ಆ್ಯಪ್ನಗರ

ಎಟಿಎಂನಲ್ಲಿ 5 ಲಕ್ಷ ರೂ. ಕಳವು

ಬಾಗಲಕೋಟ: ನಗರದ ವಿದ್ಯಾಗಿರಿಯ ಎಸ್‌ಬಿಐ ಎಟಿಎಂನಲ್ಲಿ ಕಳ್ಳರು ಎಟಿಎಂ ಯಂತ್ರ ಕೊರೆದು 5 ಲಕ್ಷ ರೂ. ದೋಚಿದ್ದಾರೆ.

Vijaya Karnataka 2 Sep 2018, 5:00 am
ಬಾಗಲಕೋಟ: ನಗರದ ವಿದ್ಯಾಗಿರಿಯ ಎಸ್‌ಬಿಐ ಎಟಿಎಂನಲ್ಲಿ ಕಳ್ಳರು ಎಟಿಎಂ ಯಂತ್ರ ಕೊರೆದು 5 ಲಕ್ಷ ರೂ. ದೋಚಿದ್ದಾರೆ.
Vijaya Karnataka Web rs 5 lakh on atms stolen
ಎಟಿಎಂನಲ್ಲಿ 5 ಲಕ್ಷ ರೂ. ಕಳವು


ವಿದ್ಯಾಗಿರಿಯ ಸಮೃದ್ಧಿ ಗುರುಕುಲ ಪಕ್ಕದ ಎಸ್‌ಬಿಐ ಎಟಿಎಂನಲ್ಲಿ ಕಳವು ನಡೆದಿದ್ದು, ನಗರದಲ್ಲಿ ಮೊದಲ ಬಾರಿ ಎಟಿಎಂ ಕಳ್ಳತನ ಮಾಡಿದ ಪ್ರಕರಣ ವರದಿಯಾಗಿದೆ. ಸಮೃದ್ಧಿ ಗುರುಕುಲ ಶಾಲೆಯ ಆವರಣದಲ್ಲಿದ್ದ ಕಾಂಪ್ಲೆಕ್ಸ್‌ನಲ್ಲಿ ಎಟಿಎಂನ ಹಣ ಕಳ್ಳತನ ಮಾಡಲಾಗಿದೆ.

ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಳ್ಳರು ಕೈಚಳಕ ತೋರಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ನವನಗರ ಠಾಣೆಯ ಪಿಎಸ್‌ಐ ಸಂತೋಷ ಹಳ್ಳೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನ ದಳದ ನಾಯಿ ಕಳ್ಳರ ಜಾಡು ಹಿಡಿದು ಕೆಲ ದೂರ ಕ್ರಮಿಸಿ ವಾಪಸ್ಸಾಯಿತು. ಡಿಎಸ್‌ಪಿ ಎಸ್‌.ಬಿ.ಗಿರೀಶ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ಬ್ಯಾಂಕ್‌ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ನವನಗರ ಠಾಣೆಯ ಪೊಲೀಸರು ತನಿಖೆ ನಡೆಸಿದ್ದಾರೆ.

ಅವ್ಯವಸ್ಥೆಯ ಕೇಂದ್ರ

ಕಳ್ಳತನಕ್ಕೊಳಗಾಗಿರುವ ಎಟಿಎಂನಲ್ಲಿ ಸದಾ ಹಣವಿಲ್ಲ ಎಂಬ ಬೋರ್ಡ್‌ ನೇತು ಹಾಕಲಾಗುತ್ತಿತ್ತು. ಇಲ್ಲಿ ಎರಡು ಯಂತ್ರಗಳಿದ್ದು, ಒಂದು ಯಂತ್ರ ನಿಷ್ಕ್ರಿಯವಾಗಿತ್ತು. ಹಣವಿರುವ ಯಂತ್ರದ ಬಗ್ಗೆ ಮಾಹಿತಿ ಪಡೆದಿದ್ದ ಕಳ್ಳರು ಗ್ಯಾಸ್‌ ಕಟರ್‌ ಬಳಸಿ ಹಣ ಹೊತ್ತೊಯ್ದಿದ್ದಾರೆ. ಇದೇ ಎಟಿಎಂ ಪಕ್ಕ ಇಂಡಿಯಾ ಎಟಿಎಂ ಇದ್ದರೂ ಅಲ್ಲಿ ಕಳ್ಳತನಕ್ಕೆ ಯತ್ನಿಸಿಲ್ಲ. ಎಸ್‌ಬಿಐ ಎಟಿಎಂಗೆ ಸೆಕ್ಯೂರಿಟಿ ಗಾರ್ಡ್‌ ನಿಯೋಜಿಸದ ಕಾರಣ ಕಳ್ಳತನ ನಡೆದಿದೆ. ಎಟಿಎಂ ಎದುರಿಗೆ ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ನ ಶಾಖೆಯಿದೆ. ಅಲ್ಲಿಯ ಸೆಕ್ಯೂರಿಟಿ ಗಾರ್ಡ್‌ ರಾತ್ರಿ 2 ಗಂಟೆಯವರೆಗೆ ಎಚ್ಚರವಿದ್ದು, ನಂತರ ನಿದ್ರೆಗೆ ಜಾರಿದ್ದಾರೆ.

ಎಟಿಎಂನಲ್ಲಿ ಸುರಕ್ಷತೆ ಲೋಪಗಳಿರುವ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಎಟಿಎಂನಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ತಜ್ಞರು ಬಂದ ನಂತರ ಡಿವಿಆರ್‌ ಪೊಲೀಸರಿಗೆ ದೊರಕಲಿದೆ. ಕಳ್ಳತನವಾಗಿರುವ ಎಟಿಎಂನಲ್ಲಿ ಸುರಕ್ಷತೆಯಿಲ್ಲದ ಬಗ್ಗೆ ಸಾರ್ವಜನಿಕರು ಹಲವು ಬಾರಿ ದೂರಿದ್ದರು. ಆದರೆ ಬ್ಯಾಂಕ್‌ ಅಧಿಕಾರಿಗಳು ಸುರಕ್ಷತೆಯ ಕ್ರಮ ಕೈಗೊಂಡಿರಲಿಲ್ಲ. ಹಲವು ದಿನಗಳವರೆಗೆ ಎಟಿಎಂಗೆ ಬಾಗಿಲೇ ಇರಲಿಲ್ಲ. ಎಟಿಎಂನಲ್ಲಿ ಫೈರ್‌ ಅಲಾರಾಮ್‌ ಅಳವಡಿಸಿಲ್ಲ, ಇಷ್ಟೇ ಅಲ್ಲ ಇಲ್ಲಿ ಎಸಿ ಬಂದ್‌ ಆಗಿ ಎಷ್ಟೋ ದಿನಗಳಾಗಿವೆ. ಎಟಿಎಂನಲ್ಲಿ ಹಳೆಯ ಯಂತ್ರವಿದ್ದ ಕಾರಣ ಕಳ್ಳರು ಕಳ್ಳತನ ಮಾಡುವುದು ಸುಲಭವಾಗಿದೆ. ಅತ್ಯಾಧುನಿಕ ಎಟಿಎಂ ಯಂತ್ರಗಳನ್ನು ಕೊರೆದರೆ ನೋಟುಗಳು ಬಣ್ಣಮಯವಾಗುತ್ತವೆ. ಆಗ ಹಣ ಕದ್ದರೂ ಪ್ರಯೋಜನವಾಗುವುದಿಲ್ಲ. ಇಲ್ಲಿಯ ಯಂತ್ರ ಹಳೆಯದ್ದಾಗಿದ್ದು, ಕಳ್ಳತನಕ್ಕೆ ಸುಲಭ ಅವಕಾಶ ದೊರೆತಿದೆ. ಕೆಲವು ತಿಂಗಳುಗಳ ಹಿಂದೆ ಕೆರೂರನ ಡಿಸಿಸಿ ಬ್ಯಾಂಕ್‌ ಶಾಖೆಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿತ್ತು. ಪೊಲೀಸರು ಎರಡೇ ದಿನಗಳಲ್ಲಿ ನೇಪಾಳ ಮೂಲದ ಕಳ್ಳರನ್ನು ಬಂಧಿಸಿದ್ದರು. ಇದೀಗ ಎಸ್‌ಬಿಐ ಎಟಿಎಂ ಕಳ್ಳತನ ಮಾಡಿದವರು ಕೂಡ ಬೇರೆ ರಾಜ್ಯಕ್ಕೆ ಸೇರಿದ ವೃತ್ತಿಪರ ಕಳ್ಳರಿರಬಹುದು ಎಂದು ಶಂಕಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ