ಆ್ಯಪ್ನಗರ

ಶ್ರೀರಾಮ ಸೇನೆ ಸದಸ್ಯರಿಂದ ಪರ್ಯಾಯ ಸಂಘ ರಚನೆ

ಬೆಳಗಾವಿ:ರಾಜಕೀಯ ಕಾರಣಕ್ಕೆ ...

Vijaya Karnataka 3 Sep 2018, 5:00 am
ಬೆಳಗಾವಿ: ರಾಜಕೀಯ ಕಾರಣಕ್ಕೆ ಸೃಷ್ಟಿಯಾದ ಮನಸ್ತಾಪದಿಂದಾಗಿ 'ಶ್ರೀರಾಮ ಸೇನೆ'ಯ ಬೆಳಗಾವಿ ಜಿಲ್ಲಾ ಘಟಕದ ಕಾರ್ಯಕರ್ತರು ಸಾಮೂಹಿಕವಾಗಿ ಸೇನೆ ತೊರೆದು 'ಶ್ರೀರಾಮ ಸೇನಾ ಹಿಂದೂಸ್ತಾನ್‌' ಎನ್ನುವ ಪರ್ಯಾಯ ಸಂಘ ಸ್ಥಾಪಿಸಿಕೊಂಡಿದ್ದಾರೆ.
Vijaya Karnataka Web BLG-0209-2-52-2PRAMOD5


ನಗರದ ಖಾಸಬಾಗನಲ್ಲಿರುವ ಸಾಯಿಭವನದಲ್ಲಿ ಸೇರಿದ ಕಾರ್ಯಕರ್ತರು 'ಶ್ರೀರಾಮ ಸೇನೆ'ಗೆ ಸಾಮೂಹಿಕ ರಾಜೀನಾಮೆ ನಿರ್ಧಾರ ಪ್ರಕಟಿಸಿದರು. ಅಲ್ಲದೆ, ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ರಮಾಕಾಂತ್‌ ಕೊಂಡುಸ್ಕರ್‌ ಅವರ ನೇತೃತ್ವದಲ್ಲಿ ರಚನೆಯಾದ 'ಶ್ರೀರಾಮ ಸೇನಾ ಹಿಂದೂಸ್ತಾನ್‌' ಎನ್ನುವ ಹೊಸ ಸಂಘದ ಮೊದಲ ಸಭೆ ಅಲ್ಲಿಯೇ ನಡೆಸಲಾಯಿತು. ಶ್ರೀರಾಮ ಸೇನೆಯಲ್ಲಿದ್ದ ಕಾರ್ಯಕರ್ತರೆಲ್ಲರೂ ನೂತನ ಸಂಘಕ್ಕೆ ಸೇರ್ಪಡೆಯಾದರು.

ಶ್ರೀರಾಮ ಸೇನೆ ಯಾವುದೇ ಪಕ್ಷದಡಿ ಕೆಲಸ ಮಾಡುತ್ತಿರಲಿಲ್ಲ. ಆದರೆ, ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಅವರು 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಕೇಳಿದ್ದರು. ಸಿಗದೆ ಇದ್ದಾಗ ಬಿಜೆಪಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿಯೂ ಇದೇ ರೀತಿ ಮಾಡಿ ಸೇನೆಯ ಕಾರ್ಯಕರ್ತರನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದರು. ಈ ಕಾರಣಕ್ಕೆ ಅವರ ಸಂಘ ತೊರೆದು ಪ್ರತ್ಯೇಕ ಸಂಘ ರಚಿಸಿಕೊಂಡಿದ್ದೇವೆ. ಹಿಂದೂಪರ ಹೋರಾಟ ಬೆಂಬಲಿಸುವ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಹೊಸ ಸಂಘಕ್ಕೆ ಸೇರಿದ್ದಾರೆ ಎಂದು ರಮಾಕಾಂತ್‌ ಕೊಂಡುಸ್ಕರ್‌ 'ವಿಕ'ಕ್ಕೆ ತಿಳಿಸಿದರು.

ಪ್ರಮೋದ ಮುತಾಲಿಕ್‌ ಅವರ ವರ್ತನೆಯಿಂದ ಬೇಸತ್ತು ಎಲ್ಲ ಕಾರ್ಯಕರ್ತರು ಪರ್ಯಾಯ ಸಂಘ ರಚಿಸಿದ್ದೇವೆ. ಶ್ರೀರಾಮ ಸೇನೆಯಲ್ಲಿ ಸದಸ್ಯತ್ವ ಬಾಯಿ ಮಾತಿನಲ್ಲೇ ಇರುವುದರಿಂದ ರಾಜೀನಾಮೆ ಪತ್ರ ಕೊಡುವ ಅಗತ್ಯ ಇಲ್ಲ. ಈ ವಿಷಯ ಮುತಾಲಿಕ್‌ ಅವರಿಗೆ ತಿಳಿಸುವ ಅಗತ್ಯವೂ ಇಲ್ಲ.
-ರಮಾಕಾಂತ್‌ ಕೊಂಡುಸ್ಕರ್‌, ಶ್ರೀರಾಮ ಸೇನೆ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ