ಆ್ಯಪ್ನಗರ

46 ದಿನಗಳಲ್ಲಿ 719 ಪ್ರಕರಣ

ಚುನಾವಣೆ ಆಯೋಗ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ 46 ದಿನಗಳಲ್ಲಿ ದಾಖಲೆಯಿಲ್ಲದೇ ಸಾಗಣೆ ಮಾಡುತ್ತಿದ್ದ 2.89 ಕೋಟಿ ರೂಪಾಯಿ

Vijaya Karnataka 25 Apr 2019, 5:00 am
ಲಗಮಣ್ಣ ಸಣ್ಣಲಚ್ಚಪ್ಪಗೋಳ ಬೆಳಗಾವಿ
Vijaya Karnataka Web Bank-note


ಚುನಾವಣೆ ಆಯೋಗ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ 46 ದಿನಗಳಲ್ಲಿ ದಾಖಲೆಯಿಲ್ಲದೇ ಸಾಗಣೆ ಮಾಡುತ್ತಿದ್ದ 2.89 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದು, 719 ಪ್ರಕರಣಗಳನ್ನು ದಾಖಲಿಸಿದೆ.

ಬೆಳಗಾವಿ, ಚಿಕ್ಕೋಡಿ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ 18 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಆಯೋಗ 57 ಚೆಕ್‌ಪೋಸ್ಟ್‌, 80 ಫ್ಲೈಯಿಂಗ್‌ ಸ್ಕ್ವಾಡ್‌ ನಿರ್ಮಿಸಿ ನಿರಂತರ ತಪಾಸಣೆ ಕೈಗೊಂಡಿತ್ತು. ಈ ವೇಳೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ನಗದು, ಚಿನ್ನಾಭರಣ, ಮದ್ಯ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದೆ.

ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಮಾ.10 ರಿಂದ ಏ.24ರ ವರೆಗೆ ಜಾರಿಯಲ್ಲಿತ್ತು. ಈ ಅವಧಿಯಲ್ಲಿ 2.89 ಕೋಟಿ ರೂ. ನಗದು ವಶಪಡಿಸಿಕೊಂಡಿದೆ. 10 ಲಕ್ಷ ರೂ.ಗೂ ಮೇಲ್ಪಟ್ಟ ನಗದು ಇರುವ ಪ್ರಕರಣಗಳನ್ನು ತೆರಿಗೆ ಇಲಾಖೆಗೆ ನೀಡಿದೆ. ಜತೆಗೆ 85.81 ಲಕ್ಷ ರೂ. ಮೌಲ್ಯದ ಮದ್ಯ, 17.91 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 63.55 ಲಕ್ಷ ರೂ. ಮೌಲ್ಯದ 62 ದ್ವಿಚಕ್ರ ವಾಹನಗಳು, 7 ಕಾರ್‌, ಒಂದು ಲಾರಿ, ಒಂದು ಆಟೋ, 407 ಗೂಡ್ಸ್‌ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲೆಯ ಚಿಕ್ಕೋಡಿ, ಬೆಳಗಾವಿ, ಉತ್ತರ ಕನ್ನಡ ಲೋಕಸಭೆ ಕ್ಷೇತ್ರಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಬೆಂಬಲಿತರು ಅಕ್ರಮವಾಗಿ ನಗದು ಮತ್ತು ಮದ್ಯ ಸಾಗಿಸುವ ವೇಳೆ ಸಿಕ್ಕಿ ಬಿದ್ದಿದ್ದಾರೆ. ಇನ್ನು ಕೆಲವೆಡೆ ಫ್ಲೈಯಿಂಗ್‌ ಸ್ಕ್ವಾಡ್‌, ಅಬಕಾರಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಚುನಾವಣಾ ಆಯೋಗ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಚುನಾವಣೆ ಹೊರತಾದ ಕೆಲಸಗಳಿಗೆ ಬಳಸಲು ದಾಖಲೆ ಇಲ್ಲದ ನಗದು ವಶಪಡಿಸಿಕೊಂಡ ಪ್ರಕರಣಗಳೂ ಸೇರ್ಪಡೆಗೊಂಡಿವೆ.

ಕಳೆದ ಬಾರಿಗಿಂತ ಹೆಚ್ಚು
2014ರ ಲೋಕಸಭೆ ಚುನಾವಣೆಯಲ್ಲಿ ನಾಮಪತ್ರ ವಾಪಸ್‌ ಪಡೆಯುವ ದಿನದವರೆಗೆ ಜಿಲ್ಲೆಯಲ್ಲಿ 124 ಪ್ರಕರಣಗಳು ದಾಖಲಾಗಿದ್ದವು. ಆದರೆ, ಈ ಬಾರಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆಯ 46 ದಿನಗಳಲ್ಲಿ 719 ಪ್ರಕರಣಗಳು ದಾಖಲಾಗಿವೆ. ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಅತಿ ಹೆಚ್ಚು ಅಂದರೆ, 358 ಪ್ರಕರಣಗಳು ದಾಖಲಾಗಿದ್ದು, ಚಿಕ್ಕೋಡಿ ಕ್ಷೇತ್ರದಲ್ಲಿ 291 ಪ್ರಕರಣಗಳು ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಖಾನಾಪುರ, ಕಿತ್ತೂರ ವಿಧಾನಸಭಾ ಕ್ಷೇತ್ರದಲ್ಲಿ 70 ಪ್ರಕರಣಗಳು ದಾಖಲಾಗಿವೆ. ಒಟ್ಟು 719 ಪ್ರಕರಣಗಳು ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ