ಆ್ಯಪ್ನಗರ

ಮೈದುಂಬಿದ ಘಟಪ್ರಭೆ: ಕ್ವಾರಿಯಲ್ಲಿ ಮಿನಿ ಫಾಲ್ಸ್‌

ಮೈದುಂಬಿದ ಘಟಪ್ರಭೆ, ಹರಿದು ಬಂತು ಹಿನ್ನೀರು...

Vijaya Karnataka 14 Jul 2019, 5:00 am
ಬಾಗಲಕೋಟ: ಘಟಪ್ರಭಾ ನದಿಗೆ ಭಾರಿ ನೀರು ಹರಿದುಬರುತ್ತಿರುವುದರಿಂದ ನಗರದ ಸಿಮೆಂಟ್‌ ಕ್ವಾರಿ ಬಳಿ ಹಿನ್ನೀರಿನ ಮಿನಿ ಫಾಲ್ಸ್‌ ಜನರನ್ನು ಆಕರ್ಷಿಸುತ್ತಿದೆ.
Vijaya Karnataka Web sloppy event mini falls at quarry
ಮೈದುಂಬಿದ ಘಟಪ್ರಭೆ: ಕ್ವಾರಿಯಲ್ಲಿ ಮಿನಿ ಫಾಲ್ಸ್‌


ಬೆಳಗಾವಿ ಜಿಲ್ಲೆಯಲ್ಲಿ ನಿರಂತರವಾಗಿರುವ ವರ್ಷಧಾರೆಯಿಂದ ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ನಗರದ ಸಿಮೆಂಟ್‌ ಕ್ವಾರಿ ಬಳಿ ಹಿನ್ನೀರಿನ ಪ್ರಮಾಣವೂ ಅಪಾರವಾಗಿದೆ. ಹಿನ್ನೀರು ನಿಧಾನವಾಗಿ ಕ್ವಾರಿಯತ್ತ ಹರಿದು ಬರುತ್ತಿದೆ.

ಅವಧಿಗೆ ಮುನ್ನ ಭರ್ತಿ

ಹವೇಲಿ ಪಕ್ಕದಲ್ಲಿ ಹರಿಯುವ ಹಿನ್ನೀರು ಸಿಮೆಂಟ್‌ ಕ್ವಾರಿ ಬಳಿ ವ್ಯಾಪಿಸುತ್ತಿದ್ದು, ಈಗಾಗಲೇ ಹಲಕಾಟಿಯವರ ಮನೆಯ ಹಿಂಭಾಗ ಆವರಿಸಿದೆ. ಹಿನ್ನೀರಿನ ಪಕ್ಕದಲ್ಲಿ ಹೊಲಗಳನ್ನು ಸಿದ್ಧಪಡಿಸಿಕೊಂಡಿದ್ದ ರೈತರು ನೀರಿನ ಆಗಮನದಿಂದ ಮುಂದಿನ ಕಾರ್ಯ ಕೈಬಿಟ್ಟಿದ್ದಾರೆ. ಒಂದೇ ದಿನದಲ್ಲಿ ನೀರು ಸಿಮೆಂಟ್‌ ಕ್ವಾರಿಯತ್ತ ಆಗಮಿಸಿದೆ, ಇದರೊಂದಿಗೆ ಸಿಮೆಂಟ್‌ ಕ್ವಾರಿಗೆ ಹಿನ್ನೀರು ಸೇರುತ್ತಿದೆ. ಇಲ್ಲಿರುವ ಕಲ್ಲಿನ ಬಂಡೆಗಳ ಮಧ್ಯೆ ನೀರು ಕೆಳಗಿಳಿಯುತ್ತಿದ್ದು, ಮಿನಿ ಫಾಲ್ಸ್‌ ನಿರ್ಮಾಣವಾಗಿದೆ.

ಹಿನ್ನೀರು ಬರುವುದನ್ನೇ ಕಾಯುತ್ತಿದ್ದ ಜನರು ಮಿನಿ ಫಾಲ್ಸ್‌ ನೋಡಲು ಧಾವಿಸುತ್ತಿದ್ದಾರೆ. ಈ ಪ್ರದೇಶಕ್ಕೆ ತೆರಳುವುದು ಕಷ್ಟಕರವಾಗಿದ್ದು, ಹವೇಲಿ ರಸ್ತೆಯಲ್ಲಿ ಕಲ್ಲು ಮುಳ್ಳಿನ ಒಳದಾರಿಯಲ್ಲಿ ಬರಬೇಕಾಗುತ್ತದೆ. ಫಾಲ್ಸ್‌ ನೋಡಲು ಯುವಕರ ಸಂಖ್ಯೆ ಹೆಚ್ಚಾಗಿದ್ದು, ಕ್ವಾರಿ ಭರ್ತಿಯಾಗುತ್ತಿದ್ದಂತೆ ಅಕ್ಕ ಪಕ್ಕದ ಜಮೀನು ಕೂಡ ಮುಳುಗಡೆಯಾಗಲಿದೆ. ಯುವಕರು ನೀರು ಧುಮ್ಮಿಕ್ಕುವ ಸ್ಥಳದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವ ದೃಶ್ಯಗಳು ಸಾಮಾನ್ಯವಾಗಿವೆ. ಮಳೆ ಚೆನ್ನಾಗಿರುವುದರಿಂದ ಈ ವರ್ಷ ಕ್ವಾರಿ ಶೀಘ್ರವಾಗಿ ಭರ್ತಿಯಾಗುವ ಸಾಧ್ಯತೆಯಿದೆ. ಕ್ವಾರಿ ಭರ್ತಿಯಾಗುತ್ತಿದ್ದಂತೆ ಪಾರಖನಾಥ ಮಂದಿರದ ಪಕ್ಕದಲ್ಲಿರುವ ಕ್ವಾರಿಯ ಗೇಟ್‌ ತೆರೆದು ನೀರು ಹರಿಬಿಡಲಾಗುತ್ತದೆ.

ಕುಡಿಯಲು ಬಳಕೆ

ಪಾರಖನಾಥ ಮಂದಿರದ ಪಕ್ಕದ ಕ್ವಾರಿಯಲ್ಲಿ ಈಗಾಗಲೇ ನೀರಿದ್ದು, ಇನ್ನೊಂದು ಕ್ವಾರಿ ಮೂಲಕ ಬಿಡುವ ನೀರಿನಿಂದ ಸಂಪೂರ್ಣ ತುಂಬಲಿದೆ. ಇಲ್ಲಿಂದ ಹಳೆಯ ನಗರಕ್ಕೆ ಕುಡಿವ ನೀರು ಪೂರೈಸಲಾಗುತ್ತಿದೆ. ಎರಡೂ ಕ್ವಾರಿಗಳು ಭರ್ತಿಯಾದರೆ ಹಳೆಯ ನಗರಕ್ಕೆ ಕುಡಿವ ನೀರಿನ ಪೂರೈಕೆ ಸಮಸ್ಯೆ ಕಾಡುವುದಿಲ್ಲ. ಸದ್ಯ ಜುಲೈ ತಿಂಗಳಿನಲ್ಲಿಯೇ ಕ್ವಾರಿ ಭರ್ತಿಯಾಗಿದ್ದು ಹಾಗೂ ಹಿನ್ನೀರು ಆವರಿಸಿದ್ದು ನಗರದ ಜನತೆಯಲ್ಲಿ ಹರ್ಷಕ್ಕೆ ಕಾರಣವಾಗಿದೆ. ಇದರೊಂದಿಗೆ ಸಾಳಗುಂದಿ, ಕದಾಂಪುರ ಸೇರಿದಂತೆ ಹತ್ತಕ್ಕೂ ಹೆಚ್ಚು ಹಳ್ಳಿಗಳ ಗ್ರಾಮಸ್ಥರು ಹಿನ್ನೀರಿನಲ್ಲಿ ದೋಣಿ ಮೂಲಕ ಬಾಗಲಕೋಟಕ್ಕೆ ಸಂಚಾರ ಕೈಗೊಳ್ಳಬೇಕಾಗುತ್ತದೆ. ಈ ವರ್ಷ ಹಿನ್ನೀರು ಸಮೃದ್ಧವಾಗಿದ್ದರಿಂದ ದೋಣಿ ಸಂಚಾರ ಸ್ಥಗಿತಗೊಂಡಿರಲಿಲ್ಲ. ಆಷಾಢದಲ್ಲಿ ಗಾಳಿ ಹೆಚ್ಚಾಗಿ ಬೀಸುವುದರಿಂದ ಕೆಲ ಸಮಯ ದೋಣಿ ಸಂಚಾರ ಸ್ಥಗಿತಗೊಳ್ಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ