ಆ್ಯಪ್ನಗರ

ಅಘೋಷಿತ ಬಂದ್‌ ವಾತಾವರಣ

ಬೆಳಗಾವಿ: ಅಯೋಧ್ಯಾ ವಿವಾದ ಕುರಿತ ಸುಪ್ರೀಂ ...

Vijaya Karnataka 10 Nov 2019, 5:00 am
ಬೆಳಗಾವಿ: ಅಯೋಧ್ಯಾ ವಿವಾದ ಕುರಿತ ಸುಪ್ರೀಂ ಕೋರ್ಟ್‌ ತೀರ್ಪು ಹಿನ್ನೆಲೆಯಲ್ಲಿಶನಿವಾರ ಬೆಳಗಾವಿ ಜಿಲ್ಲೆಯಾದ್ಯಂತ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿತ್ತು.
Vijaya Karnataka Web 9PRAMOD8045815
ಬೆಳಗಾವಿಯ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್‌ ಭದ್ರತೆ.


ಕೆಲವು ಕಡೆ ಬೆಳಗ್ಗೆಯಿಂದಲೇ ಅಂಗಡಿ, ಮುಂಗಟ್ಟುಗಳು ಬಂದ್‌ ಆಗಿದ್ದವು. ಬೆಳಗಾವಿ ಮಹಾನಗರದಲ್ಲಿಯೂ ಕೆಲವರು ದಿನವಿಡೀ ಅಂಗಡಿ ತೆರೆಯುವ ಧೈರ್ಯ ಮಾಡಿಲ್ಲ. ವಾಹನ ಓಡಾಟ ಸಹ ವಿರಳವಿತ್ತು. ಖಾಸಗಿ ಸಾರಿಗೆಗಳು ರಸ್ತೆಗಳಿಯಲು ಹಿಂದೇಟು ಹಾಕಿದವು. ಎಲ್ಲೆಡೆ ಪೊಲೀಸರು ಗಸ್ತು ಚುರುಕುಗೊಳಿಸಿದ್ದರು. ದೇವಸ್ಥಾನ, ಮಸೀದಿಗಳಲ್ಲಿಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದೆ.

ಇನ್ನೊಂದೆಡೆ ಎರಡನೇ ಶನಿವಾರ ಸರಕಾರಿ ರಜೆ ಆಗಿದ್ದರಿಂದ ಸರಕಾರಿ ಕಚೇರಿಗಳಿರುವ ರಸ್ತೆಗಳು ಜನ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿದ್ದವು. ಬೆಳಗಾವಿ ಸೂಕ್ಷ್ಮ ಪ್ರದೇಶವಾದ್ದರಿಂದ ಜಿಲ್ಲಾಡಳಿತ ಮುಂಗಡವಾಗಿಯೇ ಜಿಲ್ಲೆಯಲ್ಲಿ144 ನಿಷೇಧಾಜ್ಞೆ ಜಾರಿಗೊಳಿಸಿತ್ತು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಹಾಗೂ ಪಾಲಕರು ಹೆಚ್ಚಿನ ನಿಗಾ ವಹಿಸಿದ್ದರಿಂದ ಬೀದಿಗಳಲ್ಲಿಮಕ್ಕಳ ಓಡಾಟವೇ ಕಾಣಿಸಲಿಲ್ಲ. ರಜೆ ಘೋಷಣೆಯ ಮಾಹಿತಿ ಇಲ್ಲದವರು ಬೆಳಗ್ಗೆ ಶಾಲಾ-ಕಾಲೇಜುಗಳತ್ತ ತೆರಳಿ ಮರಳುತ್ತಿದ್ದುದು ಕಂಡುಬಂತು. ಪ್ರಮುಖ ರಸ್ತೆಗಳು ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು. ಜನ ದಟ್ಟಣೆಯಿಂದ ಕೂಡಿರುತ್ತಿದ್ದ ಬೆಳಗಾವಿ ಗಲ್ಲಿಗಳು ಖಾಲಿ ಖಾಲಿಯಾಗಿದ್ದವು.

ಬಸ್‌ ಸಂಚಾರ ವ್ಯತ್ಯಯ
ಸುಪ್ರೀಂ ತೀರ್ಪು ಬರುವ ಹೊತ್ತಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದಲ್ಲಿಬಸ್‌ಗಳ ಓಡಾಟವನ್ನು ಸಮೀಪದ ನಿಲ್ದಾಣಗಳಲ್ಲಿತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ತೀರ್ಪು ಹೊರಬಿದ್ದ ಬಳಿಕವೂ ಸಾರ್ವಜನಿಕರ ಪ್ರತಿಕ್ರಿಯೆ ಸಹಜವಾಗಿರುವುದನ್ನು ಖಚಿತಪಡಿಸಿಕೊಂಡು ಮಧ್ಯಾಹ್ನ 12ರ ನಂತರ ಮತ್ತೆ ಸಾರಿಗೆ ಬಸ್‌ಗಳು ಸಂಚಾರ ಆರಂಭಿಸಿದವು. ಬೆಳಗ್ಗೆ ಸುಮಾರು 45 ನಿಮಿಷ ಬಸ್‌ ಸಂಚಾರ ವ್ಯವಸ್ಥೆಯಲ್ಲಿವ್ಯತ್ಯಯ ಉಂಟಾಯಿತು. ಇದರಿಂದ ದೂರದೂರಿನ ಪ್ರಯಾಣಿಕರು ಸಮಸ್ಯೆ ಅನುಭವಿಸಿದರು.

ಹಬ್ಬದ ಖರೀದಿಗೂ ಜನರಿಲ್ಲ
ಶನಿವಾರ ತುಳಸಿ ಮದುವೆ ಹಬ್ಬ ಇದ್ದರೂ ಜಿಲ್ಲೆಯ ಬಹುತೇಕ ಮಾರುಕಟ್ಟೆಗಳಲ್ಲಿಜನರ ಓಡಾಟವೇ ಕ್ಷೀಣಿಸಿತ್ತು. ಹಬ್ಬದ ಅಗತ್ಯ ಸಾಮಗ್ರಿ ಖರೀದಿಗೂ ಜನರು ಮಾರುಕಟ್ಟೆಯತ್ತ ಸುಳಿಯದೆ ದೂರ ಉಳಿದಿದ್ದರು. ಬೆಳಗಾವಿ ಮಹಾನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಮಾರುಕಟ್ಟೆಗಳು ಜನರ ಕೊರತೆ ಎದುರಿಸಿದವು. ಹಬ್ಬಕ್ಕಾಗಿ ಮಾರುಕಟ್ಟೆಗೆ ಕಬ್ಬು, ಬಾಳೆ, ಹೂವು ತಂದಿದ್ದ ವ್ಯಾಪಾರಿಗಳು ಕೂಡ ಗ್ರಾಹಕರಿಲ್ಲದೆ ತಲೆ ಮೇಲೆ ಕೈ ಹೊತ್ತಿದ್ದರು. ರಸ್ತೆ ಇಕ್ಕೆಲಗಳಲ್ಲಿಸಾಲಾಗಿರುತ್ತಿದ್ದ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆ ಸಹ ತೀರಾ ಕಡಿಮೆಯಾಗಿತ್ತು.

ಜಾಲತಾಣಗಳ ಸಂಯಮ:
ಅಯೋಧ್ಯಾ ತೀರ್ಪು ಪ್ರಕಟವಾಗಿದ್ದರೂ ಸಾಮಾಜಿಕ ಜಾಲತಾಣಗಳು ಸಂಯಮ ಕಾಪಾಡಿಕೊಂಡವು. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ಗಳಲ್ಲಿಜಿಲ್ಲೆಯ ಜನರು ಯಾವುದೇ ಅಹಿತಕರ ಸಂದೇಶ ರವಾನಿಸದೆ ಶಾಂತತೆ ಕಾಪಾಡಿಕೊಂಡಿದ್ದರು. ವಾಟ್ಸ್‌ಆ್ಯಪ್‌ ಅಡ್ಮಿನ್‌ಗಳು ಗ್ರೂಪ್‌ ಸಂದೇಶ ರವಾನಿಸುವ ಹಕ್ಕನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದರು. ಚರ್ಚೆಗಳು ಸಹ ತೀರಾ ಕಡಿಮೆ ಇದ್ದವು. ಬೆಳಗಾವಿ ರಾಜಕಾರಣಿಗಳ ಪೈಕಿ ಬಹುತೇಕರು ಸಾಮಾಜಿಕ ಜಾಲತಾಣಗಳಲ್ಲಿಅಯೋಧ್ಯಾ ತೀರ್ಪು ಕುರಿತು ಪ್ರತಿಕ್ರಿಯೆಯನ್ನೂ ದಾಖಲಿಸಲಿಲ್ಲ.

ಪೊಲೀಸರಿಂದಲೇ ಬಂದ್‌
ಚಿಕ್ಕೋಡಿ ತಾಲೂಕಿನ ಯಕ್ಸಂಬಾ, ನಾಗರಮುನ್ನೋಳಿ ಸೇರಿದಂತೆ ಹಲವೆಡೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರೇ ಬೆಳಗ್ಗೆ ಅಂಗಡಿ, ಮುಂಗಟ್ಟುಗಳನ್ನು ಬಂದ್‌ ಮಾಡಿಸಿದರು. ಅಥಣಿ, ಹುಕ್ಕೇರಿ ತಾಲೂಕುಗಳಲ್ಲಿಮಧ್ಯಾಹ್ನ 12 ಗಂಟೆವರೆಗೆ ಅಂಗಡಿ, ಮುಂಗಟ್ಟುಗಳು ಬಂದ್‌ ಆಗಿದ್ದವು. ವಾಹನ ಸಂಚಾರ ಎಂದಿನಂತೆ ಇದ್ದರೂ ಮಾರುಕಟ್ಟೆಗಳಲ್ಲಿಜನರ ಓಡಾಟ ಕಡಿಮೆ ಇತ್ತು. ಕೆಲ ಸೂಕ್ಷ್ಮ ರಸ್ತೆಗಳಲ್ಲಿಪೊಲೀಸರು ಬ್ಯಾರಿಕೇಡ್‌ ಹಾಕಿ ವಾಹನಗಳನ್ನು ನಿಯಂತ್ರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ