ಆ್ಯಪ್ನಗರ

3 ತಿಂಗಳಲ್ಲಿ ಬೃಹತ್‌ ಮೃಗಾಲಯ ಆರಂಭ

ಬೆಳಗಾವಿ: ತಾಲೂಕಿನ ಭೂತರಾಮನಟ್ಟಿಯ ಕಿತ್ತೂರು ...

Vijaya Karnataka 10 Jun 2019, 5:00 am
ಬೆಳಗಾವಿ: ತಾಲೂಕಿನ ಭೂತರಾಮನಟ್ಟಿಯ ಕಿತ್ತೂರು ರಾಣಿ ಚನ್ನಮ್ಮ ಉದ್ಯಾನದಲ್ಲಿ ಮುಂದಿನ ಮೂರು ತಿಂಗಳಲ್ಲಿ ರಾಜ್ಯದ ಎರಡನೇ ಅತಿ ದೊಡ್ಡ ಮೃಗಾಲಯ ಪ್ರಾರಂಭವಾಗಲಿದೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
Vijaya Karnataka Web BEL-9 LBS 1


ಇಲ್ಲಿನ ಕ್ಲಬ್‌ ರಸ್ತೆಯ ಹ್ಯೂಮ್‌ ಪಾರ್ಕ್‌ನಲ್ಲಿ ಭಾನುವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಸಸ್ಯ ಸಂತೆ ಮತ್ತು ತೋಟಗಾರಿಕೆ ಅಭಿಯಾನದ ಕಾರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

50 ಕೋಟಿ ವೆಚ್ಚ: ರಾಜ್ಯದ ಮೈಸೂರು ಹೊರತುಪಡಿಸಿದರೆ ಯಾವುದೇ ಸ್ಥಳದಲ್ಲಿ ಮೃಗಾಲಯ ಇಲ್ಲ. ಈಗ ಬೆಳಗಾವಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮೃಗಾಲಯಕ್ಕಾಗಿ ಈಗಾಗಲೇ ಎರಡು ಹುಲಿಗಳನ್ನು ಕಾಯ್ದಿರಿಸಲಾಗಿದೆ. ಪ್ರಮುಖ 16 ವನ್ಯ ಪ್ರಾಣಿಗಳನ್ನು ಮೃಗಾಲಯಕ್ಕೆ ಮುಂದಿನ ಮೂರು ತಿಂಗಳಲ್ಲಿ ತರಲಾಗುವುದು. ಉದ್ಯಾನವನದಲ್ಲಿನ ನೀರಿನ ಸಮಸ್ಯೆಗೆ ಮಾರ್ಕಂಡೇಯ ಜಲಾಶಯದಿಂದ ಪೈಪ್‌ಲೈನ್‌ ಮೂಲಕ ನೀರು ತರುವ ವ್ಯವಸ್ಥೆ ಮಾಡಲಾಗಿದೆ. ತಡೆಗೋಡೆ ನಿರ್ಮಾಣ ಕಾಮಗಾರಿಯೂ ಪೂರ್ಣಗೊಂಡಿದೆ. ಐದು ವರ್ಷಗಳಲ್ಲಿ ಮೃಗಾಲಯಕ್ಕೆ 50 ಕೋಟಿ ರೂ. ಖರ್ಚು ಮಾಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ತಾಲೂಕಿನಲ್ಲೂ ಸಂತೆ: ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರವೀಂದ್ರ ಹಕಾಟೆ ಮಾತನಾಡಿ, ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುವ ಸಸ್ಯ ಸಂತೆಯಲ್ಲಿ 3.73 ಲಕ್ಷ ಸಸ್ಯಗಳನ್ನು ಮಾರಾಟ ಮಾಡುವ ಗುರಿ ಇದೆ. ಜಿಲ್ಲೆಯ ಪ್ರತಿ ತಾಲೂಕು, ಸಂತೆಗಳು ನಡೆಯುವ ಸ್ಥಳದಲ್ಲಿ ಸಸ್ಯ ಸಂತೆ ಆಯೋಜನೆ ಮಾಡಲಾಗಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಸಂತೆಯಲ್ಲಿ 8 ಸಾವಿರ ಸಸ್ಯಗಳನ್ನು ಇರಿಸಲಾಗಿದೆ. ಜೂ.9 ರಿಂದ ಜೂ.30 ರವರೆಗೆ ಸಸ್ಯ ಸಂತೆ ನಡೆಯಲಿದೆ. ಹೆಚ್ಚಿನ ಬೇಡಿಕೆ ಬಂದರೆ ಮತ್ತೆ ಸಂಗ್ರಹ ಮಾಡಲಾಗುವುದು. ಕಳೆದ ವರ್ಷ ಸಸ್ಯ ಸಂತೆಯಲ್ಲಿ 3.7 ಲಕ್ಷ ಸಸ್ಯಗಳನ್ನು ಮಾರಾಟ ಮಾಡಲಾಗಿದೆ ಎಂದು ತಿಳಿಸಿದರು.

ಶಾಸಕ ಅನಿಲ ಬೆನಕೆ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕಿರಣ ಉಫಾಳೆ ಮೊದಲಾದವರು ಉಪಸ್ಥಿತರಿದ್ದರು.

ಹಲಗಾ ಗ್ರಾಮದಲ್ಲಿ ಮಹಾನಗರ ಪಾಲಿಕೆಯಿಂದ ನಿರ್ಮಾಣ ಮಾಡಲು ಉದ್ದೇಶಿಸಿರುವ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸಂಬಂಧಿಸಿದಂತೆ ಜೂ.10ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಎಲ್ಲರೂ ಸೇರಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸುವರ್ಣ ವಿಧಾನಸೌಧಕ್ಕೆ ಭೂಮಿ ನೀಡಿದ ರೈತರಿಗೆ ಪ್ರತಿ ಎಕರೆಗೆ 13 ಲಕ್ಷ ರೂ. ನೀಡಲಾಗಿದೆ. ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೂಮಿ ನೀಡಿರುವ ರೈತರಿಗೂ 13 ಲಕ್ಷಕ್ಕಿಂತ ಹೆಚ್ಚಿನ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು.
-ಸತೀಶ ಜಾರಕಿಹೊಳಿ, ಅರಣ್ಯ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ