ಆ್ಯಪ್ನಗರ

ಕೃಷ್ಣಾ ನದಿಗೆ ನೀರು ಹರಿಸಲು ಆಗ್ರಹಿಸಿ ನಾಳೆ ಅಥಣಿ ಬಂದ್‌

ಅಥಣಿ: ಕೃಷ್ಣಾ ನದಿಗೆ ಕೊಯ್ನಾ ಜಲಾಶಯದಿಂದ ನೀರು ಹರಿಸುವಂತೆ ಆಗ್ರಹಿಸಿ ಮೇ 20ರಂದು ಅಥಣಿ ಬಂದ್‌ಗೆ ಶುಕ್ರವಾರ ಒಕ್ಕೊರಲಿನ ನಿರ್ಧಾರ ಕೈಗೊಳ್ಳಲಾಗಿದೆ...

Vijaya Karnataka 19 May 2019, 5:00 am
ಅಥಣಿ : ಕೃಷ್ಣಾ ನದಿಗೆ ಕೊಯ್ನಾ ಜಲಾಶಯದಿಂದ ನೀರು ಹರಿಸುವಂತೆ ಆಗ್ರಹಿಸಿ ಮೇ 20ರಂದು ಅಥಣಿ ಬಂದ್‌ಗೆ ಶುಕ್ರವಾರ ಒಕ್ಕೊರಲಿನ ನಿರ್ಧಾರ ಕೈಗೊಳ್ಳಲಾಗಿದೆ.
Vijaya Karnataka Web BEL-18 ATHANI-01


ಸ್ಥಳೀಯ ಪಿಡಬ್ಲ್ಯುಡಿ ಕಚೇರಿಯಲ್ಲಿ ಶುಕ್ರವಾರ ಸಂಜೆ ಕೃಷ್ಣಾ ನದಿಗೆ ನೀರು ಹರಿಸುವ ವಿಚಾರವಾಗಿ ಕರವೇ ಕಾರ್ಯಕರ್ತರು, ಪತ್ರಕರ್ತರು, ಗಣ್ಯರು ಹಾಗೂ ಸಾರ್ವಜನಿಕರಿಂದ ನಡೆದ ತುರ್ತು ಸಭೆಯಲ್ಲಿ ಪಕ್ಷಾತೀತ ಹೋರಾಟದ ರೂಪು ರೇಷೆಯ ಕುರಿತು ಚರ್ಚಿಸಲಾಯಿತು.

ಸರಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಸ್ಥಳೀಯ ಎಲ್ಲ ಜನ ಪ್ರತಿನಿಧಿಗಳೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಭೆಯಲ್ಲಿ ಕೋರಲಾಯಿತು. ಅಲ್ಲದೆ, ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರದತ್ತ ಗಮನ ಹರಿಸುವಂತೆ ಸೂಚಿಸಲಾಯಿತು.

ಸಭೆಯಲ್ಲಿ ಹಾಜರಿದ್ದ ಕರವೇ ಅಧ್ಯಕ್ಷ ಬಸನಗೌಡ ಪಾಟೀಲ (ಬಮ್ನಾಳ) ಮಾತನಾಡಿ, ಕಳೆದ ಒಂದು ದಶಕದಲ್ಲಿ ಕೃಷ್ಣೆಯ ಒಡಲು ಎಂದಿಗೂ ಬರಿದಾಗಿಲ್ಲ. ಈ ಅವಧಿಯಲ್ಲೇ ಇಂತಹ ಪರಿಸ್ಥಿತಿ ಎದುರಾಗಿದೆ. ರಾಜ್ಯ ಸರಕಾರ ಕೂಡಲೇ ಕ್ರಮ ಜರುಗಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಅನಿವಾರ್ಯ. ಸದ್ಯ ಅಥಣಿಯಲ್ಲಿ ತುರ್ತು ಹಾಗೂ ಅವಶ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ವ್ಯಾಪಾರ ವಹಿವಾಟನ್ನು ಬಂದ್‌ ಮಾಡುವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ಅನಿವಾರ್ಯವಾಗಿದೆ. ಹೋರಾಟದಲ್ಲಿ ಕೃಷ್ಣಾ ನದಿ ತೀರದ ಸಂಸದರು, ಶಾಸಕರು ಮತ್ತು ನದಿ ತೀರದ ಅಂದಾಜು 800 ಗ್ರಾಮಗಳ ಸಾರ್ವಜನಿಕರು ಪಾಲ್ಗೊಳ್ಳುವಂತೆ ವಿನಂತಿಸಿಕೊಂಡರು.

ಈ ವೇಳೆ ಮಾತನಾಡಿದ ವಕೀಲರ ಸಂಘದ ಪದಾಧಿಕಾರಿ ಸುನೀಲ ಸಂಕ, ಪತ್ರಕರ್ತರ ಸಂಘದ ಅಧ್ಯಕ್ಷ ವಿಜಯಕುಮಾರ ಅಡಹಳ್ಳಿ ಮಾತನಾಡಿದರು.

ಈ ವೇಳೆ ಮಲ್ಲಿಕಾರ್ಜುನ ಕನಶೆಟ್ಟಿ, ರಮೇಶ ಸಿಂದಗಿ, ಸಿದ್ಧಾರ್ಥ ಶಿಂಗೆ, ರಾಜೇಂದ್ರ ಐಹೊಳೆ, ಪ್ರಶಾಂತ ತೋಡಕರ, ಮಹಾದೇವ ಮಡಿವಾಳ, ರಾಕೇಶ ಮೈಗೂರ, ಪರಶುರಾಮ ನಂದೇಶ್ವರ, ವಿನಯ ಪಾಟೀಲ, ಸುನೀಲ ನಾಯಿಕ, ಅನೀಲ ಸೌದಾಗರ, ಚಿದಾನಂದ ಶೇಗುಣಸಿ, ಸಂಜೀವ ಕಾಂಬಳೆ, ಮಂಜು ಹೋಳಿಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ