ಬೈಲಹೊಂಗಲ: ದೇಶ ಸ್ವಾತಂತ್ರ್ಯ ಪಡೆದು ಏಳು ದಶಕ ಕಳೆದರೂ ನಾಗರಿಕರು ಸರಕಾರಿ ಅನುಕೂಲ ಹಾಗೂ ಮೂಲ ಸೌಲಭ್ಯಗಳಿಗೆ ಕಚೇರಿಯಿಂದ ಕಚೇರಿಗೆ ಅಲೆದರೂ ಸಿಗದ ಸ್ಥಿತಿ ಇದೆ. ಇಂಥ ಸಂದರ್ಭದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಗ್ರಾಮೀಣ ಪ್ರದೇಶಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಮುಕ್ತ ಗ್ರಾಮ ಹಾಗೂ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವುದು ವಿನೂತನ ಮತ್ತು ಮಾದರಿ. ಈ ಮೂಲಕ ನ್ಯಾಯಾಂಗದ ಕ್ರಿಯಾಶೀಲತೆ ಎತ್ತಿಹಿಡಿದಂತಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಬೈಲಹೊಂಗಲ ತಾಲೂಕಿನ ಸಂಪಗಾವಿಯ ಆರ್ಇಎಸ್ ಪ್ರೌಢಶಾಲಾ ಮೈದಾನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾಡಳಿತದ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ಸಾರ್ವಜನಿಕ ಕುಂದು-ಕೊರತೆ ನಿವಾರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ರೂವಾರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾ ಪ್ರಧಾನ ನ್ಯಾಯಾಧೀಶ ಆರ್.ಜೆ. ಸತೀಶ್ ಸಿಂಗ್ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಪಡಿತರ ಚೀಟಿ, ಆಧಾರ್, ಚಾಲನಾಪತ್ರ, ಶೌಚಾಲಯ, ಕುಡಿಯುವ ನೀರು ಹಾಗೂ ಇತರೆ ಮೂಲ ಸೌಲಭ್ಯಗಳು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ, ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕಾನೂನು ಪ್ರಾಧಿಕಾರ ಕಾನೂನು ಕಾಲೇಜುಗಳ ನೆರವಿನಿಂದ ಸಂಪಗಾವಿ, ತಿಗಡಿ ಮತ್ತು ಹಣ್ಣಿಕೇರಿ ಗ್ರಾಮಗಳ ಪರಿಸ್ಥಿತಿ ಕುರಿತು ವರದಿ ತರಿಸಿಕೊಂಡಿತ್ತು. ಆ ಪ್ರಕಾರ ಇಂದು ಸಮಸ್ಯೆ ನಿವಾರಣೆ ಮತ್ತು ಸೌಲಭ್ಯ ವಿತರಣೆ ಮಾಡಲಾಗುತ್ತಿದೆ. ಪೊಲೀಸ್ ದೂರುಗಳಿದ್ದರೆ ಸ್ಥಳದಲ್ಲೇ ಪರಿಹರಿಸಲಾಗುತ್ತದೆ ಎಂದರು.
ತಥಾಗತ ಹಾರ್ಟ್ ಸೆಂಟರ್ನ ಮುಖ್ಯಸ್ಥ ಡಾ. ಮಹಾಂತೇಶ ಚರಂತಿಮಠ, ಬೆಳಗಾವಿ ಬಾರ್ ಕೌನ್ಸಿಲ್ ಅಧ್ಯಕ್ಷ ಎಸ್.ಎಸ್. ಕಿವಡಸಣ್ಣವರ್ ಮಾತನಾಡಿದರು. ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಡಿವೈಎಸ್ಪಿ ಶೇಖರ ಅಗಡಿ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಶಂಕರಣ್ಣ ಸಿದ್ನಾಳ ಮತ್ತು ಇತರರು ವೇದಿಕೆ ಮೇಲಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ನ್ಯಾಯಾಧೀಶ ಕಿರಣ ಕಿಣಿ ಸ್ವಾಗತಿಸಿದರು. ಶೋಭಾರಾಣಿ ಹಿರೇಮಠ ವಂದಿಸಿದರು. ನಾಗರಿಕರಿಗೆ ಸೌಲಭ್ಯ ನೀಡಲು ನಾನಾ ಇಲಾಖೆಯವರು ಪ್ರತ್ಯೇಕ ಕೌಂಟರ್ಗಳನ್ನು ತೆರೆದಿದ್ದರು. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷ ಣ ಕುರಿತು ಮಾರ್ಗದರ್ಶನ ನೀಡಲು ಸಮಾಲೋಚನೆ ಸಭೆ ನಡೆಸಲಾಯಿತು.
ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತ್, ನ್ಯಾಯವಾದಿಗಳ ಸಂಘಟನೆ, ಬಿಮ್ಸ್, ಆರ್ಎಲ್ ಲಾ ಕಾಲೇಜು, ಬಿ.ವಿ. ಬೆಲ್ಲದ ಲಾ ಕಾಲೇಜು, ಬೆಂಗಳೂರಿನ ತಥಾಗತ್ ಹಾರ್ಟ್ ಸೆಂಟರ್, ನಾನಾ ಇಲಾಖೆ ಹಾಗೂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನ್ಯಾಯಮೂರ್ತಿಗಳಿಂದ ಪರಿಸರ ಪಾಠ
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹೈಕೋರ್ಟ್ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ, ಕಾನೂನು ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಿಗೆ ಪರಿಸರ ಪಾಠ ಮಾಡಿದರು. ಒಂದು ಕಡೆಗೆ ಜನರ ಕುಂದು-ಕೊರತೆ ನಿವಾರಣೆ ಗಡಿಬಿಡಿ ಇದ್ದರೆ ಮತ್ತೊಂದು ಕಡೆಗೆ ಪರಿಸರ ಕಾಳಜಿ ಕುರಿತ ಬೋಧನೆ ಗಮನ ಸೆಳೆಯಿತು.
ಬೆಳಗಾವಿ ಆರ್.ಎಲ್. ಲಾ ಕಾಲೇಜು ಮತ್ತು ಬಿ.ವಿ. ಬೆಲ್ಲದ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳನ್ನು ಮುಂದೆ ಕೂಡಿಸಿಕೊಂಡ ನ್ಯಾಯಮೂರ್ತಿಗಳು, ಭವಿಷ್ಯದ ಕುರಿತೂ ಮಾರ್ಗದರ್ಶನ ಮಾಡಿದರು. ವಕೀಲರಾಗುವವರಿಗೆ ಹಾಗೂ ವಕೀಲರಾದವರಿಗೆ ಸಾಮಾಜಿಕ ಬದ್ಧತೆ, ಕಳಕಳಿ ಇತರರಿಗಿಂತಲೂ ಹೆಚ್ಚಿಗೆ ಇರಬೇಕು. ನ್ಯಾಯವಾದಿಗೆ ಧ್ವನಿ ಮತ್ತು ಭಾಷೆ ಅಸ್ತ್ರವಿದ್ದಂತೆ. ಕಾನೂನು ಜ್ಞಾನದೊಂದಿಗೆ ಇದನ್ನು ಸಮಾಜ ಕಲ್ಯಾಣಕ್ಕೆ ಸರಿಯಾಗಿ ಬಳಕೆ ಮಾಡಬೇಕು. ಸಕಲ ಜೀವರಾಶಿಗೆ ಪರಿಸರವೇ ಆಧಾರ. ಇದನ್ನು ಉಳಿಸಿ ಬೆಳೆಸಬೇಕು. ನ್ಯಾಯಾಂಗ ಈ ವಿಷಯವಾಗಿ ಅನೇಕ ನಿರ್ದೇಶನ, ಮಾರ್ಗದರ್ಶನಗಳನ್ನು ನೀಡಿದೆ ಎಂದರು.