ಆ್ಯಪ್ನಗರ

ತೋವಿವಿಯಲ್ಲಿ ಮುಗಿದಿಲ್ಲ ನೀರಿನ ಬವಣೆ

ರವಿರಾಜ್‌ ಆರ್‌.ಗಲಗಲಿ ಬಾಗಲಕೋಟ 'ಶೀಘ್ರದಲ್ಲಿ ವಿಶ್ವವಿದ್ಯಾಲಯಕ್ಕೆ ಶಾಶ್ವತ ಕುಡಿವ ನೀರಿನ ವ್ಯವಸ್ಥೆಯಾಗಲಿದೆ' ಹೀಗೆಂದು ಸಿಎಂ ಕುಮಾರಸ್ವಾಮಿ ಭರವಸೆ ನೀಡಿ ಐದು ತಿಂಗಳಾಗಿದೆ, ಈವರೆಗೂ ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣಕ್ಕೆ ನಿರಂತರ ನೀರು ಪೂರೈಕೆಯಾಗಿಲ್ಲ.

Vijaya Karnataka 12 May 2019, 5:00 am
ರವಿರಾಜ್‌ ಆರ್‌.ಗಲಗಲಿ ಬಾಗಲಕೋಟ
Vijaya Karnataka Web the water can not be completed in the towel
ತೋವಿವಿಯಲ್ಲಿ ಮುಗಿದಿಲ್ಲ ನೀರಿನ ಬವಣೆ


'ಶೀಘ್ರದಲ್ಲಿ ವಿಶ್ವವಿದ್ಯಾಲಯಕ್ಕೆ ಶಾಶ್ವತ ಕುಡಿವ ನೀರಿನ ವ್ಯವಸ್ಥೆಯಾಗಲಿದೆ' ಹೀಗೆಂದು ಸಿಎಂ ಕುಮಾರಸ್ವಾಮಿ ಭರವಸೆ ನೀಡಿ ಐದು ತಿಂಗಳಾಗಿದೆ, ಈವರೆಗೂ ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣಕ್ಕೆ ನಿರಂತರ ನೀರು ಪೂರೈಕೆಯಾಗಿಲ್ಲ.

300ಎಕರೆ ವಿಶಾಲ ಪ್ರದೇಶದಲ್ಲಿ ಆವರಿಸಿಕೊಂಡಿರುವ ರಾಜ್ಯದ ಏಕೈಕ ತೋಟಗಾರಿಕೆ ವಿವಿ ನೀರಿನ ಕೊರತೆಯಿಂದ ಬಳಲುತ್ತಿದೆ. ಪ್ರತಿ ವರ್ಷವೂ ಬೇಸಿಗೆಯಲ್ಲಿ ನೀರು ಲಭ್ಯವಾಗದ ಕಾರಣ ವಿವಿಯಿಂದ ಬೆಳೆಸಲಾದ ಬೆಳೆಗಳಿಗೆ ಜಲ ಒದಗಿಸುವುದು ಸವಾಲಿನ ಕೆಲಸವಾಗುತ್ತದೆ. ವಿವಿಗೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಲು ಸರಕಾರ ರೂಪಿಸಿರುವ ಯೋಜನೆ ಇನ್ನೂ ಪೇಪರ್‌ನಲ್ಲಿದೆ. ಈ ಯೋಜನೆ ಜಾರಿಯಾಗುವವರೆಗೆ ವಿವಿಯಲ್ಲಿ ಹನಿ ನೀರನ್ನೂ ಯೋಚಿಸಿ ಬಳಸಬೇಕಾಗುತ್ತದೆ.

ಕೃಷಿ ಹೊಂಡವೇ ಮೂಲ

ವಿವಿ ಆವರಣದಲ್ಲಿರುವ ಬೋರ್‌ವೆಲ್‌ಗಳು, ಬೆಳೆಗಳಿಗೆ ನೀರು ನೀಡಲು ರೂಪಿಸಿದ ಕೃಷಿ ಹೊಂಡವೇ ವಿವಿಗೆ ನೀರಿನ ಸೆಲೆ. ವಿವಿ ಸ್ಥಾಪನೆಯಾಗಿ 8 ವರ್ಷಗಳಾದರೂ ಶಾಶ್ವತವಾಗಿ ನೀರು ಒದಗಿಸುವ ವ್ಯವಸ್ಥೆಯಿಲ್ಲ. ಪ್ರತಿ ವರ್ಷ ಬೇಸಿಗೆಯಲ್ಲಿ ಲಭ್ಯವಾಗುವ ನೀರನ್ನೇ ಉಳಿಸಿ ಬಳಸಿ ತೋಟಗಾರಿಕೆ ಬೆಳೆಗಳನ್ನು ರಕ್ಷಿಸಲಾಗುತ್ತಿದೆ. ವಿವಿಯ 150 ಎಕರೆ ಆವರಣದಲ್ಲಿ ಮಾವು, ದಾಳಿಂಬೆ ಸೇರಿದಂತೆ ಹಣ್ಣುಗಳ ಗಿಡಗಳು, ನಾನಾ ತರಕಾರಿ ಸಸ್ಯಗಳು, ಪುಷ್ಪ ಸಸ್ಯಗಳು, ಔಷಧೀಯ ಸಸ್ಯಗಳು, ತೆಂಗಿನ ಮರಗಳು ಸೇರಿದಂತೆ ಸಾವಿರಾರು ಸಸಿ, ಗಿಡಗಳಿವೆ. ಬಿಟಿಡಿಎ ಮೂಲಕ ಒದಗಿಸುವ ನೀರನ್ನು ಹನಿ ನೀರಾವರಿ ಮೂಲಕ ಗಿಡಗಳನ್ನು ಪೋಷಿಸಲಾಗುತ್ತಿದೆ. ಇನ್ನು ವಿವಿಯ ಮುಖ್ಯ ಕಟ್ಟಡ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳಿಗೆ ಈ ನೀರು ಪೂರೈಕೆಯಾಗಬೇಕು.

ವಿವಿಯಲ್ಲಿ ನಿರಂತರ ನೀರಿನ ಕೊರತೆಯಾಗುತ್ತಿದ್ದಂತೆ ಸಮಸ್ಯೆಗೆ ಸ್ಪಂದಿಸಿದ ಜನಪ್ರತಿನಿಧಿಗಳು ಶಾಶ್ವತ ನೀರು ಒದಗಿಸುವ ಯೋಜನೆ ಜಾರಿಗೆ ಚಿಂತನೆ ನಡೆಸಿದರು. ವಿವಿ ಆವರಣದಲ್ಲಿ ಡಿ.24 ರಂದು ತೋಟಗಾರಿಕೆ ಮೇಳ ಉದ್ಘಾಟಿಸಿದ್ದ ಸಿಎಂ ಕುಮಾರಸ್ವಾಮಿ ಅವರಿಗೆ ನೀರಿನ ಯೋಜನೆ ಬಗ್ಗೆ ನೆನಪಿಸಲಾಗಿತ್ತು. ಶೀಘ್ರದಲ್ಲಿ ಯೋಜನೆ ಪೂರ್ಣಗೊಳಿಸಿ ನೀರು ಒದಗಿಸುವ ಭರವಸೆ ಮುಖ್ಯಮಂತ್ರಿಯಿಂದ ದೊರೆತಿತ್ತು. ಗದ್ದನಕೇರಿ ಬಳಿಯ ಬಿಟಿಡಿಎ ಟ್ಯಾಂಕ್‌ ಮೂಲಕ ಘಟಪ್ರಭಾ ನದಿ ನೀರನ್ನು ಅಂದಾಜು 8 ಕಿ.ಮೀ. ಪೈಪ್‌ಲೈನ್‌ ಮೂಲಕ ವಿವಿಗೆ ಹರಿಸುವ ಯೋಜನೆ ರೂಪಿಸಲಾಯಿತು. ಚುನಾವಣೆ ನೀತಿ ಸಂಹಿತೆಯಿಂದಾಗಿ ಯೋಜನೆ ಕಾಗದದಲ್ಲೇ ಅನುಷ್ಠಾನಗೊಂಡಿದೆ. ಸಣ್ಣ ನೀರಾವರಿ ಇಲಾಖೆಯಿಂದ ನೀರು ಪೂರೈಕೆ ಯೋಜನೆ ಪೂರ್ಣಗೊಳ್ಳಬೇಕಿದೆ. ಕುಡಿವ ನೀರಿಗಾಗಿ ನವನಗರ ಯುನಿಟ್‌ 2 ರಿಂದ ಪೈಪ್‌ಲೈನ್‌ ಮುಖಾಂತರ ನೀರು ಪೂರೈಸುವ ಕಾಮಗಾರಿ ಆರಂಭಗೊಳ್ಳಬೇಕಿದೆ.

ರಜೆಯಿಂದ ಸಮಸ್ಯೆಯಿಲ್ಲ

ಸದ್ಯ ಬೋರ್‌ವೆಲ್‌ ಹಾಗೂ ಬಿಟಿಡಿಎದ ಮಲೀನ ನೀರಿನ ಶುದ್ಧೀಕರಣ ಘಟಕದಲ್ಲಿರುವ ನೀರನ್ನು ಕೃಷಿ ಹೊಂಡಕ್ಕೆ ತುಂಬಿಸಿ ಗಿಡಗಳಿಗೆ ಬಿಡಲಾಗುತ್ತಿದೆ. ವಿವಿ ವಿದ್ಯಾರ್ಥಿಗಳಿಗೆ ರಜೆಯಿರುವುದರಿಂದ ಕುಡಿವ ನೀರಿನ ಬೇಡಿಕೆ ಕಡಿಮೆಯಿದೆ. ಹೀಗಾಗಿ ಸದ್ಯ ನೀರಿನ ಹಾಹಾಕಾರವಿಲ್ಲ. ಆದರೆ ಸಮರ್ಪಕವಾಗಿ ಮಳೆ ಸುರಿಯದಿದ್ದರೆ ಗಿಡಗಳಿಗೆ ನೀರುಣಿಸಲು ಮತ್ತೆ ನೀರಿನ ಮೂಲ ಹುಡುಕಬೇಕಾಗುತ್ತದೆ. ಶಾಶ್ವತ ನೀರು ಪೂರೈಕೆ ಯೋಜನೆ ಈ ವರ್ಷವಾದರೂ ಸಿದ್ಧವಾದರೆ ಮುಂದಿನ ಬೇಸಿಗೆಯಲ್ಲಿ ನೀರಿನ ಕೊರತೆ ಬಾಧಿಸುವುದಿಲ್ಲ.

ತರಗತಿಗಳಿಗೆ ರಜೆಯಿರುವುದರಿಂದ ಕುಡಿವ ನೀರಿನ ಕೊರತೆ ಅಷ್ಟಾಗಿ ಕಾಡಿಲ್ಲ. ಶಾಶ್ವತ ನೀರು ಪೂರೈಕೆ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯ ಲಭ್ಯವಿರುವ ನೀರನ್ನು ಗಿಡಗಳಿಗೆ ಒದಗಿಸಲಾಗುತ್ತಿದೆ. ತೆಂಗಿನ ಮರಗಳು ಹಳದಿ ಬಣ್ಣಕ್ಕೆ ತಿರುಗಿದ್ದು ಆರೈಕೆ ಮಾಡಲಾಗುತ್ತಿದೆ.
ಇಂದ್ರೇಶ್‌, ಕುಲಪತಿ, ತೋಟಗಾರಿಕೆ ವಿಶ್ವವಿದ್ಯಾಲಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ