ಬೆಳಗಾವಿ: ಕಾಂಗ್ರೆಸ್ನಲ್ಲಿ ಅಭಿಪ್ರಾಯ ಭೇದಗಳು ಇವೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಚುನಾವಣೆಗೆ ಒಂದೇ ಧ್ವನಿ ರೂಪಿಸಲಾಗುತ್ತದೆ ಎಂದು ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಿನ್ನಮತ ನಿವಾರಣೆ, ಎಲ್ಲರನ್ನೂ ಒಗ್ಗೂಡಿಸುವುದು, ಪಕ್ಷ ಬಲಿಷ್ಠಗೊಳಿಸುವ ಕಾರ್ಯದಲ್ಲಿ ಎಲ್ಲರನ್ನೂ ತೊಡಗಿಸುವುದು ಮತ್ತು ಟಿಕೆಟ್ ಆಕಾಂಕ್ಷಿಗಳ ಕುರಿತು ಚರ್ಚಿಸಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪಕ್ಷದ ಹಾಲಿ ಶಾಸಕರು, ಮಾಜಿ ಶಾಸಕರು, ಪ್ರಮುಖರು ಹಾಗೂ ರಾಜ್ಯ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಈ ಸಂಬಂಧ ಆಯಾ ಜಿಲ್ಲೆಯಲ್ಲೇ ಸಭೆ ನಡೆಯಲಿದ್ದು, ಬೆಳಗಾವಿ ಜಿಲ್ಲೆಯ ಸಭೆ ಜುಲೈ 11 ರಂದು ನಡೆಯಲಿದೆ ಎಂದರು.
ಪಕ್ಷದ ಹಿರಿಯ ನಾಯಕರು, ಸ್ಥಾನಿಕ ಪ್ರಮುಖರ ಅಭಿಪ್ರಾಯ ಒಳಗೊಂಡ ಅಭ್ಯರ್ಥಿಗಳ ಸಾಮಾನ್ಯ ಪಟ್ಟಿಯೊಂದನ್ನು ಹೈಕಮಾಂಡ್ಗೆ ನೀಡಲಿದ್ದಾರೆ. ಈ ಪಟ್ಟಿ ಅನುಸರಿಸಿ ಅಭ್ಯರ್ಥಿಗಳ ಕುರಿತು ಪೂರ್ವಸಮೀಕ್ಷೆ ನಡೆಸಿ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.
ಮಾಧ್ಯಮಗಳಲ್ಲಿ ಬಿಂಬಿತವಾದಂತೆ ಜಾರಕಿಹೊಳಿ ಸಹೋದರರ ನಡುವೆ ಗಂಭೀರ ಭಿನ್ನಮತವೇನೂ ಇಲ್ಲ. ಅದು ಸಾಮಾನ್ಯ ಅಭಿಪ್ರಾಯ ಭೇದವಷ್ಟೆ. ಅದು ಬಗೆಹರಿಯುತ್ತದೆ. ನನ್ನ ಸಹೋದರರು ಏನೇನೋ ಹೇಳಿದರೆಂದು ಕಿವಿಗೊಡಬೇಕಿಲ್ಲ. ಲಖನ್ ಜಾರಕಿಹೊಳಿಗೆ ಟಿಕೆಟ್ ನೀಡುವ ಕುರಿತು ಪಕ್ಷ ನಿರ್ಧಾರ ಕೈಗೊಳ್ಳುತ್ತದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.