ಆ್ಯಪ್ನಗರ

ಬಳ್ಳಾರಿಯಲ್ಲಿ ರೆಡ್ಡಿ ಬಳಗದ ಭಯದಿಂದಾಗಿ ಶಾಮಿಯಾನ ಹಾಕಲು ಅವಕಾಶ ಕೊಡಲಿಲ್ಲ: ಸಿದ್ದರಾಮಯ್ಯ

ಜನಾರ್ದನ ರೆಡ್ಡಿ ವಿರುದ್ಧ ಮತ್ತೆ ಗುಡುಗಿದ ಮಾಜಿ ಮುಖ್ಯಮಂತ್ರಿ

Vijaya Karnataka Web 30 Oct 2018, 7:41 pm
ಬಾಗಲಕೋಟ: ಬಳ್ಳಾರಿಯಲ್ಲಿ ರೆಡ್ಡಿ ಬಳಗ ಭಯದ ವಾತಾವರಣ ಸೃಷ್ಟಿಸಿದ ಕಾರಣ ಪ್ರಚಾರಕ್ಕಾಗಿ ಶಾಮಿಯಾನ ಹಾಕಲು ಕೂಡ ಅವಕಾಶ ಕೊಡಲಿಲ್ಲ' ಎಂದು ಮಾಜಿ ಮುಖ್ಯಮಂತ್ರಿ, ಬಾದಾಮಿ ಶಾಸಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
Vijaya Karnataka Web ಸಿದ್ದರಾಮಯ್ಯ
ಸಿದ್ದರಾಮಯ್ಯ


ಜಮಖಂಡಿ ಹೊರವಲಯದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಕುರುಬ ಸಮುದಾಯದ ಸಭೆಯಲ್ಲಿ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ಈ ಸಭೆಗೆ ಮಾಧ್ಯಮ ಪ್ರತಿನಿಗಳಿಗೆ ಪ್ರವೇಶ ನಿಷೇಧಿಸಲಾಗಿತ್ತು. ಹೀಗಾಗಿ ಸಭೆಯಲ್ಲಿ ಸಿದ್ದರಾಮಯ್ಯ ಮಾಡಿದ ಭಾಷಣದ ಮಾಹಿತಿ ದೊರೆತಿರಲಿಲ್ಲ.

ಇದೀಗ ಸಿದ್ದರಾಮಯ್ಯ ಭಾಷಣದ ವಿಡಿಯೋ ಹೊರಬಿದ್ದಿದ್ದು, ರೆಡ್ಡಿ ಸಹೋದರರ ರಾಜಕಾರಣದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದು ಕುತೂಹಲ ಮೂಡಿಸಿದೆ.

ವಿಶೇಷವೆಂದರೆ ಈ ಸಭೆ ನಡೆದ ಒಂದು ದಿನದ ನಂತರ ಸಿದ್ದರಾಮಯ್ಯ ಅವರು ಟ್ವಿಟರ್ ಮೂಲಕ ಬಹಿರಂಗ ಚರ್ಚೆಗೆ ಬರುವಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಸವಾಲೆಸೆದಿದ್ದಾರೆ.

ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ `ಬಳ್ಳಾರಿಯಲ್ಲಿ ಯಾವುದೇ ಕಾನೂನು, ಕಟ್ಟಳೆಗಳು ಕೆಲಸ ಮಾಡುತ್ತಿರಲಿಲ್ಲ. ನ್ಯಾ.ಸಂತೋಷ ಹೆಗ್ಡೆ ನೀಡಿದ ವರದಿಯಲ್ಲಿ ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಬರೆದಿದ್ದರು. ನಾವು ಪ್ರಚಾರಕ್ಕೆಂದು ಹೋದಾಗ ಇಡಿ ಬಳ್ಳಾರಿ ನಗರದಲ್ಲಿ ಶಾಮಿಯಾನ ಹಾಕಲು ಅನುಮತಿ ದೊರೆಯಲಿಲ್ಲ ಎಂದರು.

ಜಿಲ್ಲಾಧಿಕಾರಿ ರೆಡ್ಡಿಗೆ ಹೆದರಿ ಸಭೆಗೆ ಅನುಮತಿ ನೀಡಲಿಲ್ಲ. ಕೊನೆಗೆ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ಸಭೆ ನಡೆಸಲು ನಿರ್ಧರಿಸಲಾಯಿತು. ಮನೆಯೊಂದರಿಂದ ಎರಡು ಕುರ್ಚಿ, ಒಂದು ಟೇಬಲ್ ತಂದು ಹಾಕಿದರು. ರೆಡ್ಡಿಗಳ ಭಯದಿಂದ ಜನರು ಭಾಷಣ ಕೇಳಲು ಮನೆಯಿಂದ ಹೊರಗೆ ಬರಲಿಲ್ಲ' ಎಂದು ವಿವರಿಸಿದ್ದಾರೆ.

'ನಿರ್ಜನವಾಗಿದ್ದ ಪ್ರದೇಶದಲ್ಲೇ ಇಬ್ರಾಹಿಂ ಭಾಷಣ ಆರಂಭಿಸಿದರು. ಮನೆಯಲ್ಲಿರುವ ಅಕ್ಕ, ತಂಗಿಯರೇ, ಅಣ್ಣ, ತಮ್ಮಂದಿರೇ ಹಾಗೂ ಗಿಡಮರಗಳೇ ಎಂದು ಇಬ್ರಾಹಿಂ ಮಾತನಾಡಿದರು. ನಂತರ ಕೊನೆಗೆ ಜನರು ಮನೆಗಳಿಂದ ಹೊರಬಂದರು. ಆಗ ಅಂದಾಜು 500 ಜನರೆದುರು ಭಾಷಣ ಮಾಡಬೇಕಾಯಿತು ಎಂದು ಮಾಜಿ ಸಿಎಂ ಹೇಳಿದರು.

ಒಮ್ಮೆ ರಾಮಗಢ ಎಂಬ ಗಣಿಗಾರಿಕೆ ಪ್ರದೇಶಕ್ಕೆ ಪ್ರಚಾರಕ್ಕೆ ತೆರಳಿದ್ದೆ. ನನ್ನ ಕಾರ್ ಹಿಂದೆ ಮುಂದೆ ಯುವಕರು ಬೈಕ್‍ನಲ್ಲಿ ಹಿಂಬಾಲಿಸುತ್ತಿದ್ದರು, ನಮ್ಮ ವಿರುದ್ಧ ಘೋಷಣೆ ಕೂಗುತ್ತಿದ್ದರು. ನಾವು ಹೋಗಬಾರದು ಎಂದು ರಸ್ತೆಗೆ ಮಣ್ಣು ಸುರಿಯಲಾಯಿತು. ಈ ಭಯದ ವಾತಾವರಣ ಮೂಡಿಸಿದ್ದ ರೆಡ್ಡಿಗಳ ಸೊಕ್ಕು ಮುರಿಯಲೆಂದೇ ನಾನು ಬಿಜೆಪಿ ವಿರುದ್ಧ ವಿಧಾನಸೌಧದಲ್ಲಿ ತೊಡೆ ತಟ್ಟಿದೆ. ಬೆಂಗಳೂರಿನಿಂದ ಬಳ್ಳಾರಿವರೆಗೆ 16 ದಿನ ಪಾದಯಾತ್ರೆ ನಡೆಸಲಾಯಿತು. ನಾನು ಪಾದಯಾತ್ರೆ ನಡೆಸದಿದ್ದರೆ ರೆಡ್ಡಿ ಜೈಲಿಗೆ ಹೋಗುತ್ತಿರಲಿಲ್ಲ' ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ