ಆ್ಯಪ್ನಗರ

ಕಿತ್ತೂರು ಡಬಲ್‌ ಮರ್ಡರ್‌ ಆರೋಪಿ ಬಂಧನ

ಬೆಳಗಾವಿ/ಕಿತ್ತೂರು ಕಿತ್ತೂರಿನ ಪೆಟ್ರೋಲ್‌ ಬಂಕ್‌ನಲ್ಲಿ ಮಲಗಿದ್ದ ಇಬ್ಬರ ಕೊಲೆ ...

Vijaya Karnataka 26 May 2019, 5:00 am
ಬೆಳಗಾವಿ/ಕಿತ್ತೂರು : ಕಿತ್ತೂರಿನ ಪೆಟ್ರೋಲ್‌ ಬಂಕ್‌ನಲ್ಲಿ ಮಲಗಿದ್ದ ಇಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿತ್ತೂರು ಪೊಲೀಸರು 24 ವರ್ಷದ ಕಾರ್ಮಿಕನನ್ನು ಶನಿವಾರ ಬಂಧಿಸಿದ್ದಾರೆ.
Vijaya Karnataka Web BEL-25KITTUR PHOTO 1


ಧಾರವಾಡ ತಾಲೂಕಿನ ಬೈಲೂರು ಕೈಗಾರಿಕೆ ಪ್ರದೇಶದಲ್ಲಿ ದಿನಗೂಲಿ ನೌಕರ, ಕಲ್ಲಾಪುರ ಗ್ರಾಮದ ಭೀಮಪ್ಪ ಮಲ್ಲಪ್ಪ ತೀರ್ಥಪ್ಪನವರ ಬಂಧಿತ ಆರೋಪಿ. ಸಾಲ ತೀರಿಸಲು ಹಣಕ್ಕಾಗಿ ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಎಸ್‌ಪಿ ಸುಧೀರ್‌ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.

ಪೆಟ್ರೋಲ್‌ ಬಂಕ್‌ನಲ್ಲಿ ಮಲಗಿದ್ದ ಖಾನಾಪುರ ತಾಲೂಕು ಲಿಂಗದಹಳ್ಳಿ ಗ್ರಾಮದ ಮಂಜುನಾಥ ಪಟ್ಟಣಶೆಟ್ಟಿ (23), ಕಿತ್ತೂರು ತಾಲೂಕು ತಿಗಡೊಳ್ಳಿ ಗ್ರಾಮದ ಮುಷ್ತಾಕ ಅಹ್ಮದ್‌ ಬೀಡಿ (35) ಎನ್ನುವವರನ್ನು ಮೇ 15ರ ಮುಂಜಾನೆ 3.30ರಷ್ಟೊತ್ತಿಗೆ ಕೊಚ್ಚಿ ಕೊಲೆ ಮಾಡಲಾಗಿತ್ತು.

ಇವರಲ್ಲಿ ಒಬ್ಬ ಪ್ರೆಟ್ರೋಲ್‌ ಬಂಕ್‌ ಕಚೇರಿ ಹೊರಗಡೆ ಹಾಗೂ ಮತ್ತೊಬ್ಬ ಕಚೇರಿ ಒಳಗೆ ಮಲಗಿದ್ದರಿಂದ ಪರಸ್ಪರರ ಮೇಲೆ ನಡೆದ ದಾಳಿ ಇವರಿಗೆ ತಿಳಿಯಲಿಲ್ಲ. ಜತೆಗೆ ಬಂಕ್‌ನಲ್ಲಿದ್ದ 50 ಸಾವಿರ ರೂ. ಕಳುವಾಗಿದೆ ಎಂದು ಬಂಕ್‌ನ ಮ್ಯಾನೇಜರ್‌ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು. ಜತೆಗೆ ಆರೋಪಿ ಮೃತ ಮಂಜುನಾಥನ ಮೊಬೈಲ್‌ ದೋಚಿ ತಲೆಮರೆಸಿಕೊಂಡಿದ್ದ.

ಆರೋಪಿ ಬಂಕ್‌ನ ಕಚೇರಿಯಲ್ಲಿ ಹಣಕ್ಕಾಗಿ ಹುಡುಕಾಟ ನಡೆಸಿದ್ದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆರೋಪಿ ಕದ್ದಿರುವ ಮೊಬೈಲ್‌ನ ಐಎಂಇಐ ನಂಬರ್‌ ಮೇಲೆ ಪೊಲೀಸರು ಗಮನ ಇಟ್ಟಿದ್ದರು. ಕೊಲೆಯಾದ 10 ದಿನಗಳ ನಂತರ ಆರೋಪಿ ಭೀಮಪ್ಪ ಬೇರೆ ಸಿಮ್‌ ಕಾರ್ಡ್‌ನಿಂದ ಮಂಜುನಾಥನ ಮೊಬೈಲ್‌ ಬಳಸಲು ಆರಂಭಿಸಿದ್ದ. ಸುಳಿವು ದೊರೆತ ಪೊಲೀಸರು ಜಾಡು ಬೆನ್ನತ್ತಿದಾಗ ಆರೋಪಿಯು ಮನೆಯಲ್ಲಿ ಸಿಕ್ಕಿಬಿದ್ದಿದ್ದಾನೆ.

ನಾಯಿಗೆ ಹೆದರಿ ಸಮಯ ಬದಲಿಸಿದ್ದ
''ಆರೋಪಿಯ ಊರು ಕಲ್ಲಾಪುರ ಗ್ರಾಮ ಧಾರವಾಡ ತಾಲೂಕು ವ್ಯಾಪ್ತಿಯಲ್ಲಿದ್ದರೂ ಅದು ಕಿತ್ತೂರಿನಿಂದ ಸುಮಾರು 10 ಕಿ.ಮೀ. ದೂರದಲ್ಲಿತ್ತು. ಆರೋಪಿ ವಾಹನಕ್ಕೆ ಪೆಟ್ರೋಲ್‌ ಹಾಕಿಸುವ ನೆಪದಲ್ಲಿ ಆಗಾಗ ಕಿತ್ತೂರು ಪೆಟ್ರೋಲ್‌ ಬಂಕ್‌ಗೆ ಬರುತ್ತಿದ್ದ. ಇದು ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದವರಿಗೆ ಅರಿವಿಗೆ ಬಂದಿರಲಿಲ್ಲ'', ಎಂದು ಎಸ್‌ಪಿ ಸುಧೀರ್‌ ಕುಮಾರ ಘಟನೆ ಬಗ್ಗೆ ವಿವರಿಸಿದರು. ಘಟನೆ ನಡೆದ ದಿನ ಆರೋಪಿಯು ರಾತ್ರಿ 1.30ಕ್ಕೆ ಪೆಟ್ರೋಲ್‌ ಬಂಕ್‌ಗೆ ಬಂದಿದ್ದ. ಆ ಸಮಯದಲ್ಲಿ ಅಲ್ಲಿದ್ದ ನಾಯಿಗಳು ಬೊಗಳಿದ್ದರಿಂದ ಮಂಜುನಾಥ ಎಚ್ಚರಗೊಂಡಿದ್ದ. ಅದಕ್ಕೆ ಹೆದರಿ ತೆರಳಿದ್ದ. ಸುಮಾರು 3.30ಕ್ಕೆ ಮತ್ತೆ ಬಂದು ಬಂಕ್‌ನ ಇಬ್ಬರನ್ನೂ ಪರ್ಸಿಯಿಂದ ಕೊಚ್ಚಿದ್ದಾನೆ. ಬಳಿಕ ಹಣ ಕದ್ದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ