ಆ್ಯಪ್ನಗರ

ಗಿರೀಶ್‌ ಕಾರ್ನಾಡ್‌ ವಿರುದ್ಧ ಕ್ರಮ ಏಕಿಲ್ಲ?

ಬಾಗಲಕೋಟ: ಸಾಹಿತಿ ಗಿರೀಶ್‌ ಕಾರ್ನಾಡ್‌ ಹಾಡಹಗಲೇ ನಾನು ನಕ್ಸಲ್‌ ಪರವಾಗಿದ್ದೇನೆ ಎಂದು ಹೇಳಿಕೆ ನೀಡಿದ್ದರೂ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದರು.

Vijaya Karnataka 10 Sep 2018, 5:00 am
ಬಾಗಲಕೋಟ: ಸಾಹಿತಿ ಗಿರೀಶ್‌ ಕಾರ್ನಾಡ್‌ ಹಾಡಹಗಲೇ ನಾನು ನಕ್ಸಲ್‌ ಪರವಾಗಿದ್ದೇನೆ ಎಂದು ಹೇಳಿಕೆ ನೀಡಿದ್ದರೂ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web whats wrong with girish karnad
ಗಿರೀಶ್‌ ಕಾರ್ನಾಡ್‌ ವಿರುದ್ಧ ಕ್ರಮ ಏಕಿಲ್ಲ?


ನಗರದಲ್ಲಿ ಕರೆದಿದ್ದ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಕ್ಸಲ್‌ ಚಟುವಟಿಕೆಗೆ ಕಡಿವಾಣ ಹಾಕಲು ಸರಕಾರಗಳು ಸಾಕಷ್ಟು ಕ್ರಮ ಕೈಗೊಳ್ಳುತ್ತಿವೆ. ಈ ಪರಿಸ್ಥಿತಿಯಲ್ಲಿ ನಾಡಿಗೆ ಬೆಳಕಾಗಬೇಕಾದ ಸಾಹಿತಿ ಗಿರೀಶ ಕಾರ್ನಾಡ್‌ ನಾನು ನಕ್ಸಲ್‌ ಎಂದು ಬೋರ್ಡ್‌ ನೇತಾಕಿಕೊಳ್ಳುತ್ತಿದ್ದಾರೆ. ಸೈನಿಕರು, ಪೊಲೀಸರ ರಕ್ತ ಹರಿಸುವ ನಕ್ಸಲ್‌ರಂಥ ದೇಶದ್ರೋಹಿಗಳ ಪರ ಮಾತನಾಡುವ ಮೂಲಕ ಕಾರ್ನಾಡ್‌ ದೇಶದ ಕಾನೂನು ವ್ಯವಸ್ಥೆಗೆ ಭಂಗ ತಂದಿದ್ದಾರೆ ಎಂದು ದೂರಿದರು.

ಗೌರಿ ಲಂಕೇಶ ಹತ್ಯೆ ಪ್ರಕರಣ ಸೇರಿದಂತೆ ಹಲವು ಪ್ರಕರಣದಲ್ಲಿ ಸಾಕ್ಷಿ ಇಲ್ಲದಿದ್ದರೂ ಹಿಂದು ಸಂಘಟನೆ ಸದಸ್ಯರನ್ನು ಬಂಧಿಸಲಾಗಿದೆ. ಗಿರೀಶ್‌ ಕಾರ್ನಾಡ್‌ ಅವರ ವಿರುದ್ಧ ರಾಜ್ಯದಲ್ಲಿ ಈಗಾಗಲೆ 3 ಪ್ರಕರಣ ದಾಖಲಾಗಿದ್ದು ಅವರನ್ನು ಏಕೆ ಬಂಧಿಸಿಲ್ಲ. ಹಾಡಹಗಲೇ ನಕ್ಸಲ್‌ ಪರ ಹೇಳಿಕೆ ನೀಡಿದ ಅವರನ್ನು ಇನ್ನೂ ಏಕೆ ಬಂಧಿಸಿಲ್ಲ. ಇದನ್ನು ಗಮನಿಸಿದರೆ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಸರಕಾರದಿಂದ ನಡೆದಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ದೇಶದ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಜನ ರೊಚ್ಚಿಗೇಳುವ ಮುಂಚೆ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದರು.

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಂಡಳಿಗೆ ಪೊಲೀಸರು ನಾನಾ ಷರತ್ತುಗಳ ಮೂಲಕ ತಡೆಯೊಡ್ಡುತ್ತಿದ್ದಾರೆ. ಗಣೇಶ ಪ್ರತಿಷ್ಠಾಪನೆ ಮಂಡಳಿಗಳೇನು ಉಗ್ರ ಸಂಘಟನೆಗಳೇ ಎಂದು ಪ್ರಶ್ನಿಸಿದ ಅವರು, ದೇಶದ ಸ್ವಾತಂತ್ರ್ಯದ ಅವಧಿಯಲ್ಲಿ ರಾಷ್ಟ್ರದ ಜನತೆ ಒಂದುಗೂಡಲು ಸ್ವದೇಶ ಕಿಚ್ಚು ಹಚ್ಚಲು ನಡೆದ ಇಂಥ ಸಾಂಸ್ಕೃತಿಕ ಕಾರ್ಯಕ್ರಮಗಳ ವಿರುದ್ಧ ಹೊರಡಿಸಿದ ಷರತ್ತುಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಚಿಕ್ಕಮಗಳೂರಿನ ದತ್ತ ಪೀಠ ವಿಷಯ್ದಲ್ಲಿ ರಾಜ್ಯ ಸರಕಾರಕ್ಕೆ ಈಗಾಗಲೆ ಉಚ್ಚ ನ್ಯಾಯಾಲಯ ಛೀಮಾರಿ ಹಾಕಿದೆ. ದತ್ತ ಪೀಠ ಹಿಂದು ಪೀಠವಾಗಿದೆ. ಬಾಬಾ ಬುಡನಗಿರಿ ದರ್ಗಾ ದತ್ತ ಪೀಠದಿಂದ 6 ಕಿಮೀ. ದೂರದಲ್ಲಿನ ನಾಗೇನಹಳ್ಳಿಯಲ್ಲಿ ಮಂಜೂರಾಗಿದೆ. ಅಲ್ಲಿ ಮುಜರಾಯಿ ಇಲಾಖೆಯಿಂದ ಅನುದಾನ ದೊರೆಯುತ್ತದೆ. ಸರಕಾರ ಕೂಡಲೆ ದತ್ತ ಪೀಠವನ್ನು ಹಿಂದುಗಳಿಗೆ ಬಿಟ್ಟು ಕೊಡಬೇಕು ಎಂದು ಆಗ್ರಹಿಸಿ ಅ.25ರಂದು ರಾಜ್ಯದ ಎಲ್ಲ ಜಿಲ್ಲೆಗಳಿಂದ ಮನವಿ ಸಲ್ಲಿಸಲಾಗುವುದಲ್ಲದೆ ಅ.28ರಂದು ದತ್ತಪೀಠ ಚಲೋ ಅಭಿಯಾನದೊಂದಿಗೆ ಚಿಕ್ಕಮಗಳೂರಿಗೆ ಹೊರಡಲಿದ್ದೇವೆ ಎಂದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇಬೇಕು. ಲೋಕಸಭೆಯಲ್ಲಿ ಸೋಮನಾಥ ಮಂದಿರ ಕುರಿತು ನಿರ್ಣಯ ತೆಗೆದುಕೊಂಡಂತೆ ಕೂಡಲೆ ಅಯೋಧ್ಯೆ ವಿಷಯದಲ್ಲೂ ಸೂಕ್ತ ನಿರ್ಧಾರವಾಗಬೇಕು. ಕೇಂದ್ರ ಸರಕಾರ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಅಯೋಧ್ಯೆ ವಿಷಯ ಸೇರಿಸಿಕೊಂಡಿತ್ತು. ಇದುವರೆಗೂ ಮಂದಿರ ನಿರ್ಮಾಣ ಕುರಿತಂತೆ ಯಾವುದೇ ಬೆಳವಣಿಗೆ ಆಗಿಲ್ಲ. ಈ ವಿಷಯ ಕುರಿತು ಪ್ರವೀಣ ತೋಗಾಡಿಯಾ ದೊಡ್ಡ ಪ್ರಮಾಣದಲ್ಲಿ ದನಿ ಎತ್ತಿದ್ದಾರೆ. ಈ ದನಿ ಗಟ್ಟಿಯಾದರೆ ರಾಮನ ಶಾಪದಿಂದಲೇ ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದರು.

ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಅಮರಣ್ಣವರ, ಬೆಳಗಾವಿ ವಿಭಾಗದ ಪ್ರಮುಖ ಆನಂದ ಜಂಬಗಿಮಠ ಇತರರು ಇದ್ದರು.


ಹಿಂದು ಸಂಘಟನೆಯವರು ಕೇವಲ ಭಾಷಣ ಮಾಡಿದರೆ ಪೊಲೀಸರು ಸ್ವಯಂ ಪ್ರೇರಿತ ದೂದು ದಾಖಲಿಸಿಕೊಳ್ಳುತ್ತಾರೆ. ಆದರೆ ಬಹಿರಂಗವಾಗಿ ನಾನು ನಕ್ಸಲ್‌ ಪರ ಎಂಬುದನ್ನು ಕಾರ್ನಾಡ್‌ ತೋರ್ಪಡಿಸಿದರೂ ಪೊಲೀಸರು ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದರೆ ದೇಶದಲ್ಲಿ ಎರಡೆರಡು ಕಾನೂನುಗಳಿವೆಯೇ ಎಂಬ ಅನುಮಾನ ಮೂಡುತ್ತಿದೆ.

-ಗಂಗಾಧರ ಕುಲಕರ್ಣಿ, ರಾಜ್ಯ ಕಾರ್ಯದರ್ಶಿ, ಶ್ರೀರಾಮ ಸೇನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ