಕಾರದಿಂದ ತಮ್ಮ ಬೇಡಿಕೆ ಈಡೇರಿದ ಬಳಿಕ ಕಾರ್ಖಾನೆಗೆ ಕಬ್ಬು ಸಾಗಿಸಲು ಮುಂದಾಗಿದ್ದಾರೆ. ಪರಿಣಾಮವಾಗಿ ಈಗ ತಾಲೂಕಿನ ರಸ್ತೆಗಳಲ್ಲಿಕಬ್ಬಿನ ಟ್ರ್ಯಾಕ್ಟರ್‌ಗಳದ್ದೇ ಹವಾ.

13 ಸಕ್ಕರೆ ಕಾರ್ಖಾನೆ ಆರಂಭ!
ಬಾಗಲಕೋಟೆ ಜಿಲ್ಲೆಯಲ್ಲಿ 13 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಲು ಆರಂಭಿಸಿವೆ. ಕಬ್ಬು ಕಟಾವು, ಲಾರಿ, ಟ್ರ್ಯಾಕ್ಟರ್‌, ಎತ್ತಿನ ಬಂಡಿಗಳ ಮೂಲಕ ಕಬ್ಬು ಸಾಗಣೆ ಜೋರಾಗಿ ನಡೆದಿದೆ. ಸಕ್ಕರೆ ಕಾರ್ಖಾನೆಗಳಿಂದಲೂ ನಿತ್ಯವೂ ಲಕ್ಷಾಂತರ ಟನ್‌ ಕಬ್ಬು ನುರಿಸುವ ಯತ್ನಗಳು ನಡೆದಿವೆ. ಅಂದಾಜು ನಾಲ್ಕು ತಿಂಗಳು ಕಬ್ಬಿನ ಹಂಗಾಮು ಮುಂದುವರಿಯಲಿದೆ. ಇದರಿಂದ ರಸ್ತೆಗಳಲ್ಲಿ ಜನರ ಸಂಚಾರ ಸ್ವಲ್ಪ ಕಷ್ಟವಾಗಿದೆ. ಅದರಲ್ಲೂ ಮುಧೋಳ ನಗರದಲ್ಲಿ ಕಬ್ಬು ಹಂಗಾಮು ವೇಳೆ ಸಂಚಾರ ಬಲು ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ.

ಹೆಚ್ಚಿದ ಸಂಚಾರ:
ಕಬ್ಬಿನ ಪಡದಿಂದ ರಸ್ತೆಗೆ ವಾಹನಗಳು ಇಳಿಯುತ್ತಿರುವುದರಿಂದ ವಾಹನಗಳ ದಟ್ಟಣೆಯಾಗುತ್ತಿದೆ. ಪೊಲೀಸ್‌ ಇಲಾಖೆ ಕಬ್ಬು ಪೂರೈಕೆದಾರರಿಗೆ ರಸ್ತೆ ನಿಯಮ ಜಾರಿಗೊಳಿಸಿದೆ. ಅದರಲ್ಲಿ ಕೆಲವರು ನಿಯಮ ಪಾಲನೆ ಮಾಡುತ್ತಿಲ್ಲಎಂಬ ಆರೋಪಗಳಿವೆ. ವಾಹನಗಳ ದಟ್ಟಣೆಯಿಂದ ಚಾಲಕರು ನಿಯಮ ಪಾಲನೆಯೊಂದಿಗೆ ಸಂಯಮದಿಂದ ಸಂಚರಿಸಬೇಕಾದ ಕುರಿತು ಪೊಲೀಸರು ತಿಳಿವಳಿಕೆ ಮೂಡಿಸುತ್ತಿದ್ದಾರೆ.

ಉಪ ಉತ್ಪನ್ನದಲ್ಲಿ ರೈತರಿಗೆ ಲಾಭಾಂಶ ಹಂಚಿಕೆಗೆ ಸಕ್ಕರೆ ಕಾರ್ಖಾನೆಗಳಿಂದ ಉತ್ತಮ ಸ್ಪಂದನೆ - ಮುನೇನಕೊಪ್ಪ
ಪೊಲೀಸ್‌ ಸೂಚನೆ
ಒಂದೆಡೆ ಕಬ್ಬಿನ ಟ್ರ್ಯಾಕ್ಟರ್‌ಗಳ ಸಾಲು ಇನ್ನೊಂದೆಡೆ ಬೈಕ್‌ ಸವಾರರು, ಮಿನಿ ಲಾರಿ, ಟಂಟಂ, ರಿಕ್ಷಾ, ಬಸ್‌ಗಳ ಪ್ರಯಾಣವೂ ನಡೆಯಬೇಕಿದೆ. ಹೀಗಾಗಿ ಸುರಕ್ಷಿತ ಸಂಚಾರಕ್ಕೆ ಆದ್ಯತೆ ನೀಡಬೇಕಿದೆ. ಕಬ್ಬು ತುಂಬಿದ ವಾಹನಗಳು ನಿಧಾನವಾಗಿ ಸಂಚರಿಸಬೇಕು. ಓವರ್‌ಟೇಕ್‌ ಮಾಡಬಾರದು. ಅತಿಯಾದ ಶಬ್ದ ಬಳಕೆ ಹಾಗೂ ಟೇಪ್‌ ರೆಕಾರ್ಡ್‌ಗೆ ಅವಕಾಶ ನೀಡಬಾರದು ಎಂದು ಪೊಲೀಸರು ಈಗಾಗಲೇ ಮನವಿ ಮಾಡಿದ್ದಾರೆ.

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಮೊದಲ ದಿನವೇ 3 ಕ್ವಿಂಟಾಲ್‌ ಬೆಲ್ಲ ಉತ್ಪಾದನೆ
ಕಬ್ಬಿನ ಹಂಗಾಮು ಆರಂಭಗೊಂಡಿದೆ. ರಸ್ತೆಗೆ ಇಳಿದ ಬಳಿಕ ಚಾಲಕರು ಜಾಗೃತಿಯಿಂದ ವಾಹನ ಓಡಿಸಬೇಕು. ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ರಿಪ್ಲೆಕ್ಟರ್‌ ಅಳವಡಿಸಿ ಅನಾಹುತಗಳನ್ನು ತಪ್ಪಿಸಬೇಕು. ಇದಕ್ಕೆ ತಪ್ಪಿದಲ್ಲಿಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಈಗಾಗಲೇ ಕಾರ್ಖಾನೆಗಳ ಮಾಲೀಕರ ಮೂಲಕ ಸಂದೇಶ ನೀಡಲಾಗಿದೆ ಎಂದು ಮುಧೋಳ ಸಿಪಿಐ ಅಯ್ಯನಗೌಡ ಪಾಟೀಲ್‌ ಹೇಳಿದ್ದಾರೆ.

ಕಬ್ಬು ಬೆಳೆಗಾರರಿಗೆ ನೆರವು ನೀಡಲು ಆಗ್ರಹ: ಡಿಸೆಂಬರ್ 12ರಂದು ಸುವರ್ಣಸೌಧಕ್ಕೆ ಮುತ್ತಿಗೆ: ರೈತ ಸಂಘ ಎಚ್ಚರಿಕೆ
ಸಾರ್ವಜನಿಕರ ಪ್ರಯಾಣದ ದೃಷ್ಟಿಯಿಂದ ಇತಿಮಿತಿಯಲ್ಲಿಕಬ್ಬು ತುಂಬಿದ ವಾಹನಗಳ ಚಾಲನೆ ಮಾಡಬೇಕು. ರೈತರು ಹಾಗೂ ಚಾಲಕರು ತಮ್ಮ ಜವಾಬ್ದಾರಿ ಮರೆಯಬಾರದು ಎಂದು ಮುಧೋಳದ ರೈತ ಸಂಘದ ಮುಖಂಡ ವೆಂಕಣ್ಣ ಮಳಲಿ ಹೇಳಿದ್ದಾರೆ. ಇನ್ನು, ಕಬ್ಬಿನ ದರ ಹೆಚ್ಚಳಕ್ಕಾಗಿ ರೈತರು ನಿರಂತರವಾಗಿ ಬಾಗಲಕೋಟೆ ಸೇರಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ