ಬೆಳಗಾವಿ: 2018ರ ಫೆಬ್ರವರಿಯಲ್ಲಿ ಶ್ರವಣಬೆಳಗೊಳದಲ್ಲಿ ನಡೆಯುವ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಅಂಗವಾಗಿ ಡಿ.20 ರಂದು ಬೆಳಗಾವಿಯಿಂದ ಬೃಹತ್ ಅಹಿಂಸಾ ಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಆಚಾರ್ಯ ಶ್ರೀ ಚಿನ್ಮಯಸಾಗರ ಮಹಾರಾಜರು (ಜಂಗಲವಾಲೆ ಬಾಬಾ) ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ''ಜನರಲ್ಲಿ ಅಹಿಂಸೆ, ಸರ್ವಧರ್ಮ ಸಮಾನತೆ ಮತ್ತು ವ್ಯವಸಮುಕ್ತ ಸಮಾಜ ನಿರ್ಮಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಬೃಹತ್ ಅಂಹಿಸಾ ಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ'' ಎಂದರು.
''ಡಿ. 20ರಂದು ಮಧ್ಯಾಹ್ನ 1 ಗಂಟೆಗೆ ನಗರದ ಧರ್ಮನಾಥ ವೃತ್ತ ಬಳಿಯ ಧರ್ಮನಾಥ ಭವನದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಒಟ್ಟು 40 ದಿನಗಳ ಕಾಲ 600 ಕಿ.ಮೀ. ಕ್ರಮಿಸಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗುವುದು. ಪಾದಾಯತ್ರೆಯುದ್ದಕ್ಕೂ ಪ್ರವಚನ, ಆಧ್ಯಾತ್ಮಿಕ ಚಿಂತನೆ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಶಾಲೆ, ಸಂಘ-ಸಂಸ್ಥೆಗಳಿಗೂ ಭೇಟಿ ನೀಡಿ ಅಂಹಿಸೆ ಕುರಿತು ಜಾಗೃತಿ ಮೂಡಿಸಲಾಗುವುದು'', ಎಂದು ಹೇಳಿದರು.
ಜೈನ ಸಮುದಾಯದ ಮುಖಂಡರಾದ ವಿನೋದ ದೊಡ್ಡಣ್ಣವರ, ಕೀರ್ತಿಕುಮಾರ ಕಾಗವಾಡ, ಅಶೋಕ ಜೈನ, ಎ.ಆರ್. ಉಪ್ಪಿನ, ಬಾಹುಬಲಿ ಸಾವಂತ, ಜಲತ್ಕುಮಾರ ಪುಣಜಗೌಡ ಇತರರು ಇದ್ದರು.
ಪ್ರಚಾರ ರಥಯಾತ್ರೆ
ಅಹಿಂಸಾ ಪಾದಯಾತ್ರೆಗೂ ಮುಂಚೆ ಡಿ. 19ರಂದು ಬೆಳಗಾವಿ ನಗರದಲ್ಲಿ 'ಬಾಹುಬಲಿ ಮಹಾಮಸ್ತಕಾಭಿಷೇಕ ಪ್ರಚಾರ ರಥ ಯಾತ್ರೆ' ಆಯೋಜಿಸಲಾಗಿದೆ. ಅಂದು ಸಂಜೆ 5.30 ಗಂಟೆಗೆ ನಗರದ ಸಮಾದೇವಿ ವೃತ್ತ ಬಳಿ ರಥಯಾತ್ರೆಗೆ ಚಾಲನೆ ನೀಡಲಾಗುವುದು. ನಗರದ ವಿವಿಧ ಗಲ್ಲಿಗಳಲ್ಲಿ ಸಂಚರಿಸುವ ಮೂಲಕ ಪಾಶ್ವನಾಥ ಜಿನ ಮಂದಿರದಲ್ಲಿ ಮುಕ್ತಾಯಗೊಳ್ಳುವುದು ಎಂದು ದಕ್ಷಿಣ ಭಾರತ ಜೈನ್ ಸಭೆ ಸದಸ್ಯ ಎ.ಎ.ನೇಮನ್ನವರ ಮಾಹಿತಿ ನೀಡಿದರು.