ಆ್ಯಪ್ನಗರ

ಆರೆಸ್ಸೆಸ್‌ ಮುಂದೆ ದಿನೇಶ್‌ ಯಾವ ಲೆಕ್ಕ ?

ಬಾಗಲಕೋಟ: 'ಇಂದಿರಾ ಗಾಂಧಿಯವರಿಗೆ ಆರೆಸ್ಸೆಸ್‌ ಮಟ್ಟ ಹಾಕಲು ಆಗಲಿಲ್ಲ, ಇನ್ನು ದಿನೇಶ್‌ ಗುಂಡೂರಾವ್‌ ಯಾವ ಲೆಕ್ಕ' ಎಂದು ಬಿಜೆಪಿ ಮುಖಂಡ, ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಪ್ರಶ್ನಿಸಿದರು.

Vijaya Karnataka 9 Apr 2019, 5:00 am
ಬಾಗಲಕೋಟ: 'ಇಂದಿರಾ ಗಾಂಧಿಯವರಿಗೆ ಆರೆಸ್ಸೆಸ್‌ ಮಟ್ಟ ಹಾಕಲು ಆಗಲಿಲ್ಲ, ಇನ್ನು ದಿನೇಶ್‌ ಗುಂಡೂರಾವ್‌ ಯಾವ ಲೆಕ್ಕ' ಎಂದು ಬಿಜೆಪಿ ಮುಖಂಡ, ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಪ್ರಶ್ನಿಸಿದರು.
Vijaya Karnataka Web what is dinesh next to the rss
ಆರೆಸ್ಸೆಸ್‌ ಮುಂದೆ ದಿನೇಶ್‌ ಯಾವ ಲೆಕ್ಕ ?


ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಆರೆಸ್ಸೆಸ್‌ ಟಿಕೆಟ್‌ ಮಾರಾಟ ಮಾಡುತ್ತಿದೆ ಎಂದು ಹೇಳಿ ದಿನೇಶ್‌ ಕೀಳು ಪ್ರಚಾರ ಪಡೆಯುತ್ತಿದ್ದಾರೆ. ಆರೆಸ್ಸೆಸ್‌ ಟೀಕಿಸಿದ ಇಂದಿರಾ, ನೆಹರೂ ಉದ್ಧಾರ ಆಗಲಿಲ್ಲ. ಈ ಸಂಘಟನೆ ಮಟ್ಟ ಹಾಕುತ್ತೇನೆ ಎಂದು ಸಿದ್ದರಾಮಯ್ಯ ಕೂಡ ಹೇಳಿದ್ದರು. ಇಂತಹ ನೂರು ಸಿದ್ದರಾಮಯ್ಯ, ಸಾವಿರ ದಿನೇಶ್‌ ಬಂದರೂ ಆರೆಸ್ಸೆಸ್‌ಗೆ ಏನೂ ಆಗುವುದಿಲ್ಲ. ಸಂಘಟನೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಆರೆಸ್ಸೆಸ್‌ ಸ್ವಯಂಸೇವಕರಾಗಿರುವುದರಿಂದ ಮೋದಿ ಅವರು ವಿಶ್ವದ ನಾಯಕರಾಗಿದ್ದಾರೆ. ಇದು ನಮ್ಮಂತಹ ಕೋಟಿ ಕೋಟಿ ಸೇವಕರಿಗೆ ಹೆಮ್ಮೆಯಾಗಿದೆ. ದಿನೇಶ್‌ಗೆ ಹುಚ್ಚು ಹಿಡಿದಿದೆ, ಅವರು ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದಾರೆ. ಅವಳು ಸಹೋದರಿ ಸಮಾನರಾಗಿದ್ದಾರೆ, ಆ ಬಗ್ಗೆ ನಾನು ಮಾತನಾಡುವುದಿಲ್ಲ. ದಿನೇಶ್‌ ಹೇಳಿಕೆ ಸಿಂಹದ ಬಗ್ಗೆ ಇರುವೆ ಕೂಗಿದ ಹಾಗಿದೆ'ಎಂದು ಹೇಳಿದರು.

ಸಿಎಂ ಮಾತಿನಿಂದ ನೋವು

ಪುಲ್ವಾಮಾ ದಾಳಿ ಬಗ್ಗೆ ಮಾಹಿತಿಯಿತ್ತು ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, 'ಇವರು ಹೇಳಿದ್ದನ್ನು ನೋಡಿದರೆ ದೇಶದ ಬಗ್ಗೆ ಇವರಿಗೆಷ್ಟು ಗೌರವವಿದೆ ಎನ್ನುವುದು ಗೊತ್ತಾಗುತ್ತದೆ. ಯೋಧರ ಬಗ್ಗೆ ಕಾಳಜಿಯಿದ್ದರೆ ಮೋದಿಯವರಿಗೆ ತಿಳಿಸಲು ಆಸಕ್ತಿಯಿರದಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬಹುದಿತ್ತು. ಸೈನ್ಯವೇ ಉಗ್ರವಾದಿಗಳಿಗೆ ಸಹಕಾರ ನೀಡುತ್ತಿದೆ ಎನ್ನುವಷ್ಟರ ಮಟ್ಟಿಗೆ ಸಿಎಂ ಹೇಳುವ ಸ್ಥಿತಿ ಬಂದಿದೆ. ದಾಳಿ ಬಗ್ಗೆ ಎರಡು ವರ್ಷ ಮೊದಲೇ ಗೊತ್ತಿದ್ದರೂ ಸೈನಿಕರು ಸಾಯಲಿ ಎಂದು ಸಿಎಂ ಕುಳಿತಿದ್ದರಾ?, ಈ ಮಾತು ಕೇಳಿ ನೋವಾಗಿದೆ' ಎಂದರು.

'ಅಯೋಗ್ಯ ಎನ್ನುವ ಪದ ಸಿಎಂ ಕುಮಾರಸ್ವಾಮಿಗೆ ಬೇಸರ ತಂದಿದ್ದರೆ ಯೋಗ್ಯತೆಯಿಲ್ಲದ ಸಿಎಂ ಎಂದು ಕರೆಯುತ್ತೇನೆ. ನಾಳೆ ಐಟಿ ರೇಡ್‌ ಮಾಡುತ್ತಾರೆ ಎಂದು ಸಿಎಂ ಹೇಳಿದ್ದು ಕಳ್ಳರು ತಪ್ಪಿಸಿಕೊಳ್ಳಿ ಎಂದು ಹೇಳಿದ ಹಾಗಿದೆ. ಮಾರನೇ ದಿನ ಅವರೇ ಹೇಳಿಕೆ ನೀಡಿ ಸಿಕ್ಕಿದ್ದು ಬರೀ 39 ಸಾವಿರ ರೂ. ಎಂದರು. ಅವರ ಶಿಷ್ಯಂದಿರು ರೇಡ್‌ನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದೀಗ ಐಟಿ ರೇಡ್‌ನಲ್ಲಿ ಮತ್ತಷ್ಟು ಹಣ ದೊರೆತಿದೆ. ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷವನ್ನು ಮುಗಿಸಿಬಿಟ್ಟಿದ್ದಾರೆ. ಅವರು ಸಿಎಂ ಇದ್ದಾಗ ಮತ್ತೆ ಸಿಎಂ ಆಗ್ತೀನಿ ಎಂದಿದ್ದರು, ಕಾಂಗ್ರೆಸ್‌ 78 ಸ್ಥಾನ ಗಳಿಸಿ ಮುಗಿದು ಹೋಯಿತು. ಈಗ ಜೆಡಿಎಸ್‌ ಮುಗಿಸುವ ಕೆಲಸವನ್ನು ಅವರು ಮಾಡಲಿದ್ದಾರೆ, ಚಾಮುಂಡೇಶ್ವರಿಯಲ್ಲಿ ನನ್ನನ್ನು ಸೋಲಿಸಿದರು ಎಂದು ಆರೋಪಿಸುತ್ತಾರೆ. ಕೊರಟಗೆರೆಯಲ್ಲಿ ಪರಮೇಶ್ವರ್‌ರನ್ನು ಸೋಲಿಸಿದ್ದಾರೆ, ಅವರು ಇವರನ್ನು ಬಿಡುವುದಿಲ್ಲ. ಸ್ನೇಹ, ಮೈತ್ರಿ ಎನ್ನುವುದು ಕಾಂಗ್ರೆಸ್‌ಗೆ ಗೊತ್ತಿಲ್ಲ, ಬೆನ್ನಿಗೆ ಚೂರಿ ಹಾಕುವುದನ್ನೇ ಸ್ನೇಹ ಎಂದು ಭಾವಿಸಿದ್ದಾರೆ' ಎಂದು ಟೀಕಿಸಿದರು.

'ಹೆಲಿಕಾಪ್ಟರ್‌ ಸಿಗುತ್ತಿಲ್ಲ ಎಂದು ಸಿಎಂ ಹೇಳಿರುವುದು ಹಾಸ್ಯಾಸ್ಪದವಾಗಿದೆ. ಚುನಾವಣೆಗೆ ಮೊದಲೇ ಎಲ್ಲ ತಯಾರಿ ಮಾಡಿಕೊಳ್ಳಬೇಕು, ಕೊನೆ ಗಳಿಗೆಯಲ್ಲಿ ಕಾಪ್ಟರ್‌ ಸಿಗುವುದಿಲ್ಲ. ಮಂಡ್ಯದಲ್ಲಿ ಸಿಎಂಗೆ ಪುತ್ರನ ಗೆಲುವು ಬಿಟ್ಟರೆ ಬೇರೆಡೆ ಆಸಕ್ತಿಯಿಲ್ಲ. ಹಾಸನ, ತುಮಕೂರಿಗೂ ಕುಮಾರಸ್ವಾಮಿ ಪ್ರಚಾರಕ್ಕೆ ಹೋಗಿಲ್ಲ ' ಎಂದು ವ್ಯಂಗ್ಯವಾಡಿದರು.

ನಿಖಿಲ್‌ ಸೋಲಿನ ಭಯ

'ಮಗ ಸೋಲುತ್ತಾನೆ ಎಂಬ ಭಯದಿಂದ ಸಿಎಂ ಸಂಚು ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ರಾಜಕಾರಣದಲ್ಲಿ ಒಬ್ಬರನ್ನೊಬ್ಬರು ಸೋಲಿಸುವುದು ಸಾಮಾನ್ಯ, ಇದನ್ನು ಸಂಚು ಎಂದು ಹೇಳಲಾಗುವುದಿಲ್ಲ. ಮೈತ್ರಿ ಬಗ್ಗೆ ವಿಶ್ವಾಸವಿದ್ದವರು ಮಂಡ್ಯದಲ್ಲಿ ಯಾಕೆ ಸೋಲಿನ ಸಂಚು ರೂಪಿಸಿದ್ದಾರೆ ಎಂಬ ಪ್ರಶ್ನೆ ಕೇಳುತ್ತಾರೆ. ಮಂಡ್ಯದಲ್ಲಿ ಪ್ರಚಾರಕ್ಕೆ ಹೋಗುವುದಿಲ್ಲ ಎಂದ ಸಿದ್ದರಾಮಯ್ಯ ಅವರಿಗೆ ನಿಖಿಲ್‌, ಅನಿತಾ ಕುಮಾರಸ್ವಾಮಿಯವರು ಪ್ರಚಾರಕ್ಕೆ ಬನ್ನಿ ಎಂದು ಆಹ್ವಾನಿಸಿದರು. ಸುಮಲತಾರನ್ನು ಸೋಲಿಸಲು ರಾಹುಲ್‌ ಗಾಂಧಿಯವರನ್ನು ಕರೆ ತರುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲೆಲ್ಲಿ ಜೆಡಿಎಸ್‌ ಗೆಲ್ಲಲಿದೆ ಎಂಬುದನ್ನು ಸವಾಲು ಹಾಕಲಿ' ಎಂದು ಈಶ್ವರಪ್ಪ ಛೇಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ