ಆ್ಯಪ್ನಗರ

ದೈವೇಚ್ಛೆ ಏನಿದೆಯೋ ನನಗೆ ಗೊತ್ತಿಲ್ಲ: ಮೈತ್ರಿ ಸರಕಾರದ ಅಳಿವು ಉಳಿವಿನ ಬಗ್ಗೆ ಸಚಿವ ದೇಶಪಾಂಡೆ ಪ್ರತಿಕ್ರಿಯೆ

ರಾಜ್ಯ ಸರಕಾರ ವಿಸರ್ಜಿಸಬೇಕು ಎಂದು ಹೊರಟ್ಟಿ ಯಾಕೆ ಹೇಳಿದ್ದಾರೋ ಗೊತ್ತಿಲ್ಲ. ಅವರು ಜವಾಬ್ದಾರಿಯುತ ವ್ಯಕ್ತಿಯಾಗಿದ್ದು ಬೇಜವಾಬ್ದಾರಿ ಹೇಳಿಕೆ ಕೊಡುವುದಿಲ್ಲ. ಅವರನ್ನು ಹುಬ್ಬಳ್ಳಿಯಲ್ಲಿ ಭೇಟಿ ಮಾಡಿ ನಾನು ಚರ್ಚಿಸುತ್ತೇನೆ ಎಂದು ಸಚಿವ ಆರ್‌.ವಿ.ದೇಶಪಾಂಡೆ ಹೇಳಿದರು.

Vijaya Karnataka Web 18 May 2019, 9:48 pm
ಬಾಗಲಕೋಟ: ''ಮೈತ್ರಿ ಸರಕಾರ ಸುಭದ್ರವಾಗಿದೆ, ಕುಮಾರಸ್ವಾಮಿ ಐದು ವರ್ಷ ಸರಕಾರ ನಡೆಸಲಿದ್ದಾರೆ, ಅದಾಗಿಯೂ ದೈವೇಚ್ಛೆ ಏನಿದೆಯೋ ನನಗೆ ಗೊತ್ತಿಲ್ಲ'' ಎಂದು ಕಂದಾಯ ಇಲಾಖೆ ಸಚಿವ ಆರ್‌.ವಿ.ದೇಶಪಾಂಡೆ ಮಾರ್ಮಿಕವಾಗಿ ಹೇಳಿದರು.
Vijaya Karnataka Web r v deshpande


ನಗರದಲ್ಲಿ ಶನಿವಾರ (ಮೇ 18,2019) ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ''ರಾಜ್ಯ ಸರಕಾರ ವಿಸರ್ಜಿಸಬೇಕು ಎಂದು ಹೊರಟ್ಟಿ ಯಾಕೆ ಹೇಳಿದ್ದಾರೋ ಗೊತ್ತಿಲ್ಲ. ಅವರು ಜವಾಬ್ದಾರಿಯುತ ವ್ಯಕ್ತಿಯಾಗಿದ್ದು ಬೇಜವಾಬ್ದಾರಿ ಹೇಳಿಕೆ ಕೊಡುವುದಿಲ್ಲ. ಅವರನ್ನು ಹುಬ್ಬಳ್ಳಿಯಲ್ಲಿ ಭೇಟಿ ಮಾಡಿ ನಾನು ಚರ್ಚಿಸುತ್ತೇನೆ. ಸರಕಾರದಲ್ಲಿ ಯಾವುದೇ ಗೊಂದಲವಿಲ್ಲ, ಏನಾದ್ರೂ ಯಾರಪ್ಪನೂ ತಪ್ಪಿಸಲಿಕ್ಕೆ ಆಗುವುದಿಲ್ಲ'' ಎಂದರು.

ಮೈತ್ರಿ ಪಕ್ಷಗಳ ಮುಖಂಡರ ಆರೋಪ, ಪ್ರತ್ಯಾರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು ''ಯಾರೂ ನನ್ನ ಸಲಹೆ ಕೇಳಿಲ್ಲ, ನಾನು ಕೊಟ್ಟಿಲ್ಲ. ಸಲಹೆ ಯಾವ ಸಮಯದಲ್ಲಿ ಕೊಡಬೇಕೋ ಆ ಸಮಯದಲ್ಲಿ ಕೊಡುತ್ತೇನೆ. ಆದರೆ ಅವರು ನನ್ನ ಸಲಹೆ ಕೇಳಬೇಕಲ್ಲ. ನನ್ನ ಮಾತು ಕೇಳುವುದಿಲ್ಲ ಎಂದು ಹೇಳುತ್ತಿಲ್ಲ. ಕೇಳುವುದಿಲ್ಲ ಎಂದಾದರೆ ನಾನು ಅಲ್ಲಿರುವುದಿಲ್ಲ. ನಾನು ತತ್ತ್ವ, ಸಿದ್ಧಾಂತದ ರಾಜಕಾರಣ ಮಾಡುತ್ತ ಬಂದಿದ್ದೇನೆ. ಸಾಂವಿಧಾನಿಕ ಭಾಷೆ ಮಾತ್ರ ಬಳಸುತ್ತೇನೆ. ಕೆಲವರು ಟಿವಿ ಚಾನೆಲ್‌ಗಳನ್ನು ನೋಡುತ್ತಿದ್ದಂತೆ ಹುಚ್ಚರಾಗಿ ಹೇಳಿಕೆ ನೀಡುತ್ತಾರೆ. ಅಂತಹ ಹೇಳಿಕೆಗಳಿಗೆ ಪ್ರಚಾರ ದೊರೆಯುತ್ತದೆ. ನನಗೆ ಅಂತಹ ಹುಚ್ಚಿಲ್ಲ, ನಾನು ಪ್ರಚಾರದ ಆಸೆ ಮೀರಿ ಬಂದಿದ್ದೇನೆ. ಈಗ ದೇವಿಯ ಆಶೀರ್ವಾದದಿಂದ ಅಧಿಕಾರ ದೊರೆತಿದೆ. ಈ ಅವಕಾಶದಲ್ಲಿ ಸಮಾಜಕ್ಕಾಗಿ ಒಳ್ಳೆಯ ಕೆಲಸ ಮಾಡಬೇಕಿದೆ'' ಎಂದು ದೇಶಪಾಂಡೆ ವಿಶ್ಲೇಷಿಸಿದರು.

ಇನ್ನು, ''ಕಾಳಿ ನದಿಯನ್ನು ಕೃಷ್ಣಾ ನದಿಗೆ ಜೋಡಿಸುವ ಬಗ್ಗೆ ಸಂಗಮೇಶ ನಿರಾಣಿ ನೀಡಿರುವ ಹೇಳಿಕೆ ಪಬ್ಲಿಸಿಟಿ ಸ್ಟಂಟ್‌ ಆಗಿರಬೇಕು. ಅವರು ಈ ಬಗ್ಗೆ ನಮ್ಮೊಂದಿಗೆ ಚರ್ಚಿಸಬೇಕಿತ್ತು, ಆದರೆ ಬರೀ ಮನವಿ ನೀಡಿದ್ದಾರೆ. ಕಾಳಿ ನದಿಯಿಂದ ಅಳ್ನಾವರಕ್ಕೆ ನೀರು ಪೂರೈಸಲಾಗುತ್ತದೆ, ಕೆರೆ ತುಂಬುವ ಯೋಜನೆ ಕೈಗೊಳ್ಳಲಾಗಿದೆ. ನಾನು ನಿರಾಣಿ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸುತ್ತೇನೆ'' ಎಂದು ನದಿ ಜೋಡಣೆಗೆ ವಿರೋಧ ವ್ಯಕ್ತಪಡಿಸಿದರು.

ಅಲ್ಲದೆ, ''ಯಡಿಯೂರಪ್ಪ ಬಹುಮತ ದೊರೆತ ದಿನ ಮುಖ್ಯಮಂತ್ರಿಯಾಗುತ್ತಾರೆ. ಅವರಿಗೆ ಸಿಎಂ ಆಗುವ ಅವಕಾಶ ದೊರೆತಾಗ ಬಹುಮತ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಅವರಿಗೆ ಮತ್ತೆ ಸಿಎಂ ಆಗುವ ಆಸೆಯಿದೆ ಎನ್ನುವುದು ನನಗೂ ಗೊತ್ತಿದೆ. ಮೇ 23ರಂದು ಆಗುತ್ತಾರೋ ಇಲ್ಲವೋ ಎನ್ನುವುದು ನನಗೇನು ಗೊತ್ತು'' ಎಂದು ಬಾಗಲಕೋಟದಲ್ಲಿ ಸಚಿವ ಆರ್‌.ವಿ. ದೇಶಪಾಂಡೆ ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ