ಆ್ಯಪ್ನಗರ

70 ಜನರ ರಕ್ಷಣೆಗಾಗಿ ಮೂರು ದಿನ ನಡುಗಡ್ಡೆಯಲ್ಲಿದ್ದ ಎಎಸ್‌ಐ

ನೆರೆಗೆ ತುತ್ತಾದ ಜನರ ರಕ್ಷಣೆಗೆ ಹೋಗಿ ಸ್ವತಃ ಅಪಾಯಕ್ಕೆ ಸಿಲುಕಿದ ಗೋಕಾಕ ...

Vijaya Karnataka 14 Aug 2019, 8:57 am
ಮಹೇಶ್‌ ವಿಜಾಪುರ ಬೆಳಗಾವಿ
Vijaya Karnataka Web BLG-1308-2-52-13RAMAPPA

ನೆರೆಗೆ ತುತ್ತಾದ ಜನರ ರಕ್ಷಣೆಗೆ ಹೋಗಿ ಸ್ವತಃ ಅಪಾಯಕ್ಕೆ ಸಿಲುಕಿದ ಗೋಕಾಕ ಗ್ರಾಮೀಣ ಠಾಣೆ ಪೊಲೀಸ್‌ ಅಧಿಕಾರಿಯೊಬ್ಬರು ಜತೆಯಲ್ಲಿದ್ದವರಿಗೆ ಧೈರ್ಯ ಹೇಳುತ್ತಾ ಮೂರು ದಿನ ಅಲ್ಲಿಯೇ ಇದ್ದು ಸುರಕ್ಷಿತ ವಾಪಸ್‌ ಬಂದಿದ್ದಾರೆ.

ಎಎಸ್‌ಐ ರಾಮಪ್ಪ ಯಮನಪ್ಪ ತಳವಾರ ತಮ್ಮೊಂದಿಗಿದ್ದ 70 ಜನರ ಸುರಕ್ಷತೆಗಾಗಿ ಸ್ವತಃ ಅವರೊಂದಿಗೆ ಜಲಾವೃತ ಸ್ಥಳದಲ್ಲಿ ಉಳಿದು ಬಂದವರು. ಊಟ-ಆಹಾರವಿಲ್ಲದೆ ಮೂರು ದಿನ ಜನ ಸಂಪರ್ಕದಿಂದ ದೂರವಾಗಿದ್ದ ಇವರು, ನಂತರ ಸಮಯ ಪ್ರಜ್ಞೆಯಿಂದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ತಮ್ಮೊಂದಿಗಿದ್ದ ಎಲ್ಲ ಸಂತ್ರಸ್ತರನ್ನು ದಡ ಮುಟ್ಟಿಸಿದ್ದಾರೆ.

ಆಗಿದ್ದೇನು?: ಘಟಪ್ರಭಾ ನದಿ ಪ್ರವಾಹ ಗೋಕಾಕ ತಾಲೂಕಿನ ಹಳ್ಳಿಗಳಿಗೂ ಆವರಿಸಿಕೊಂಡಿತ್ತು. ನಿವೃತ್ತಿಯ ಅಂಚಿನಲ್ಲಿದ್ದರೂ ಸಂತ್ರಸ್ತರ ರಕ್ಷಣೆಯ ಜವಾಬ್ದಾರಿ ಹೊತ್ತಿದ್ದ ರಾಮಪ್ಪ ಆ.6ರಂದು ಚಿಗಡೊಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಜನರನ್ನು ಎಚ್ಚರಿಸಿದ್ದರು. ಗ್ರಾಮದ ಬಹುತೇಕರನ್ನು ಸ್ಥಳಾಂತರ ಮಾಡುವಲ್ಲಿ ಯಶಸ್ವಿಯಾಗಿದ್ದರೂ ಕೊನೆಯದಾಗಿ ಉಳಿದುಕೊಂಡಿದ್ದ 70 ಜನರು ರಾಮಪ್ಪ ಅವರ ಮತು ಕೇಳಿರಲಿಲ್ಲ. ''ಇಷ್ಟು ವರ್ಷವಾದರೂ ಇಂದಿಗೂ ಮನೆ ವರೆಗೆ ನದಿ ನೀರು ಬಂದ ಉದಾಹರಣೆ ಇಲ್ಲ. ಹಾಗಾಗಿ ನಾವು ಎಲ್ಲೂ ಬರೋದಿಲ್ಲ'', ಎಂದು ಹಠ ಹಿಡಿದರು.

ಅವರನ್ನು ಸುರಕ್ಷಿತವಾಗಿ ಅಲ್ಲಿಂದ ಹೊರತರಲು ರಾಮಪ್ಪ ಕೂಡ ಪಟ್ಟು ಹಿಡಿದಿದ್ದರು. ರಾತ್ರಿ ವೇಳೆ ಮನೆ ಬಾಗಿಲಿಗೆ ನದಿ ನೀರು ಬಂದಾಗಲೇ ಆ 70 ಜನರಿಗೆ ಆತಂಕ ಹೆಚ್ಚಾಗಿ, ತಮ್ಮ ತಪ್ಪಿನ ಅರಿವಾಗಿದ್ದು. ತಕ್ಷಣ ಸ್ಥಳಾಂತರಿಸುವಂತೆ ರಾಮಪ್ಪ ಅವರಿಗೆ ದುಂಬಾಲು ಬಿದ್ದರು. ಕತ್ತಲಾದ್ದರಿಂದ ದೋಣಿ ಸೌಲಭ್ಯ ಸಿಗದ ಕಾರಣ ಗ್ರಾಮಸ್ಥರನ್ನು ಸಂತೈಸುವುದು ರಾಮಪ್ಪ ಅವರಿಗೆ ಸವಾಲಾಗಿತ್ತು. ಎಲ್ಲರೂ ಸಮೀಪದಲ್ಲಿದ್ದ ಯಲ್ಲನಗೌಡ ಪಾಟೀಲ ಎನ್ನುವವರ ಮನೆಗೆ ತೆರಳಿ ಮನೆ ಕಟ್ಟೆ ಮತ್ತು ಟೆರೇಸ್‌ನಲ್ಲಿ ಆಸರೆ ಪಡೆದುಕೊಂಡರು.

ಆ.7ರಂದು ಬೆಳಗ್ಗೆ ನೀರು ಮತ್ತಷ್ಟು ಹೆಚ್ಚಾದಾಗ ಗ್ರಾಮದ ಜತೆಗಿನ ಎಲ್ಲ ಸಂಪರ್ಕಗಳು ಕಡಿತಗೊಂಡವು. ಚಹಾ-ನೀರು ಕೂಡ ಇಲ್ಲದಾಯಿತು. ಆದರೂ, ರಾಮಪ್ಪ ತಮ್ಮಲ್ಲಿದ್ದ ಮೊಬೈಲ್‌ ಮೂಲಕ ಮೇಲಧಿಕಾರಿಗಳ ಸಂಪರ್ಕ ಸಾಧಿಸಿದರು. ಸಂಜೆ 4 ಗಂಟೆಗೆ ಗ್ರಾಮಕ್ಕೆ ಬೋಟ್‌ ಬಂತು. ಸತತ ಕಾರ್ಯಾಚರಣೆ ಬಳಿಕ ಬಹುತೇಕರನ್ನು ಸ್ಥಳಾಂತರಿಸಿದರೂ ಕೊನೆಯ ಟ್ರಿಪ್‌ಗೆ 18 ಜನ ಉಳಿದುಕೊಂಡಿದ್ದರು. ಒಂದು ಬೋಟ್‌ನಲ್ಲಿ ಅಷ್ಟೊಂದು ಜನರನ್ನು ಸಾಗಿಸುವುದು ಕಷ್ಟ ಎನಿಸಿದಾಗ ರಾಮಪ್ಪ ನಾಲ್ಕೈದು ಜನರ ಮನವೊಲಿಸಿ ಅಲ್ಲೇ ಉಳಿಸಿಕೊಂಡು ಉಳಿದವರನ್ನು ದಡ ಸೇರಿಸಿ ಅವರೊಂದಿಗೆ ಅಲ್ಲೇ ಉಳಿದರು. ಆ.8 ರಂದು ಬೆಳಗ್ಗೆಯೇ ಬರಬೇಕಿದ್ದ ಬೋಟ್‌ ಬೇರೆ ಕಡೆ ಕೈಗೊಂಡ ತುರ್ತು ಕಾರ್ಯಾಚರಣೆ ಕಾರಣಕ್ಕೆ ಸಂಜೆ 4 ಗಂಟೆಗೆ ಬಂದು ಇವರನ್ನೆಲ್ಲ ರಕ್ಷಣೆ ಮಾಡಿತು.

ನಡು ಗಡ್ಡೆಯಲ್ಲಿ ಬದುಕನ್ನೇ ಕಳೆದುಕೊಂಡಂತೆ ಭಾಸವಾದರೂ ನೋವು ನುಂಗಿ ಇನ್ನುಳಿದವರಿಗೆ ಧೈರ್ಯ ತುಂಬಿದ ರಾಮಪ್ಪ ಅವರ ನಡೆ ಜನ ಮೆಚ್ಚುಗೆಗೆ ಕಾರಣವಾಗಿದೆ.

ಎರಡು ಮೊಬೈಲ್‌ ಇಟ್ಟುಕೊಂಡಿದ್ದ ರಾಮಪ್ಪ ಅದರಲ್ಲಿ ಒಂದನ್ನು ಬಳಕೆ ಮಾಡಿ ಇನ್ನೊಂದರ ಬ್ಯಾಟರಿ ಖಾಲಿಯಾಗದಂತೆ ಸ್ವಿಚ್ಡ್‌ ಆಫ್‌ ಮಾಡಿಕೊಂಡಿದ್ದರು. ಹೀಗಾಗಿ, ಅವರು ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿರಲು ಸಾಧ್ಯವಾಯಿತು. ಅವರ ಸಮಯ ಪ್ರಜ್ಞೆ ಮತ್ತು ಧೈರ್ಯ 70 ಜನರ ಜೀವ ಉಳಿಸಿತು.
- ಶ್ರೀಧರ್‌, ಸಿಪಿಐ, ಗೋಕಾಕ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ