ಆ್ಯಪ್ನಗರ

ಗಮನ ಸೆಳೆದ ಬೃಹತ್‌ ಮ್ಯಾರಥಾನ್‌ ಓಟ

ಬೆಳಗಾವಿ: ಮಾದಕ ದ್ರವ್ಯ ...

Vijaya Karnataka 13 Aug 2018, 5:00 am
ಬೆಳಗಾವಿ: ಮಾದಕ ದ್ರವ್ಯ ತ್ಯಜಿಸುವಂತೆ ಜಾಗೃತಿ ಮೂಡಿಸಲು ನಗರದಲ್ಲಿ ಭಾನುವಾರ ಬೃಹತ್‌ ಮ್ಯಾರಥಾನ್‌ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಜಿಟಿ ಜಿಟಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಜನ ಮ್ಯಾರಥಾನ್‌ನಲ್ಲಿ ಪಾಲ್ಗೊಂಡು ಸಾಮಾಜಿಕ ಕಾಳಜಿ ಮೆರೆದರು.
Vijaya Karnataka Web BLG-1208-2-52-12RAJU-2


ಬೆಳಗ್ಗೆ 6.30ಕ್ಕೆ ಸಿಪಿಇಡಿ ಮೈದಾನದಲ್ಲಿ ನೆರೆದಿದ್ದ ಪೊಲೀಸ್‌ ಅಧಿಕಾರಿ, ಸಿಬ್ಬಂದಿ, ಕೆಎಸ್‌ಆರ್‌ಪಿ ಪೊಲೀಸ್‌ ಸಿಬ್ಬಂದಿ, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ನಾಗರಿಕರು, ಯುವಜನ ಸೇವಾ ಮತ್ತು ಕ್ರಿಡಾ ಇಲಾಖೆಯ 400 ಓಟಗಾರರು, ಎಂಎಲ್‌ಐಆರ್‌ಸಿ ಜವಾನರು ಒಳಗೊಂಡ 2,100ಕ್ಕೂ ಹೆಚ್ಚಿನ ಜನರ ಮ್ಯಾರಥಾನ್‌ಗೆ ಉತ್ತರ ವಲಯದ ಆರಕ್ಷಕ ಮಹಾನಿರೀಕ್ಷಕ ಅಲೋಕಕುಮಾರ ಬಾವುಟ ಬೀಸುವ ಮೂಲಕ ಚಾಲನೆ ನೀಡಿದರು. ಸ್ವತಃ ಅಲೋಕಕುಮಾರ ಮತ್ತು ಡಿಸಿಪಿ ಸೀಮಾ ಲಾಟ್ಕರ್‌ 5 ಕಿಮೀ ಮ್ಯಾರಥಾನ್‌ ಓಟ ಪೂರ್ಣಗೊಳಿಸಿ ಹಾಗೂ ಪೊಲೀಸ್‌ ಆಯುಕ್ತ ಡಾ. ಡಿ.ಸಿ. ರಾಜಪ್ಪ ಓಟಕ್ಕೆ ದೂರದವರೆಗೆ ಸಾಥ್‌ ನೀಡಿ ಉತ್ತೇಜಿಸಿ ಗಮನ ಸೆಳೆದರು. ಎಸಿಪಿ, ಪಿಐ ಮತ್ತಿತರ ಅಧಿಕಾರಿಗಳು ಇವರ ಜತೆಗಿದ್ದರು.

ಮ್ಯಾರಥಾನ್‌ 5 ಮತ್ತು 10 ಕಿಮೀ ಎರಡು ವಿಭಾಗದಲ್ಲಿ ನಡೆಯಿತು. 5 ಕಿಮೀ ಓಟದಲ್ಲಿ ಎಸ್‌.ಕೆ. ಯಾದವ (ಪ್ರ), ಎಂ.ಎಸ್‌. ನಡಾಲ (ದ್ವಿ), ಎಂ.ಕೆ. ಭಿಶೊನಯ (ತೃ), ಮಂಜುನಾಥ ಜರ್ಸಿ (4ನೇ), ನಾಯಕ ನಿತಿನ ಜಾಧವ (5ನೇ) ಬಹುಮಾನ ಪಡೆದರು. 10 ಕಿಮೀ ಓಟದಲ್ಲಿ ವೆಂಕಪ್ಪ ಡೊಳ್ಳಿನ (ಪ್ರ), ಸೈದಪ್ಪ ಮ್ಯಾಗೇರಿ (ದ್ವಿ), ಸಿದ್ಧಾರ್ಥ ದಿವಾಕರ (ತೃ), ವೇಣುಗೋಪಾಲ (4ನೇ), ಗೋವಿಂದ ಜೋಶಿ (5ನೇ) ಬಹುಮಾನ ಗಿಟ್ಟಿಸಿಕೊಂಡರು. ಪೊಲೀಸ್‌ ಅಧಿಕಾರಿಗಳಲ್ಲಿ ಉದ್ಯಮಬಾಗ ಪಿಐ ನಿರಂಜನ ಪಾಟೀಲ (ಪ್ರ), ಮಾರಿಹಾಳ ಪಿಐ ವಿಜಯ (ದ್ವಿ), ಸಿಎನ್‌ಎಸ್‌ ಪಿಐ ಬಿ.ಆರ್‌. ಗಡ್ಡೇಕರ್‌ (ತೃ) ಬಹುಮಾನ ಪಡೆದರು. 25ಕ್ಕೂ ಹೆಚ್ಚು ಜನರಿಗೆ ಅಲೋಕಕುಮಾರ ಮತ್ತು ಇತರೆ ಗಣ್ಯರು ಪದಕ, ಸ್ಮರಣಿಕೆ ನೀಡಿ ಗೌರವಿಸಿದರು.

ಆರೋಹ ಸಂಸ್ಥೆಯ ಮನಿಷಾ ಭಟ್‌ ಕಾರ್ಯಕ್ರಮ ನಡೆಸಿಕೊಟ್ಟರು. ಮೈದಾನದಲ್ಲಿ ಜಂಬೋ ನೃತ್ಯದ ಮೂಲಕ ಎಲ್ಲರಿಗೂ ವ್ಯಾಯಾಮ ಮಾಡಿಸಿದರು. ಮ್ಯಾರಥಾನ್‌ ನಗರದ ಜನರಲ್ಲಿ ಕುತೂಹಲ ಕೆರಳಿಸಿತ್ತು.

ನಗರ ಪೊಲೀಸ್‌ ಆಯುಕ್ತಾಲಯ ಮತ್ತು ಬೆಂಗಳೂರಿನ ಆರೋಹಣ ಸಂಸ್ಥೆ ಸಂಯುಕ್ತವಾಗಿ ಮ್ಯಾರಥಾನ್‌ ಏರ್ಪಾಟು ಮಾಡಿದ್ದವು. ಭಾಗಿಯಾಗಿದ್ದ ಎಲ್ಲರಿಗೂ ನಂದಿನಿಯ ಬದಾಮ್‌ ಮಿಲ್ಕ್‌, ಬಿಸ್ಕಿಟ್‌ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿತ್ತು. ರಾಯಲ್‌ ಎನ್‌ಫಿಲ್ಡ್‌ ಶೋರೂಂ, ಜೈನ್‌ ಗ್ರುಪ್‌, ನಿಯಾಜ್‌ ವೇಣು ಧ್ವನಿ ರೇಡಿಯೋ ಹಾಗೂ ಇತರೆ ಸಂಸ್ಥೆಯವರು ಇದಕ್ಕೆ ಕೈಜೋಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ