ಆ್ಯಪ್ನಗರ

ಮುಚಖಂಡಿ ಕೆರೆ ಪಾಲಾಗಿಲ್ಲ ಹಿನ್ನೀರು !

ರವಿರಾಜ್‌ ಆರ್‌.ಗಲಗಲಿ ಬಾಗಲಕೋಟ ಭಾರಿ ಮಳೆಯಿಂದಾಗಿ ಘಟಪ್ರಭಾ ನದಿ ಹಿನ್ನೀರು ನಗರವನ್ನು ಆವರಿಸುತ್ತಿದ್ದು, ಮುಚಖಂಡಿ ಕೆರೆಯನ್ನು ಹಿನ್ನೀರಿನಿಂದ ತುಂಬಿಸುವ ಯೋಜನೆ ಈ ವರ್ಷವಾದರೂ ಕೈಗೂಡಿತೇ ಎಂಬ ಪ್ರಶ್ನೆ ಕಾಡುತ್ತಿದೆ.

Vijaya Karnataka 14 Jul 2019, 5:00 am
ರವಿರಾಜ್‌ ಆರ್‌.ಗಲಗಲಿ ಬಾಗಲಕೋಟ
Vijaya Karnataka Web mukhakhandi lake is not a backwater
ಮುಚಖಂಡಿ ಕೆರೆ ಪಾಲಾಗಿಲ್ಲ ಹಿನ್ನೀರು !


ಭಾರಿ ಮಳೆಯಿಂದಾಗಿ ಘಟಪ್ರಭಾ ನದಿ ಹಿನ್ನೀರು ನಗರವನ್ನು ಆವರಿಸುತ್ತಿದ್ದು, ಮುಚಖಂಡಿ ಕೆರೆಯನ್ನು ಹಿನ್ನೀರಿನಿಂದ ತುಂಬಿಸುವ ಯೋಜನೆ ಈ ವರ್ಷವಾದರೂ ಕೈಗೂಡಿತೇ ಎಂಬ ಪ್ರಶ್ನೆ ಕಾಡುತ್ತಿದೆ.

ನಗರದ ಹೊರವಲಯದ ಮುಚಖಂಡಿಯಲ್ಲಿರುವ ಬೃಹತ್‌ ಕೆರೆ ಒಂದಾನೊಂದು ಕಾಲದಲ್ಲಿ ಕೃಷಿಗೆ ಆಸರೆಯಾಗಿತ್ತು. ಹೂಳು ತುಂಬಿದ ಪರಿಣಾಮ ಕೆರೆಯಲ್ಲಿ ನೀರು ಸಂಗ್ರಹವಾಗದ ಕಾರಣ ರಾಜ್ಯ ಸರಕಾರದಿಂದ ಕೆರೆ ತುಂಬುವ ಯೋಜನೆಯಡಿ ಕಳೆದ ವರ್ಷ ನೀರು ತುಂಬಿಸುವ ಕೆಲಸ ಆರಂಭಿಸಲಾಯಿತು. ಆದರೆ ತಾಂತ್ರಿಕ ಮಾಹಿತಿಯ ಕೊರತೆ, ಹೂಳು ತೆಗೆಯದ ಕಾರಣ ಕೆರೆ ಭರ್ತಿಯಾಗಲಿಲ್ಲ. ಈ ವರ್ಷ ಹಿನ್ನೀರು ಬರುತ್ತಿದ್ದಂತೆ ಕೆರೆ ಭರ್ತಿ ಮಾಡುವ 'ಸಾಹಸ' ತಕ್ಷಣ ಆರಂಭಗೊಳ್ಳಬೇಕಿದೆ.

ವಿಳಂಬವೇ ಕಾರಣ

'ಬೆಂಕಿ ಬಿದ್ದ ಮೇಲೆ ಬಾವಿ ತೋಡಿದರು'ಎಂಬಂತೆ ಮುಚಖಂಡಿ ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲಿ ನೀರು ಕೆರೆ ಪಾಲಾಗಿಲ್ಲ. 2018ರಲ್ಲಿ ಯೋಜನೆ ಆರಂಭಗೊಂಡು ಸಿಮೆಂಟ್‌ ಕ್ವಾರಿಯ ಹಿನ್ನೀರನ್ನು ಕೆರೆಗೆ ಸಾಗಿಸಲು ಪೈಪ್‌ಲೈನ್‌ ಹಾಗೂ ಜಾಕ್‌ವೆಲ್‌ ಅಳವಡಿಸಲಾಯಿತು. ನೀರು ತುಂಬಿಸುವ ಉದ್ದೇಶದಿಂದ ಕೆರೆಯಲ್ಲಿನ ಹೂಳು ತೆಗೆಸಲಾಯಿತು. ಆದರೆ 'ನಾನಾ' ಕಾರಣಗಳಿಂದಾಗಿ ಕೆರೆಯಲ್ಲಿನ ಸಂಪೂರ್ಣ ಹೂಳು ತೆಗೆಯಲಿಲ್ಲ. ಕಾಟಾಚಾರಕ್ಕೆ ಎಂಬಂತೆ ಹೂಳು ತೆಗೆದು ಅಧಿಕಾರಿಗಳು 'ಸಾಧನೆ' ವಿವರಿಸಿದರು. ನೀರು ತುಂಬಿಸುವ ಭಾರಿ ಉದ್ದೇಶದಿಂದ ಆರಂಭಗೊಂಡ ಕಾಮಗಾರಿಗೆ ಪಂಪ್‌ಸೆಟ್‌ ದುರಸ್ತಿ ನೆಪವಾಯಿತು. ಪಂಪ್‌ಸೆಟ್‌ ರಿಪೇರಿ ವಿಳಂಬದ ಕಾರಣವೊಡ್ಡಿದ ನಂತರ ಕೆರೆಯಲ್ಲಿ ನೀರು ತುಂಬಲೇ ಇಲ್ಲ. ಸರಕಾರ ಅಂದಾಜು 12 ಕೋಟಿ ಖರ್ಚು ಮಾಡಿದರೂ ಕೆರೆ ಭರ್ತಿಯಾಗಿಲ್ಲ.

ಬರುತ್ತಿದೆ ಜೀವಜಲ

ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ನಗರದ ಸಿಮೆಂಟ್‌ ಕ್ವಾರಿಯಲ್ಲಿ ಹಿನ್ನೀರಿನ ಪ್ರವೇಶ ಆರಂಭಗೊಂಡಿದೆ. ಜಾಕ್‌ವೆಲ್‌ ಸುತ್ತ ಮುತ್ತ ಕೆಲವೇ ದಿನಗಳಲ್ಲಿ ನೀರು ಮೈದುಂಬಲಿದೆ. ಇದೇ ಅವಕಾಶ ಬಳಸಿಕೊಂಡು ನೀರು ತುಂಬುವ ಪ್ರಕ್ರಿಯೆ ಆರಂಭಿಸಿದರೆ ಕೆರೆಯಲ್ಲಿ ಅರ್ಧದಷ್ಟಾದರೂ ನೀರು ಕಾಣಬಹುದು. 1882ರಲ್ಲಿ ಬ್ರಿಟಿಷರು ನಿರ್ಮಿಸಿದ ಮುಚಖಂಡಿ ಕೆರೆ ಅಂದಾಜು 700 ಎಕರೆಯಷ್ಟಿದ್ದು, 1 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸುತ್ತದೆ. ಕೆರೆ ಅಂದಾಜು 0.58 ಟಿಎಂಸಿ ನೀರು ಸಂಗ್ರಹಿಸುತ್ತದೆ. ಕೆರೆಯ ನಿರ್ವಹಣೆಯನ್ನು ಕೈಗೊಳ್ಳದೇ ಇರುವುದರಿಂದ ಅಪಾರ ಪ್ರಮಾಣದಲ್ಲಿ ಹೂಳು ತುಂಬಿ ನಿಂತಿದೆ. ಕನಿಷ್ಠ ಹೂಳು ತೆಗೆದ ಪ್ರದೇಶದಲ್ಲಾದರೂ ನೀರು ಸಂಗ್ರಹಗೊಂಡರೆ ಹಳೆಯ ಬಾಗಲಕೋಟ, ನವನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಹೆಚ್ಚಾಗಲಿದೆ.

ಕೆರೆಯಲ್ಲಿ ನೀರು ಸಂಗ್ರಹಗೊಂಡರೆ ಸೌಂದರ್ಯೀಕರಣ ಯೋಜನೆಯ ಮೂಲಕ ಪ್ರವಾಸಿ ತಾಣವನ್ನಾಗಿಸಬಹುದಾಗಿದೆ. ಕೆರೆ ಪಕ್ಕದಲ್ಲಿರುವ ವೀರಭದ್ರೇಶ್ವರ ದೇವಸ್ಥಾನ ಈ ಭಾಗದಲ್ಲಿ ಖ್ಯಾತಿ ಪಡೆದಿದೆ. ಸೌಂದರ್ಯೀಕರಣ ಕಾಮಗಾರಿಗಾಗಿ ಸರಕಾರ 10 ಕೋಟಿ ರೂ. ಯೋಜನೆ ಸಿದ್ಧಪಡಿಸಿದ್ದು, ಇನ್ನೂ ಆರಂಭವಾಗಿಲ್ಲ. ಈ ವರ್ಷವಾದರೂ ಮುಚಖಂಡಿ ಕೆರೆಯಲ್ಲಿ ನೀರು ನೋಡಬೇಕು ಎಂಬ ಜನರ ಆಸೆಗೆ ಅಧಿಕಾರಿಗಳು ಕೈಜೋಡಿಸಬೇಕಿದೆ.

ಕೆರೆ ತುಂಬಿಸುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜಾಕ್‌ವೆಲ್‌ ಬಳಿ ಸಮರ್ಪಕ ನೀರು ಸಂಗ್ರಹಗೊಳ್ಳುತ್ತಿದ್ದಂತೆ ಪಂಪ್‌ ಮೂಲಕ ನೀರು ಸಾಗಿಸಿ ಕೆರೆಯಲ್ಲಿ ಬಿಡಲಾಗುತ್ತದೆ.
-ವೀರಣ್ಣ ಚರಂತಿಮಠ, ಶಾಸಕ

ಕೆರೆಗೆ ಈ ವರ್ಷ ನೀರು ತುಂಬಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಪಂಪ್‌ಸೆಟ್‌ಗಳನ್ನು ಸರ್ವಿಸಿಂಗ್‌ ಮಾಡಿಸಿ ಸಜ್ಜುಗೊಳಿಸಲಾಗಿದೆ. ಹಿನ್ನೀರು ಸಂಗ್ರಹಗೊಳ್ಳುತ್ತಿದ್ದಂತೆ ನೀರು ಭರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ.
-ಎಸ್‌.ಎಂ.ಹೇರಲಗಿ, ಎಇಇ, ಸಣ್ಣ ನೀರಾವರಿ ಇಲಾಖೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ