ಆ್ಯಪ್ನಗರ

‘ಚಿಕ್ಕೋಡಿ ಜಿಲ್ಲೆ ಮಾಡಿ, ಇಲ್ಲವೇ ಮಹಾ ರಾಜ್ಯಕ್ಕೆ ಸೇರಲು ಬಿಡಿ’

ಚಿಕ್ಕೋಡಿ: ಚಿಕ್ಕೋಡಿಯನ್ನು ಜಿಲ್ಲೆ ಮಾಡಿ...

Vijaya Karnataka 2 Dec 2018, 5:00 am
ಚಿಕ್ಕೋಡಿ: ಚಿಕ್ಕೋಡಿಯನ್ನು ಜಿಲ್ಲೆ ಮಾಡಿ. ಇಲ್ಲವೆ ಕರ್ನಾಟಕದ ಬೆಳಗಾವಿ ನಗರಕ್ಕಿಂತ ಸಾಂಗ್ಲಿ, ಕೊಲ್ಲಾಪುರ ಮತ್ತು ಸೊಲ್ಲಾಪುರ ನಗರಗಳು ಹತ್ತಿರವಿರುವ ಮಹಾರಾಷ್ಟ್ರ ರಾಜ್ಯಕ್ಕೆ ಸೇರಲು ಬಿಟ್ಟು ಬಿಡಿ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್‌. ಸಂಗಪ್ಪಗೋಳ ಸರಕಾರದ ವಿರುದ್ಧ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದರು.
Vijaya Karnataka Web BEL-1CKD3


ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಗಡಿ ಅಂಚಿನಲ್ಲಿರುವ ಗ್ರಾಮಗಳು ಅಭಿವೃದ್ಧಿಯಿಂದ ವಂಚಿತವಾಗಿದ್ದರೂ ಇಲ್ಲಿಯೇ ಏಕಿರಬೇಕು ಎಂದು ಪ್ರಶ್ನಿಸಿದ ಅವರು ನಾವು ಇಲ್ಲಿಯೇ ಇರಬೇಕಾದರೆ ರಾಜ್ಯ ಸರಕಾರವು ಯಾವುದೇ ರಾಜಕೀಯ ಹಿತಾಸಕ್ತಿಗಳಿಗೆ ಮಣಿಯದೆ ಜಿಲ್ಲೆಯ ಕೊನೆಯ ಹಳ್ಳಿಗಳ ಪ್ರಗತಿಗಾಗಿ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಇದರಿಂದ ಬೇಸತ್ತು ಕಳೆದ 15 ದಿನಗಳಿಂದ ಸಮಿತಿಯ ಸದಸ್ಯರು ಅಥಣಿ, ಕಾಗವಾಡ ಮತ್ತು ರಾಯಬಾಗ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಜನ ಜಾಗೃತಿ ಕಾರ್ಯ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಅಲ್ಲಲ್ಲಿ ನಡೆಯುವ ಸಭೆಗಳಿಗೆ ಜನರು ಬೆಂಬಲ ಸೂಚಿಸುತ್ತಿದ್ದಾರೆ.

ಶೀಘ್ರ ನಿಡಸೋಸಿಯಲ್ಲಿ ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಜಿಲ್ಲೆಯ 50 ಮಠಾಧೀಶರ ಸಭೆ ನಡೆಸಲಾಗುತ್ತಿದೆ. ನಂತರ ಚಿಕ್ಕೋಡಿಯಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಮತ್ತು ಎಲ್ಲ ಸಮಾಜದ ಮುಖಂಡರ ಸಭೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈ ವೇಳೆ ಸಾಹಿತಿ ಎಸ್‌.ವೈ. ಹಂಜಿ, ಅಪ್ಪಾಸಾಬ ಚೌಗಲಾ, ತುಕಾರಾಮ ಕೋಳಿ, ಪ್ರಕಾಶ ಮಗದುಮ್ಮ ಮತ್ತಿತರರು ಇದ್ದರು.

'ಠರಾವು ಹಾಕು' ಆಂದೋಲನ: ಎಚ್ಚರಿಕೆ:
ಸಮಿತಿಯ ಬೇಡಿಕೆಗೆ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಈ ಕೂಡಲೇ ಗಡಿಯಂಚಿನ ಹಳ್ಳಿಗಳ ಗ್ರಾಪಂಗಳಿಂದ 'ಠರಾವು ಹಾಕು' ಆಂದೋಲನ ಆರಂಭಿಸಲಾಗುವುದು. ಅದರೊಂದಿಗೆ ಗಡಿ ಗ್ರಾಮಗಳನ್ನು ಮಹಾರಾಷ್ಟ್ರ ರಾಜ್ಯಕ್ಕೆ ಸೇರ್ಪಡಿಸಿಕೊಳ್ಳುವಂತೆ ಮಹಾ ರಾಜ್ಯದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಲಾಗುವುದು ಎಂದು ಸಂಗಪ್ಪಗೋಳ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ