ಆ್ಯಪ್ನಗರ

ಪಂಚಮಸಾಲಿ ಮೀಸಲಾತಿ: ದೆಹಲಿಯಲ್ಲಿ ಸಮಯ ನಿಗದಿಪಡಿಸಿ ಚರ್ಚೆಗೆ ಅವಕಾಶ ಮಾಡಿಕೊಡುವೆ -‌ ನಿರಾಣಿ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಸಂಬಂಧ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಕಿದ್ದ ಸವಾಲಿಗೆ ಪ್ರತಿಕ್ರಿಯೆ ನೀಡಿದ ಮುರುಗೇಶ್‌ ನಿರಾಣಿ, ದೆಹಲಿಯಲ್ಲಿ ಸಮಯ ನಿಗದಿಪಡಿಸಿ ಚರ್ಚೆಗೆ ಅವಕಾಶ ಮಾಡಿಕೊಡುವೆ ಎಂದು ಭರವಸೆ ನೀಡಿದರು.

Vijaya Karnataka 16 Jan 2021, 5:31 pm
ಬಾಗಲಕೋಟೆ: ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸಮಯ ನಿಗದಿಪಡಿಸಿ ಚರ್ಚೆಗೆ ಅವಕಾಶ ಮಾಡಿಕೊಡುವೆ ಎಂದು ನೂತನ ಸಚಿವ ಮುರುಗೇಶ್‌ ನಿರಾಣಿ ಭರವಸೆ ನೀಡಿದ್ದಾರೆ.
Vijaya Karnataka Web Murugesh Nirani
ಸಂಗ್ರಹ ಚಿತ್ರ


ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಬಳಿಯ ಕೇದಾರನಾಥ ಸಕ್ಕರೆ ಕಾರ್ಖಾನೆಯಲ್ಲಿ ಮಾತನಾಡಿದ ಅವರು, ‘ಅಮಿತ್ ಶಾ ಭೇಟಿ ಮಾಡಿಸಲಿ’ ಎಂಬ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸವಾಲಿಗೆ ಈ ಪ್ರತಿಕ್ರಿಯೆ ನೀಡಿದರು. ಸ್ವಾಮೀಜಿ ಸವಾಲನ್ನು ಸ್ವೀಕಾರವೂ ಮಾಡೋದಿಲ್ಲ. ತಿರಸ್ಕಾರನೂ ಮಾಡೋದಿಲ್ಲ. ಹೋರಾಟಕ್ಕೆ ಯಾವುದೇ ತಡೆಯೊಡ್ಡಲ್ಲ ಎಂದು ಹೇಳಿದರು.

"ಭೇಟಿಗೆ ಬೇರೆ ವೇದಿಕೆಯಿದೆ. ಅಮಿತ್‌ ಶಾ ಅವರು ಸಾಮಾನ್ಯ ವ್ಯಕ್ತಿಯಲ್ಲ. ಮೊದಲೇ ಅಪಾಯಿಂಟ್ಮೆಂಟ್ ತೆಗೆದುಕೊಂಡು, ಅವರು ಎಲ್ಲಿ ಇರುತ್ತಾರೋ ಅಲ್ಲಿ ಭೇಟಿಗೆ ಅವಕಾಶ ಕಲ್ಪಿಸುವುದಾಗಿ," ತಿಳಿಸಿದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಜ.14ಕ್ಕೆ ಪಾದಯಾತ್ರೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ
'ಅಮಿತ್ ಶಾ ಗೋ ಬ್ಯಾಕ್' ರೈತರ ಅಭಿಯಾನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ಉದ್ದೇಶದಿಂದ ವಿರೋಧ ಸರಿಯಲ್ಲ. ರೈತರಿಗೆ ನಾನು ಅನ್ಯಾಯ ಮಾಡಲ್ಲ. ನಾನು ರೈತ ಕುಟುಂಬದಿಂದ ಬಂದವನು. ನಾವು ಕೇದಾರನಾಥ ಸಕ್ಕರೆ ಕಾರ್ಖಾನೆಯನ್ನು ನ್ಯಾಯಾಲಯದ ಮೂಲಕ ತೆಗೆದುಕೊಂಡಿದ್ದೇವೆ. ರೈತರು ನೇರವಾಗಿ ನನ್ನೊಂದಿಗೆ ಚರ್ಚೆಗೆ ಬಂದರೆ ಸ್ವಾಗತ, ಸಮಸ್ಯೆ ಇತ್ಯರ್ಥಪಡಿಸುತ್ತೇನೆ. ರೈತರು ಹೋರಾಟ, ಪ್ರತಿಭಟನೆ ಮಾಡೋದು ಸರಿಯಲ್ಲ ಎಂದರು.

'ಬಿಜೆಪಿ ಅನೈತಿಕ ಸರಕಾರ' ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಅವರು ದೊಡ್ಡವರು. ಅವರ ಬಗ್ಗೆ ಮಾತನಾಡುವುದಿಲ್ಲ,” ಎಂದರು.

2010ರಲ್ಲಿ ನಿರಾಣಿ ವಿರುದ್ಧ ಭೂ ಕಬಳಿಕೆ ಸಂಬಂಧ ಉತ್ತರಿಸಿದ ಅವರು, ಈ ಬಗ್ಗೆ ನಾನು ಹಲವು ಬಾರಿ ಹೇಳಿದ್ದೇನೆ. ಅಲಂ ಪಾಷಾ ಓರ್ವ ದೊಡ್ಡ ಫ್ರಾಡ್. ಮುಂದಿನ ದಿನಗಳಲ್ಲಿ ಮಾಧ್ಯಮಗಳಿಗೆ ಅಲಂ ಪಾಷಾನ ಬಗ್ಗೆ ಹೇಳುವೆ. ಆ ಭೂಮಿ ನಮ್ಮ ಸಂಬಂಧಿಕರಿಗೆ ಕೊಟ್ಟಿಲ್ಲ. ಆ ಭೂಮಿ ಇನ್ನೂ ಕೆಐಎಡಿಬಿಯಲ್ಲಿದೆ ಎಂದರು.

ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ ವಿಚಾರದ ಕುರಿತು ಪ್ರತಿಕ್ರಿಯಿಸಿ, ಮನೆಯಲ್ಲಿ ಅಣ್ಣ ತಮ್ಮಂದಿರು ಅಂಗಿ ತೆಗೆದುಕೊಂಡಾಗ ಬಣ್ಣ ಬದಲಾದರೆ ಅಸಮಾಧಾನ ಆಗುತ್ತೆ. ಹಾಗೆಯೇ ಅಸಮಾಧಾನಗೊಂಡವರನ್ನು ನಮ್ಮ ಹಿರಿಯರು ಸಮಾಧಾನ ಪಡಿಸುತ್ತಾರೆ ಎಂದು ಹೇಳಿದರು.

ಶಾಸಕ ಸಿದ್ದು ಸವದಿ ಹೌದಪ್ಪಗಳಿಗೆ ಸಚಿವ ಸ್ಥಾನ ನೀಡಲಾಗಿದೆ ಎಂಬ ಹೇಳಿಕೆಗೆ ಉತ್ತರಿಸಿ, “ಕಾರ್ಖಾನೆ ಬಗ್ಗೆ ಕೇಳಿ. ಸರಕಾರದಲ್ಲಿ ಏನೇನು ಯೋಜನೆ, ಉದ್ಯೋಗ ತರುತ್ತೀರಿ ಎಂದು ಕೇಳಿ. ಹೌದಪ್ಪ, ಅಲ್ಲಪ್ಪ ತೆಗೆದುಕೊಂಡು ನಾನೇನು ಮಾಡಲಿ? ನನ್ನದು ಆ ಯೋಚನೆ ಏನು ಇಲ್ಲ," ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ