ಆ್ಯಪ್ನಗರ

ಅಧಿಕಾರಿಗಳ ನೇಮಿಸದಿದ್ದಲ್ಲಿ ಹೋರಾಟ: ವಿಕ ರಿಯಾಲಿಟಿ ಚೆಕ್‌ಗೆ ಸಾರ್ವಜನಿಕರ ಸ್ಪಂದನೆ

ಬಾಗಲಕೋಟ: ಉತ್ತರ ಕರ್ನಾಟಕದಲ್ಲಿ ಪ್ರಭಾರ ಹುದ್ದೆಗಳ ಮೇಲೆ ನಡೆಯುತ್ತಿರುವ ಆಡಳಿತ ಕೊನೆಗಾಣಿಸಿ ಎಲ್ಲ ಹುದ್ದೆಗಳಿಗೆ ಕಾಯಂ ಅಧಿಕಾರಿಗಳನ್ನು ನೇಮಿಸಬೇಕು ಎಂಬ ಕೂಗು ಕೇಳಿಬಂದಿದೆ.

Vijaya Karnataka 12 Aug 2018, 9:20 am
ಬಾಗಲಕೋಟ: ಉತ್ತರ ಕರ್ನಾಟಕದಲ್ಲಿ ಪ್ರಭಾರ ಹುದ್ದೆಗಳ ಮೇಲೆ ನಡೆಯುತ್ತಿರುವ ಆಡಳಿತ ಕೊನೆಗಾಣಿಸಿ ಎಲ್ಲ ಹುದ್ದೆಗಳಿಗೆ ಕಾಯಂ ಅಧಿಕಾರಿಗಳನ್ನು ನೇಮಿಸಬೇಕು ಎಂಬ ಕೂಗು ಕೇಳಿಬಂದಿದೆ.
Vijaya Karnataka Web 2


ವಿಜಯ ಕರ್ನಾಟಕ ಶನಿವಾರದ ಸಂಚಿಕೆಯಲ್ಲಿ ಪ್ರಕಟಿಸಿದ 'ಪ್ರಭಾರಕ್ಕೆ ಉಕ ತತ್ತರ' ವಿಶೇಷ ವರದಿ ಗಮನಿಸಿದ ನಾನಾ ಸಂಘಟನೆಗಳ ಸದಸ್ಯರು ಅಧಿಕಾರಿಗಳ ನೇಮಕಕ್ಕೆ ಒತ್ತಾಯಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿರುವ ಕಚೇರಿಗಳನ್ನು ಸ್ಥಳಾಂತರಿಸುವ ಬದಲು ದಕ್ಷಿಣ ಕರ್ನಾಟಕದ ಕಚೇರಿಗಳನ್ನು ಇಲ್ಲಿ ಸ್ಥಳಾಂತರಿಸಿ ಅಭಿವೃದ್ಧಿಗೆ ಮುಂದಾಗಬೇಕು ಎಂಬ ಹಕ್ಕೊತ್ತಾಯ ಮಂಡಿಸಿದ್ದಾರೆ.

ಅನುದಾನ ಬಳಕೆಯಾಗಿಲ್ಲ
ಉತ್ತರ ಕರ್ನಾಟಕ ಹೋರಾಟ ಸಮಿತಿ ಖಜಾಂಚಿ ನೀಲೇಶ ಬನ್ನೂರ 'ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಕಲಬುರಗಿ ವಿಭಾಗಕ್ಕೆ 371 (ಜೆ) ಮಾನ್ಯತೆ ನೀಡಲಾಯಿತು. ಆದರೆ ದುಡ್ಡು ಖರ್ಚು ಮಾಡಲು ಅಧಿಕಾರಿ ನೇಮಕವಾಗಲಿಲ್ಲ. ಸರಕಾರ ಹೇರಳ ಅನುದಾನ ನೀಡಿದರೂ ಖರ್ಚು ಮಾಡಲು ಅಧಿಕಾರಿಗಳು ಬೇಕು. ಕೇವಲ ಪ್ರಭಾರ ಅಧಿಕಾರಿಗಳಿದ್ದರೆ ಅನುದಾನ ಬಳಕೆಯಾಗಲು ಸಾಧ್ಯವಿಲ್ಲ. ಪ್ರಭಾರಿಗಳು ಅನುದಾನ ಬಿಡುಗಡೆಗೊಳಿಸಲು ಹಿಂದೆ ಮುಂದೆ ನೋಡುತ್ತಾರೆ. ಇದು ನಮ್ಮ ಜವಾಬ್ದಾರಿಯಲ್ಲ ಎಂದು ಕಾಟಾಚಾರಕ್ಕೆ ಕೆಲಸ ಮಾಡುತ್ತಾರೆ. ಎಲ್ಲ ಹುದ್ದೆಗಳಿಗೆ ಅಧಿಕಾರಿ ನೇಮಕವಾಗದೇ ಅಭಿವೃದ್ಧಿ ನಿರೀಕ್ಷಿಸುವಂತಿಲ್ಲ' ಎಂದಿದ್ದಾರೆ.

ಪ್ರಭಾರಿ ಅಧಿಕಾರಿಗಳ ಆಡಳಿತದ ಬಗ್ಗೆ ಜನರಲ್ಲಿ ಬೇಸರವಿದೆ, ಪ್ರಭಾರ ಹೊಂದಿದವರು ಹುದ್ದೆ ತಮ್ಮದಲ್ಲ ಎಂಬಂತೆ ಕಾರ್ಯನಿರ್ವಹಿಸುತ್ತಾರೆ. ಬಹುತೇಕ ಅಧಿಕಾರಿಗಳು ಎರಡು ಹುದ್ದೆ ನಿಭಾಯಿಸುವುದರಿಂದ ಎರಡೂ ಕಡೆ ಗಮನಹರಿಸುವುದಿಲ್ಲ. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸದಿದ್ದರೆ ಅಭಿವೃದ್ಧಿ ಕೈಗೊಳ್ಳುವುದು ಕನಸಿನ ಮಾತಾಗುತ್ತದೆ ಎಂಬುದು ಸಾರ್ವಜನಿಕರ ಮಾತು. ಬಾಗಲಕೋಟ ಜಿಲ್ಲೆಯಲ್ಲಿ ಪ್ರಭಾರಿಗಳೇ ಪ್ರಮುಖ ಹುದ್ದೆಗಳಲ್ಲಿರುವುದರಿಂದ ಪ್ರಗತಿ ಸಾಧ್ಯವಾಗಿಲ್ಲ, ರಾಜಕೀಯ ಇಚ್ಛಾಶಕ್ತಿ ಇರದಿದ್ದರೆ ಕಾಯಂ ಅಧಿಕಾರಿಗಳು ನೇಮಕವಾಗುವುದಿಲ್ಲ ಎಂಬ ಧ್ವನಿ ಕೇಳಿಬಂದಿದೆ.

ಕೆಲಸ ವಿಳಂಬ
ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಆರ್‌.ಡಿ.ಬಾಬು ಪ್ರಭಾರಿ ಅಧಿಕಾರಿಗಳಿಂದ ಆಡಳಿತ ನಿರ್ವಹಣೆ ಅಸಾಧ್ಯ ಎಂಬತ್ತ ಬೊಟ್ಟು ಮಾಡಿ ತೋರಿಸುತ್ತಾರೆ. 'ಬಾಗಲಕೋಟದಲ್ಲಿ ಬಿಟಿಡಿಎದಲ್ಲಿ ಪ್ರಭಾರಿಯಾಗಿದ್ದ ಅಧಿಕಾರಿಯೊಬ್ಬರು ಫೈಲ್‌ಗಳಿಗೆ ಸಹಿ ಹಾಕುತ್ತಿರಲಿಲ್ಲ. ಕಾಯಂ ಅಧಿಕಾರಿ ಬಂದ ನಂತರ ಸಹಿ ಮಾಡುತ್ತಾರೆ ಎಂದು ಹೇಳುತ್ತಿದ್ದರು. ದೈನಂದಿನ ಕೆಲಸಗಳಿಗೆ ಮಾತ್ರ ಅವರ ಸೇವೆ ಸೀಮಿತವಾಗಿತ್ತು. ಒಬ್ಬ ಅಧಿಕಾರಿಗೆ ನಾಲ್ಕು ಚಾರ್ಜ್‌ ನೀಡಿದರೆ ಅವರಿಂದ ಕ್ಷಮತೆ ನಿರೀಕ್ಷಿಸಲಾಗುವುದಿಲ್ಲ. ಅಧಿಕಾರಿಗಳ ಕೊರತೆ ನೀಗಿಸುವುದೊಂದೇ ಪರಿಹಾರ' ಎನ್ನುತ್ತಾರೆ.

ಹುದ್ದೆ ಭರ್ತಿ ಮಾಡಿ
ಜನಪ್ರತಿನಿಧಿಗಳು ಎಷ್ಟೇ ಚುರುಕಾಗಿ ಕೆಲಸ ಮಾಡಿದರೂ ಅಧಿಕಾರಿಗಳಿಲ್ಲದೇ ಕಾರ್ಯಾಂಗದ ಕಾರ್ಯನಿರ್ವಹಣೆ ಅಸಾಧ್ಯ ಎನ್ನುವುದು ಸಾರ್ವಜನಿಕರ ಅಭಿಮತ. ಈ ಮಾತನ್ನು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಸಮರ್ಥಿಸುತ್ತಾರೆ. 'ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಪೂರ್ಣಾವಧಿ ಆಯುಕ್ತರು ನೇಮಕವಾಗದ ಕಾರಣ ಅಕ್ಷರಧಾಮ ಮಾದರಿ ಯೋಜನೆ ಅನುಷ್ಠಾನ ವಿಳಂಬವಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆಯಿಂದ ಅಕ್ರಮ ಗಣಿಗಾರಿಕೆ ಹೇರಳವಾಗಿ ನಡೆದಿದೆ. ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿಸುವ ದೃಷ್ಟಿಯಿಂದ ಸುವರ್ಣ ಸೌಧ ನಿರ್ಮಿಸಲಾಗಿದೆ. ಸರಕಾರ ಮೊದಲು ಉತ್ತರ ಕರ್ನಾಟಕದಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು' ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ. ಉತ್ತರ ಕರ್ನಾಟಕ ಅಭಿವೃದ್ಧಿ ಹಿನ್ನಡೆಯಾಗಲು ಅಧಿಕಾರಿಗಳ ಕೊರತೆ ಪ್ರಮುಖವಾಗಿದೆ. ಪೂರ್ಣ ಪ್ರಮಾಣದಲ್ಲಿ ಅಧಿಕಾರಿಗಳು ಲಭ್ಯರಾಗದೇ ಅಭಿವೃದ್ಧಿಯಾಗುವುದಿಲ್ಲ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ