ಆ್ಯಪ್ನಗರ

ಜನ ಕಷ್ಟದಲ್ಲಿದ್ದಾರೆಂದು ವೈದ್ಯರ ಸಲಹೆ ಮೀರಿ ಬಾದಾಮಿಗೆ ಬಂದಿದ್ದೇನೆ: ಸಿದ್ದರಾಮಯ್ಯ

ಜನ ಕಷ್ಟದಲ್ಲಿದ್ದಾರೆಂದು ವೈದ್ಯರ ಸಲಹೆ ಮೀರಿ ಬಾದಾಮಿ ವಿಧಾನಸಭೆ ಕ್ಷೇತ್ರಕ್ಕೆ ಆಗಮಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Vijaya Karnataka Web 19 Aug 2019, 3:55 pm
ಬಾಗಲಕೋಟ: ಪ್ರವಾಹದಿಂದ ಜನರು ಸಂಕಷ್ಟದಲ್ಲಿದ್ದಾರೆಂದು ವೈದ್ಯರು ನೀಡಿದ ಸಲಹೆ ಮೀರಿ ಬಾದಾಮಿ ವಿಧಾನಸಭೆ ಕ್ಷೇತ್ರಕ್ಕೆ ಆಗಮಿಸಿದ್ದೇನೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Vijaya Karnataka Web siddaramaiah2


ಕರ್ಲಕೊಪ್ಪ ಪ್ರವಾಹ ಪೀಡಿತ ಗ್ರಾಮಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಬಂದು ತಕ್ಷಣ ಬಾದಾಮಿಗೆ ಬರಬೇಕೆಂದು ಬಯಸಿದ್ದೆ. ಆದರೆ, ಆಗಸ್ಟ್ 4ರಂದು ಕಣ್ಣಿನ ಆಪರೇಷನ್ ಮಾಡಿಸಿಕೊಂಡಿದ್ದೆ. ಹೀಗಾಗಿ ಪ್ರವಾಹ ಪೀಡಿತ ಪ್ರದೇಶಕ್ಕೆ ಪುತ್ರನನ್ನು ಕಳುಹಿಸಿದೆ. ಮನೆಯಿಂದಲೇ ಇಲ್ಲಿಯ ನಾಯಕರ ಜತೆ ಮಾತನಾಡಿ, ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಿ ಎಂದು ಸೂಚನೆ ನೀಡಿದ್ದೆ. ಈಗಲೂ ವೈದ್ಯರು ಮೂರು ವಾರ ವಿಶ್ರಾಂತಿ ಪಡೆಯಿರಿ ಎಂದು ಸಲಹೆ ನೀಡಿದ್ದಾರೆ. ಆದರೆ, ಕ್ಷೇತ್ರದ ಜನರು ಸಂಕಷ್ಟದಲ್ಲಿದ್ದಾರೆಂದು ವೈದ್ಯರ ಸಲಹೆ ಮೀರಿ ಇಲ್ಲಿಗೆ ಬಂದಿದ್ದೇನೆಂದು ತಿಳಿಸಿದರು.

ಪ್ರವಾಹದಿಂದ ಆತಂಕ ಬೇಡ. ನಾವು ನಿಮ್ಮೊಂದಿಗಿದ್ದೇವೆ. ನಿಮ್ಮ ಕೆಲಸ ಆಗುವವರೆಗೂ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತೇನೆ ಎಂದು ಅಭಯ ನೀಡಿದರು.

ಸದ್ಯ ನಾನು ಅಧಿಕಾರದಲ್ಲಿ ಇಲ್ಲ. ನಿಮ್ಮ ಜನಪ್ರತಿನಿಧಿಯಷ್ಟೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಹೊರಟು ಹೋಯಿತು. ಈಗ ಬಿಜೆಪಿ ಸರಕಾರ ಅಧಿಕಾರಕ್ಕೇರಿದೆ ಎಂದು ನೆರೆ ಪೀಡಿತ ಪ್ರದೇಶದಲ್ಲಿಯೂ ಮೈತ್ರಿ ಸರಕಾರ ಪತನದ ಬಗ್ಗೆ ಸಿದ್ದರಾಮಯ್ಯ ಮಾತನಾಡಿದರು.

ನೆರೆಯಿಂದ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಶೆಡ್ ಹಾಕಿಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಕರ್ಲಕೊಪ್ಪ ಗ್ರಾಮವನ್ನು ಸಂಪೂರ್ಣ ಶಿಫ್ಟ್ ಮಾಡಬೇಕಿದೆ. ಇನ್ಮುಂದೆ ಯಾವತ್ತು ಪ್ರವಾಹ ಬಾರದಿರಲಿ ಎಂದು ಸಿದ್ದರಾಮಯ್ಯ ದೇವರಲ್ಲಿ ಪ್ರಾರ್ಥಿಸಿದರು.

ನೆರೆಯಿಂದ ಮೃತಪಟ್ಟವರಿಗೆ, ಮನೆ ಕಳೆದುಕೊಂಡವರಿಗೆ 5 ಲಕ್ಷ ರೂಪಾಯಿ ಪರಿಹಾರ ಮತ್ತು ಅಗತ್ಯ ಖರ್ಚಿಗಾಗಿ 10 ಸಾವಿರ ರೂಪಾಯಿ ಪರಿಹಾರ ನೀಡಲು ಸರಕಾರ ನಿರ್ಧರಿಸಿದೆ. ಈ ಹಣ ಮಧ್ಯವರ್ತಿಗಳ ಪಾಲಾಗಬಾರದೆಂದು ನೇರವಾಗಿ ಖಾತೆಗೆ ಹಾಕಲು ನಿರ್ಧರಿಸಲಾಗಿದೆ. 2-3 ದಿನಗಳಲ್ಲಿ ಸಂತ್ರಸ್ತರ ಖಾತೆಗೆ 10 ಸಾವಿರ ರೂಪಾಯಿ ಹಣ ಜಮೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನೆರೆಯಲ್ಲಿ ಮೃತಪಟ್ಟ ಭೀಮಪ್ಪ ಎಂಬವರ ಪತ್ನಿ ದೇವಕ್ಕ ಎಂಬವರಿಗೆ 5 ಲಕ್ಷ ರೂಪಾಯಿ ಚೆಕ್ ವಿತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ