ಆ್ಯಪ್ನಗರ

ಶಾಸಕ ಕುಮಠಳ್ಳಿ ಮನೆಗೆ ಮುತ್ತಿಗೆ ಯತ್ನ

ಅಥಣಿ: ರಾಜೀನಾಮೆ ಹಿಂಪಡೆಯುವಂತೆ ಒತ್ತಾಯಿಸಿ ಕಾಂಗ್ರೆಸ್‌ ...

Vijaya Karnataka 13 Jul 2019, 5:00 am
ಅಥಣಿ : ರಾಜೀನಾಮೆ ಹಿಂಪಡೆಯುವಂತೆ ಒತ್ತಾಯಿಸಿ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಧುರೀಣರು ಶಾಸಕ ಮಹೇಶ್‌ ಕುಮಠಳ್ಳಿ ಅವರ ನಿವಾಸದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
Vijaya Karnataka Web BEL-12 ATHANI-01


ಪ್ರತಿಭಟನಾಕಾರರು ಪಟ್ಟಣದ ಎ.ಕೆ. ಹೈಸ್ಕೂಲ್‌ ಆವರಣದಿಂದ ಕುಮಠಳ್ಳಿ ಅವರ ನಿವಾಸದ ವರೆಗೆ ಮೆರವಣಿಗೆ ನಡೆಸಿದರು. ಕುಮಠಳ್ಳಿ ಅವರ ನಿವಾಸದಿಂದ 50 ಮೀ. ದೂರದಲ್ಲಿ ಬ್ಯಾರಿಕೇಡ್‌ ಅಳವಡಿಸಿದ ಪೊಲೀಸರು, ಮುತ್ತಿಗೆ ಹಾಕಲು ಪ್ರಯತ್ನಿಸಿದ ಪ್ರತಿಭಟನಾಕಾರರನ್ನು ತಡೆದರು. ನಂತರ ಕಾರ್ಯಕರ್ತರು ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು. ''ಕುದುರೆ ವ್ಯಾಪಾರ ನಡೆಸಿ ಮೈತ್ರಿ ಸರಕಾರ ಬೀಳಿಸಲು ಮುಂದಾದ ಬಿಜೆಪಿಗೆ ಧಿಕ್ಕಾರ, ಮಹೇಶ್‌ ಅಣ್ಣಾ ಮರಳಿ ಬನ್ನಿ'', ಎಂದು ಘೋಷಣೆ ಕೂಗಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಚಿಕ್ಕೋಡಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಲಕ್ಷ ್ಮಣರಾವ ಚಿಂಗಳೆ, ''ಅಥಣಿಯ ಜನ ಅಭಿವೃದ್ಧಿ ಹಾಗೂ ಐದು ವರ್ಷಗಳ ಸುಗಮ ಆಡಳಿತಕ್ಕಾಗಿ ಹದಿನೈದು ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಜೆಪಿಯನ್ನು ಧಿಕ್ಕರಿಸಿ ಕಾಂಗ್ರೆಸ್‌ಗೆ ಮತ ಕೊಟ್ಟಿದ್ದಾರೆ. ಕ್ಷೇತ್ರದ ಮತದಾರರ ಋುಣ ತೀರಿಸುವ ಸಲುವಾಗಿಯಾದರೂ ಮಹೇಶ್‌ ಕುಮಠಳ್ಳಿ ಐದು ವರ್ಷ ಕಾಂಗ್ರೆಸ್‌ ಶಾಸಕರಾಗಿ ಕಾರ್ಯ ನಿರ್ವಹಿಸಬೇಕು'', ಎಂದು ಅಭಿಪ್ರಾಯಪಟ್ಟರು.

ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ''ಶಾಸಕ ಕುಮಠಳ್ಳಿ ಅವರು ತಮ್ಮ ರಾಜೀನಾಮೆಯನ್ನು ಕೂಡಲೇ ಹಿಂಪಡೆದು ಕ್ಷೇತ್ರಕ್ಕೆ ವಾಪಸ್‌ ಬರಬೇಕು. ಕ್ಷೇತ್ರದ 82 ಸಾವಿರ ಜನರು ಅವರ ಜತೆಗಿದ್ದಾರೆ'', ಎಂದರು.

ಪ್ರತಿಭಟನೆಯಲ್ಲಿ ಶ್ಯಾಮ ಪೂಜಾರಿ, ವಿನಯಗೌಡ ಪಾಟೀಲ, ಗಜಾನನ ಮಂಗಸೂಳಿ, ಸುನೀಲ ಸಂಕ, ಎಸ್‌.ಎಂ.ನಾಯಿಕ, ಸತ್ಯಪ್ಪ ಬಾಗೆನ್ನವರ, ಸದಾಶಿವ ಬುಟಾಳಿ, ಶಿವಾನಂದ ಗುಡ್ಡಾಪುರ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸಹೋದರನಿಗೆ ಮನವಿ :
ಮಹೇಶ್‌ ಕುಮಠಳ್ಳಿ ರಾಜೀನಾಮೆ ಹಿಂಪಡೆಯುವಂತೆ ಒತ್ತಾಯಿಸಿದ ಪ್ರತಿಭಟನಾಕಾರರು ಅವರ ಸಹೋದರ ಡಾ. ಪ್ರಕಾಶ್‌ ಕುಮಠಳ್ಳಿ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಪಿ, ಡಿಆರ್‌ ಪೊಲೀಸ್‌ ವಾಹನ ಹಾಗೂ 100ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ