ಆ್ಯಪ್ನಗರ

ಕನಸಿನ ಸೌಧಕ್ಕೆ ಕೋವಿಡ್‌ ವಿಘ್ನ

ಮುರಿದುಬಿದ್ದ ಕನಸಿನ ಸೌಧವನ್ನು ಮತ್ತೆ ಕಟ್ಟಿಕೊಳ್ಳಲು ಸರಕಾರ ಹಣ ನೀಡಿದರೂ ಕೋವಿಡ್‌ನಿಂದ ಆ ಕನಸೂ ಭಗ್ನವಾಗಿದೆ.

Vijaya Karnataka Web 18 May 2020, 5:00 am
ರವಿರಾಜ್‌ ಆರ್‌.ಗಲಗಲಿ ಬಾಗಲಕೋಟೆ : ಮುರಿದುಬಿದ್ದ ಕನಸಿನ ಸೌಧವನ್ನು ಮತ್ತೆ ಕಟ್ಟಿಕೊಳ್ಳಲು ಸರಕಾರ ಹಣ ನೀಡಿದರೂ ಕೋವಿಡ್‌ನಿಂದ ಆ ಕನಸೂ ಭಗ್ನವಾಗಿದೆ.
Vijaya Karnataka Web 062538HOME-BGK-13_41


2019ರ ಆಗಸ್ಟ್‌ ನಿಂದ ಅಕ್ಟೋಬರ್‌ವರೆಗೆ ನದಿಗಳ ಪ್ರವಾಹದಿಂದ ಬದುಕಿನ ಸೂರು ಕಳೆದುಕೊಂಡ ಜಿಲ್ಲೆಯ ಸಂತ್ರಸ್ತರ ಸ್ಥಿತಿಯಿದು. ಜಿಲ್ಲೆಯಲ್ಲಿಘಟಪ್ರಭಾ, ಕೃಷ್ಣಾ, ಮಲಪ್ರಭಾ ನದಿಗಳು ತುಂಬಿ ಹರಿದ ಪರಿಣಾಮ ಹಾಗೂ ಮಹಾರಾಷ್ಟ್ರದಿಂದ ನದಿಗಳಿಗೆ ಬಿಡಲಾದ ನೀರು ಜನರ ಜೀವನವನ್ನೇ ಮುಳುಗಿಸಿತು.

ಬದುಕೇ ದುರ್ಭರ
ಪ್ರವಾಹದಿಂದಾಗಿ ಜಿಲ್ಲೆಯ 6 ತಾಲೂಕುಗಳ 198ಗ್ರಾಮಗಳ ಅಂದಾಜು 1ಲಕ್ಷ ಜನರು ಪ್ರವಾಹದಿಂದ ಬಾಧಿತರಾಗಿದ್ದರು. ಸರಕಾರದ ಸಮೀಕ್ಷೆ ಪ್ರಕಾರ 12, 087ಮನೆಗಳು ಹಾನಿಗೀಡಾಗಿದ್ದವು. ಈ ಪೈಕಿ ಸಂಪೂರ್ಣ ಹಾನಿ, ಭಾಗಶಃ ಹಾನಿ ಹಾಗೂ ದುರಸ್ತಿ ಆಧಾರದಲ್ಲಿಸರಕಾರ ಮನೆಗಳಿಗೆ ಪರಿಹಾರ ಘೋಷಿಸಿತ್ತು. ಸರಕಾರ ಪರಿಹಾರ ನೀಡಿದರೂ ಮನೆಗಳ ನಿರ್ಮಾಣ ಕಾರ್ಯ ನಿಧಾನಗತಿಯಲ್ಲೇ ಸಾಗಿತ್ತು. ಎ ವಿಭಾಗದಲ್ಲಿ574ಮನೆಗಳು, ಬಿ ವಿಭಾಗದಲ್ಲಿ2, 643 ಮನೆಗಳ ನಿರ್ಮಾಣವಾಗಬೇಕಿದೆ.

ಉದಾರಣೆಯೇ ಇಲ್ಲ:
ಸರಕಾರ ಮನೆಗಳ ನಿರ್ಮಾಣದ ಆಧಾರದಲ್ಲಿಕಂತಿನ ಮೇಲೆ ಹಣ ಬಿಡುಗಡೆಗೊಳಿಸುತ್ತದೆ. ಎ ವಿಭಾಗದಲ್ಲಿ5 ಲಕ್ಷ ರೂ. ಪರಿಹಾರದ ಮೊತ್ತ ತಲಾ 1ಲಕ್ಷ ರೂ.ನಂತೆ ಪಾವತಿಯಾಗುತ್ತದೆ. ಚಾವಣಿ ಪೂರ್ಣಗೊಂಡ ನಂತರ ಕೊನೆ ಕಂತು ನೀಡಲಾಗುತ್ತದೆ. ಬಿ ವಿಭಾಗದಲ್ಲಿದುರಸ್ತಿಗಾದರೆ 3ಲಕ್ಷ ರೂ. ನೀಡಲಾಗುತ್ತಿದೆ. ಈವರೆಗೆ ಮನೆಗಳನ್ನು ಸಂಪೂರ್ಣವಾಗಿ ನಿರ್ಮಿಸಿದ ಉದಾಹರಣೆಯಿಲ್ಲ.

ಕಾರ್ಮಿಕರು ಬರೋದಿಲ್ಲ:
ಬಹುತೇಕ ಗ್ರಾಮಗಳಲ್ಲಿಸಂತ್ರಸ್ತರ ಮನೆಗಳು ನಿರ್ಮಾಣ ಹಂತದಲ್ಲಿಯೇ ಇವೆ. ಮಳೆಗಾಲದೊಳಗೆ ಮನೆ ಕಟ್ಟಿ ಮುಗಿಸಬೇಕು ಎಂದುಕೊಂಡಿದ್ದ ಸಂತ್ರಸ್ತರಿಗೆ ಕೋವಿಡ್‌ ವಿಘ್ನ ಕಾಡಿದೆ. ಕಳೆದ ಒಂದೂವರೆ ತಿಂಗಳಿನಿಂದ ಮನೆಗಳ ನಿರ್ಮಾಣ ಕಾರ್ಯ ನಡೆದೇ ಇಲ್ಲ. ಗೌಂಡಿಗಳು, ಕಾರ್ಮಿಕರ ಕೊರತೆ, ಗ್ರಾಮಗಳಲ್ಲಿಜನರು ಸಂಚಾರಕ್ಕೆ ಸ್ವಯಂ ನಿರ್ಬಂಧ ಹೇರಿಕೊಂಡ ಕಾರಣ ಕಾಮಗಾರಿಗೆ ಅವಕಾಶ ದೊರೆತಿಲ್ಲ. ಸಿಮೆಂಟ್‌, ಖಡಿ ಹಾಗೂ ಉಸುಕಿನ ಕೊರತೆ ಜನರನ್ನು ಹೈರಾಣಾಗಿಸಿದೆ.

ಇತ್ತ ಮನೆಗಳನ್ನು ಭಾಗಶ: ಪೂರ್ಣಗೊಳಿಸಿದ್ದರೂ ಮೂರನೇ ಕಂತಿನ ಹಣ ಕೆಲವರಿಗೆ ಬಿಡುಗಡೆಯಾಗಲಿಲ್ಲ. ಕೋವಿಡ್‌ ಕರ್ತವ್ಯದಲ್ಲಿಅಧಿಕಾರಿ, ಸಿಬ್ಬಂದಿ ಸಕ್ರಿಯರಾಗಿದ್ದರಿಂದ ಮನೆಗಳ ನಿರ್ಮಾಣದ ಪ್ರಗತಿ ಪರಿಶೀಲನೆಯಾಗಿಲ್ಲ. ಪಿಡಿಒ ಹಾಗೂ ಅಧಿಕಾರಿಗಳು ಮನೆ ನಿರ್ಮಾಣ ಹಂತದ ಫೋಟೊ ತೆಗೆದು ಸಾಫ್ಟ್‌ವೇರ್‌ನಲ್ಲಿದಾಖಲಿಸಿದ ನಂತರವೇ ಮುಂದಿನ ಕಂತಿನ ಹಣ ಬಿಡುಗಡೆಯಾಗುತ್ತದೆ. ಸಂಪೂರ್ಣವಾಗಿ ಮನೆ ಕಳೆದುಕೊಂಡ ಹಲವರು ಬಾಡಿಗೆ ಮನೆಗಳಲ್ಲಿದ್ದರೆ, ಕೆಲವರು ಪಕ್ಕದಲ್ಲಿಯೇ ಶೆಡ್‌ ನಿರ್ಮಿಸಿಕೊಂಡಿದ್ದಾರೆ. ಜಮಖಂಡಿ, ಮುಧೋಳ ತಾಲೂಕಿನಲ್ಲಿಕೆಲವೆಡೆ ಮುರಿದುಬಿದ್ದ ಮನೆ ಪಕ್ಕದಲ್ಲೇ ಶೆಡ್‌ ಕಟ್ಟಿಕೊಂಡವರೂ ಉಂಟು. ಈಗ ಮನೆ ನಿರ್ಮಿಸಲು ಶುರು ಮಾಡಿದರೂ ಮಳೆಗಾಲದವರೆಗೆ ಮನೆಗಳು ಗೃಹ ಪ್ರವೇಶಕ್ಕೆ ಸಿದ್ಧವಾಗುವುದು ಅನುಮಾನ. ಮಳೆ ಬಂದರೆ ಅರ್ಧ ಮರ್ಧ ನಿರ್ಮಾಣಗೊಂಡ ಮನೆಯಲ್ಲೇ ಆಶ್ರಯ ಪಡೆಯುವುದು ಅನಿವಾರ್ಯ !.

ಶೆಡ್‌ನಲ್ಲೇ ಜೀವನ
ಮುಧೋಳ ತಾಲೂಕಿನ ಗುಲಗಾಲ ಜಂಬಗಿ ಗ್ರಾಮದ ರಾಘವೇಂದ್ರ, ಸುಧಾ ಮೇತ್ರಿ ಕುಟುಂಬ ಕಳೆದ 8ತಿಂಗಳಿನಿಂದ ಶೆಡ್‌ನಲ್ಲೇ ವಾಸವಿದೆ. ನೆರೆಯಿಂದಾಗಿ ಸಂಪೂರ್ಣವಾಗಿ ಮನೆ ನಾಶವಾಯಿತು. ಮನೆ ಎದುರಿನಲ್ಲೇ ಶೆಡ್‌ ನಿರ್ಮಿಸಿಕೊಂಡು 9 ಜನ ಆಶ್ರಯ ಪಡೆದುಕೊಂಡಿದ್ದಾರೆ. ಸರಕಾರ ನೀಡಿದ ಮೂರು ಲಕ್ಷ ರೂ.ಪರಿಹಾರದಲ್ಲಿಬಾಗಿಲು ಕೂಡಿಸುವವರೆಗೆ ಕಾಮಗಾರಿ ಮುಗಿದಿದೆ. ಕೊರೊನಾ ಆವರಿಸಿದ್ದರಿಂದ ಗೌಂಡಿ, ಕಾರ್ಮಿಕರು ಕೆಲಸಕ್ಕೆ ಬಂದಿಲ್ಲ. ಸಿಮೆಂಟ್‌, ಖಡಿ ಖರೀದಿ ಸಾಧ್ಯವಾಗಿಲ್ಲ. ಈ ವರ್ಷದ ಮಳೆಗಾಲದಲ್ಲಿಶೆಡ್‌ನಲ್ಲಿಯೇ ಜೀವನ ನಡೆಸಬೇಕು. ''ಇಷ್ಟೊತ್ತಿಗೆ ಮನೀ ಮುಗಿಬೇಕಿತ್ರಿ, ಕೊರೊನಾ ಬಂದದ್ದಕ್ಕ ತಡಾ ಆತು. ಇನ್ನ ಗೌಂಡಿ ಕೆಲಸಕ್ಕ ಬಂದು ನಮ್ಮ ಮನಿ ಮುಗಿಬೇಕಂದ್ರ 6 ತಿಂಗಳು ಬೇಕ್ರಿ' ಎನ್ನುತ್ತಾರೆ ರಾಘವೇಂದ್ರ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ