ಆ್ಯಪ್ನಗರ

ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ಠೇವಣಿ ವಂಚನೆ ಪ್ರಕರಣ

ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ಠೇವಣಿ ವಂಚನೆ ಪ್ರಕರಣ ದಾಖಲು - ಆನಂದ ಅಪ್ಪುಗೋಳ ಪತ್ನಿಗೆ ಸಂಬಂಧಿಸಿದ ಭೀಮಾಂಬಿಕಾ ಸೊಸೈಟಿ ಮೇಲೂ ಕ್ರಿಮಿನಲ್‌ ಕೇಸ್‌ - 5589 ಕೋಟಿ ರೂ...

Vijaya Karnataka 29 Jul 2018, 5:00 am
ಬೆಳಗಾವಿ: ಆನಂದ ಅಪ್ಪುಗೋಳ ಮಾಲೀಕತ್ವದ ಸಂಗೊಳ್ಳಿ ರಾಯಣ್ಣ ಕೋ-ಆಪರೇಟಿವ್‌ ಸೊಸೈಟಿಯ ಬಹುಕೋಟಿ ಠೇವಣಿ ವಂಚನೆ ಪ್ರಕರಣದ ಸಿಐಡಿ ವಿಚಾರಣೆ ಆರಂಭಕ್ಕೂ ಮುನ್ನ ಅವರದ್ದೇ ಮತ್ತೊಂದು ಸೊಸೈಟಿಯ ಬಹುಕೋಟಿ ಠೇವಣಿ ವಂಚನೆ ಪ್ರಕರಣ ಬೆಳಗಾವಿ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.
Vijaya Karnataka Web another multi crore deposit fraud case in belagavi
ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ಠೇವಣಿ ವಂಚನೆ ಪ್ರಕರಣ


ರಾಯಣ್ಣ ಸೊಸೈಟಿ ಅಂಗ ಸಂಸ್ಥೆಯಾದ ಶ್ರೀ ಭೀಮಾಂಬಿಕಾ ಮಹಿಳಾ ವಿವಿಧೋದ್ದೇಶ ಸೌಹಾರ್ದ ಸಹಕಾರಿಯೇ ಈ ಸಂಸ್ಥೆ. ಠೇವಣಿದಾರರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಸೌಹಾರ್ದ ಸಹಕಾರಿ ಮಂಡಳಿ ಜು.26ರಂದು ಭೀಮಾಂಬಿಕಾ ಮಹಿಳಾ ಸೊಸೈಟಿ ಮೇಲೆ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ ಅಡಿ ಎಫ್‌ಐಆರ್‌ ದಾಖಲಿಸಿದ್ದು, ಸೊಸೈಟಿ ಅಧ್ಯಕ್ಷೆ ಪ್ರೇಮಾ ಅಪ್ಪುಗೋಳ ಸೇರಿದಂತೆ 12 ನಿರ್ದೇಶಕರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ನಗರ ಅಪರಾಧ ಪತ್ತೆ ದಳ ಪೊಲೀಸರು ಈಗಾಗಲೇ ಪಂಚನಾಮೆ ಪೂರ್ಣಗೊಳಿಸಿದ್ದು, ಆರೋಪಿಗಳ ಬಂಧನಕ್ಕೆ ನ್ಯಾಯಾಲಯದ ಅನುಮತಿ ಕೋರಿದ್ದಾರೆ.

55.89 ಕೋಟಿ ರೂ.ವಂಚನೆ: ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 13 ಶಾಖೆಗಳನ್ನು ಹೊಂದಿರುವ ಶ್ರೀ ಭೀಮಾಂಬಿಕಾ ಮಹಿಳಾ ವಿವಿಧೋದ್ದೇಶ ಸೌಹಾರ್ದ ಸಹಕಾರಿಯಲ್ಲಿ ಇಲಾಖೆ ಮಾಹಿತಿ ಪ್ರಕಾರ 55.89 ಕೋಟಿ ರೂ.ಠೇವಣಿ ವಂಚನೆ ನಡೆದಿದೆ. 1000ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಸೊಸೈಟಿ ಠೇವಣಿ ಮರಳಿಸದ ಹಿನ್ನೆಲೆಯಲ್ಲಿ ಗ್ರಾಹಕರು ಸೌಹಾರ್ದ ಮಂಡಳಿಗೆ ದೂರು ನೀಡಿದ್ದರು. ''ಮಹಿಳಾ ಸೊಸೈಟಿ ವ್ಯವಹಾರಗಳ ಆಡಿಟ್‌ ವರದಿ ಅಂತಿಮ ಹಂತದಲ್ಲಿದ್ದು, ಪೂರ್ಣಗೊಂಡ ನಂತರ ಸ್ಪಷ್ಟ ಮಾಹಿತಿ ಸಿಗಲಿದೆ'', ಎಂದು ಸೌಹಾರ್ದ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಬಹುಕೋಟಿ ವಂಚನೆ ಪ್ರಕರಣವಾಗಿರುವುದರಿಂದ ಇದನ್ನೂ ಸಿಐಡಿ ತನಿಖೆಗೆ ಹಸ್ತಾಂತರಿಸಲು ಪೊಲೀಸ್‌ ಇಲಾಖೆ ಸಿದ್ಧತೆ ನಡೆಸಿದೆ.

ಭೀಮಾಂಬಿಕಾ ಸೊಸೈಟಿ ಪ್ರಕರಣದ ಆರೋಪಿಗಳು:

ಪ್ರೇಮಾ ಅಪ್ಪುಗೋಳ (ಅಧ್ಯಕ್ಷೆ), ಕಾಶವ್ವ ಉಳ್ಳಾಗಡ್ಡಿ (ಉಪಾಧ್ಯಕ್ಷೆ), ದೀಪಾ ಕಳಸಣ್ಣವರ (ಕಾರ್ಯದರ್ಶಿ) ಮತ್ತು ನಿರ್ದೆಶಕರಾದ ಸಾವಿತ್ರಿಬಾಯಿ ಅಪ್ಪುಗೋಳ, ಸತ್ತೆವ್ವ ಪಾಟೀಲ, ಸುಜಾತಾ ಸನದಿ, ತಾರವ್ವ ಪಾಟೀಲ, ಆಶಾ ಸರವೀರ, ಗೊದವ್ವ ಸನದಿ, ಅಕ್ರೆವ್ವ ಚಿಂವಗೋಳ, ರೇಣುಕಾ ಸರವೀರ ಮತ್ತು ಬಸಮ್ಮ ಕೋಲಾರ.

'ಗಜರಾಜ' ಮೇಲೂ ತನಿಖೆ ಸಾಧ್ಯತೆ:
ಆನಂದ ಅಪ್ಪುಗೋಳ ಮತ್ತು ಪತ್ನಿ ಪ್ರೇಮಾ ಅಪ್ಪುಗೋಳ ಅವರಿಗೆ ಸಂಬಂಧಿಸಿದ ಎರಡು ಸೊಸೈಟಿಗಳ ಮೇಲೆ ಠೇವಣಿ ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ಬಾಕಿ ಉಳಿದಿರುವ ಇನ್ನೊಂದು ಸಂಸ್ಥೆ ಗಜರಾಜ ಸಹಕಾರಿ ಸೊಸೈಟಿ ಮೇಲೂ ತನಿಖೆಯ ಕಾರ್ಮೋಡ ಆವರಿಸಿಕೊಂಡಿದೆ. ಸಂಗೊಳ್ಳಿ ರಾಯಣ್ಣ ಸೊಸೈಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆನಂದ ಅಪ್ಪುಗೋಳ ಮತ್ತು ಪ್ರೇಮಾ ಅಪ್ಪುಗೋಳ ಸೇರಿದಂತೆ 15ಕ್ಕೂ ಹೆಚ್ಚು ನಿರ್ದೇಶಕರು ಬಂಧನಕ್ಕೊಳಗಾಗಿದ್ದು, ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ