ಆ್ಯಪ್ನಗರ

‘ರಮೇಶ್‌ ಮನವೊಲಿಕೆ ಪ್ರಯತ್ನ ಕೈಮೀರಿದೆ’

ಘಟಪ್ರಭಾ (ಗೋಕಾಕ) ರೆಬೆಲ್‌ ಶಾಸಕ, ಸಹೋದರ ರಮೇಶ್‌ ಜಾರಕಿಹೊಳಿ ...

Vijaya Karnataka 19 Apr 2019, 5:00 am
ಘಟಪ್ರಭಾ (ಗೋಕಾಕ) : ರೆಬೆಲ್‌ ಶಾಸಕ, ಸಹೋದರ ರಮೇಶ್‌ ಜಾರಕಿಹೊಳಿ ಅವರ ಮನವೊಲಿಸುವ ಪ್ರಯತ್ನ ಕೈಮೀರಿದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.
Vijaya Karnataka Web BEL-18GPB-3


ಘಟಪ್ರಭಾದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ. ವಿ.ಎಸ್‌. ಸಾಧುನವರ ಅವರ ಪರ ಪ್ರಚಾರಕ್ಕಾಗಿ ಗುರುವಾರ ಆಗಮಿಸಿದ ವೇಳೆ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

''ರಮೇಶ್‌ ಜಾರಕಿಹೊಳಿ ಈಗಾಗಲೇ ಕಾಂಗ್ರೆಸ್‌ ಪಕ್ಷ ದಿಂದ ದೂರವಿದ್ದಾರೆ. ಪಕ್ಷ ದ ಪರವಾಗಿ ಪ್ರಚಾರ ಹಾಗೂ ಪಕ್ಷ ದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ. ಇದೆಲ್ಲ ಈಗಾಗಲೇ ಹೈಕಮಾಂಡ್‌ ಗಮನಕ್ಕೂ ಬಂದಿದೆ. ಅವರ ಮನಸ್ಸು ಬದಲಿಸುವ ಪ್ರಯತ್ನ ಈಗ ಕೈಮೀರಿ ಹೋಗಿದೆ. ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿದರೆ ಗೋಕಾಕ ಕ್ಷೇತ್ರದಲ್ಲಿ ಲಖನ್‌ ಜಾರಕಿಹೊಳಿ ಕಾಂಗ್ರೆಸ್‌ ಅಭ್ಯರ್ಥಿಯಾಗುತ್ತಾರೆ'', ಎಂದರು.

''ರಮೇಶ್‌ ಜಾರಕಿಹೊಳಿ ಯಾವ ಕಾರಣಕ್ಕೆ ಪಕ್ಷ ಬಿಡುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ನಾನು ಜಾರಕಿಹೊಳಿ ಕುಟುಂಬದ ರಾಜಕೀಯ ಗುರುವಾಗಿದ್ದರೂ ಈಗ ಎಲ್ಲವೂ ನನ್ನ ಕೈಮೀರಿದೆ. ಗೋಕಾಕದಲ್ಲಿ ಕಾಂಗ್ರೆಸ್‌ ಬಲಪಡಿಸುವ ಉದ್ದೇಶದಿಂದ ಪಕ್ಷ ವನ್ನು ಸಂಘಟಿಸುತ್ತಿದ್ದೇನೆ'', ಎಂದರು.

ರಾಮಣ್ಣ ಹುಕ್ಕೇರಿ, ಪ್ರಕಾಶ ಡಾಂಗೆ, ಸುಲ್ತಾನಸಾಬ ಕಬ್ಬೂರ, ಸುರೇಶ ಭೋಸ್ಲೆ, ಈರಣ್ಣ ಕಲಕುಟಗಿ, ಮುನ್ನಾ ಸೌದಾಗರ, ಅಣ್ಣಪ್ಪ ಹುನಗುಂದ ಮತ್ತಿತರರು ಉಪಸ್ಥಿತರಿದ್ದರು.

ಜಾರಕಿಹೊಳಿ ಸಹೋದರರು ಎಲ್ಲರೂ ಒಂದೇ ಎನ್ನುವುದು ಸುಳ್ಳು. ರಾಜಕೀಯದಿಂದಾಗಿ ಎಲ್ಲರೂ ಬೇರೆ ಬೇರೆಯಾಗಿದ್ದೇವೆ. ಇದರಿಂದ ಅಭಿಮಾನಿಗಳಲ್ಲಿ ಗೊಂದಲವಾಗಿರುವುದು ನಿಜ. ಮುಂದೆ ಗೋಕಾಕ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರ ಮಧ್ಯೆಯೇ ಸ್ಪರ್ಧೆ ಏರ್ಪಡುವುದು ನಿಸ್ಸಂದೇಹ.
- ಸತೀಶ್‌ ಜಾರಕಿಹೊಳಿ, ಸಚಿವ

ರಮೇಶ್‌ ಜಾರಕಿಹೊಳಿ ಅವರಿಗೆ ಕಾಂಗ್ರೆಸ್‌ ಬೆಂಬಲಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದೇನೆ. ಅವರು ನಮ್ಮೊಂದಿಗೇ ಇರುತ್ತಾರೆ.
- ಲಖನ್‌ ಜಾರಕಿಹೊಳಿ, ಕಾಂಗ್ರೆಸ್‌ ಮುಖಂಡ

ಗೋಕಾಕ್‌ಗೆ ಇಂದು ಸಿದ್ದರಾಮಯ್ಯ:
ಗೋಕಾಕ: ಮೈತ್ರಿ ಅಭ್ಯರ್ಥಿ ಡಾ. ವಿ.ಎಸ್‌. ಸಾಧುನವರ ಅವರ ಪರ ಪ್ರಚಾರಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಗೋಕಾಕ ಪಟ್ಟಣಕ್ಕೆ ಆಗಮಿಸಲಿದ್ದಾರೆ. ರಾತ್ರಿ 8 ಗಂಟೆಗೆ ನ್ಯೂ ಇಂಗ್ಲಿಷ್‌ ಸ್ಕೂಲ್‌ ಮೈದಾನದಲ್ಲಿ ಅವರ ಕಾರ್ಯಕ್ರಮ ಆಯೋಜನೆಯಾಗಿದೆ. ವಿಶೇಷವೆಂದರೆ, ಈ ಮೈದಾನ ರೆಬೆಲ್‌ ಶಾಸಕ ರಮೇಶ್‌ ಜಾರಕಿಹೊಳಿ ಅವರ ಮನೆ ಪಕ್ಕದಲ್ಲಿಯೇ ಇದೆ! ಜಾರಕಿಹೊಳಿ ಸಹೋದರರ ರಾಜಕೀಯ ಹಿತೈಷಿಯಾಗಿರುವ ಸಿದ್ದರಾಮಯ್ಯ ಅವರು ಗೋಕಾಕದ ಗೊಂದಲದ ರಾಜಕಾರಣದ ಬಗ್ಗೆ ಏನು ಹೇಳಲಿದ್ದಾರೆಂಬ ಕುತೂಹಲ ಈಗ ಎಲ್ಲರಲ್ಲಿ ಮೂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ