ಆ್ಯಪ್ನಗರ

ಎಚ್ಡಿಕೆ 'ಸ್ಪಂದಿಸದ' ಕಾರಣ ನಿರ್ಧಾರ ಕೈಗೊಂಡೆ!: ಮಕ್ಕಳಾಣೆಗೂ ವ್ಯವಹಾರ ನಡೆದಿಲ್ಲ ಎಂದ ಶ್ರೀಮಂತ ಪಾಟೀಲ್

ಕಾಗವಾಡದ ಅನರ್ಹ ಶಾಸಕ ಶ್ರೀಮಂತ ಪಾಟೀಲ್, ಬೆಂಬಲಿಗರ ಜೊತೆ ನಡೆಸಿದ ಸಭೆಯಲ್ಲಿ ತಾವು ಕೈಗೊಂಡ 'ನಿರ್ಧಾರ'ಕ್ಕೆ ಕಾರಣ ಬಿಚ್ಚಿಟ್ಟಿದ್ದಾರೆ. ಜೊತೆಯಲ್ಲೇ ತಾವು ಅನಾರೋಗ್ಯಕ್ಕೆ ತುತ್ತಾಗಿದ್ದ ಕಾರಣ ಸ್ಪೀಕರ್‌ಗೆ ಪತ್ರ ಬರೆದಿದ್ದೆ ಎಂದೂ ಹೇಳಿದ್ದಾರೆ. ತಮ್ಮ ವಿರುದ್ಧದ ಅನರ್ಹತೆ ರದ್ದಾಗುತ್ತೆ, ಚುನಾವಣೆಯೇ ನಡೆಯಲ್ಲ ಅನ್ನೋದು ಪಾಟೀಲ್ ನಂಬಿಕೆ.

Vijaya Karnataka 1 Oct 2019, 7:31 pm
ಕಾಗವಾಡ (ಬೆಳಗಾವಿ): 'ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರದಲ್ಲಿ ಕಾಗವಾಡ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಾಗಿ ಸತತ ಪ್ರಯತ್ನಿಸಿದರೂ ಬೇಸಿಗೆಯಲ್ಲಿ ಕುಡಿಯುವ ನೀರು ಹರಿಸದೆ ಇರುವುದರಿಂದ ಸಾವಿರಾರು ಕೋಟಿ ರೂ. ಬೆಳೆ ಹಾನಿಯಾಗಿದ್ದು, ನೀರಿಗಾಗಿ ಜನ ತತ್ತರಿಸಿದರು. ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೆ ಇರುವುದರಿಂದ ಮತಕ್ಷೇತ್ರದ ಜನತೆಯ ಅಭಿವೃದ್ಧಿಗಾಗಿ ನಾನು ಕೆಲ ನಿರ್ಣಯ ತೆಗೆದುಕೊಂಡಿದ್ದೇನೆ' ಎಂದು ಕಾಗವಾಡ ಕ್ಷೇತ್ರದ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಹೇಳಿದ್ದಾರೆ.
Vijaya Karnataka Web hdk srimanth patil


ಮಂಗಳವಾರ ಕೆಂಪವಾಡದ ಅಥಣಿ ಸಕ್ಕರೆ ಕಾರ್ಖಾನೆಯ ಸಭಾ ಭವನದಲ್ಲಿ ಕ್ಷೇತ್ರದ ಬೆಂಬಲಿಗರ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀಮಂತ ಪಾಟೀಲ, 'ನಾನು ಸ್ವಚ್ಛ ರಾಜಕಾರಣಿ. ನನಗೆ ಯಾವುದೇ ಆಸೆ, ಆಕಾಂಕ್ಷೆಗಳಿಲ್ಲ. ಶಾಸಕನಾಗಿ ಚುನಾಯಿತಗೊಂಡ ಬಳಿಕ ಪ್ರಾಮಾಣಿಕವಾಗಿ ಪ್ರಯತ್ನಿಸಿ ಜನಸೇವೆ ಮಾಡಬೇಕೆಂದುಕೊಂಡಿದ್ದೇನೆ. ಸಮ್ಮಿಶ್ರ ಸರಕಾರದಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆ, ಕೆರೆ ತುಂಬಿಸುವ ಯೋಜನೆ, ಕೃಷ್ಣಾ ನದಿಗೆ ಬೇಸಿಗೆಯಲ್ಲಿ ನೀರು ಹರಿಸುವ ಯೋಜನೆಯಂಥ ಕಾಮಗಾರಿಗಳನ್ನು ತೆಗೆದುಕೊಂಡು ಹೋದಾಗ ಕಾಂಗ್ರೆಸ್‌ ನಾಯಕ ಸಿದ್ಧರಾಮಯ್ಯ, ಡಾ. ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್ ಸಹಕರಿಸಿದರು. ಆದರೆ, ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಕೇವಲ ಮಾಡೋಣವೆಂದಷ್ಟೇ ಹೇಳುತ್ತಾ ಕಾಲಹರಣ ಮಾಡಿದರು. ಹೀಗಾಗಿ ಕೆಲ ನಿರ್ಣಯ ಕೈಗೊಳ್ಳಬೇಕಾಯಿತು' ಎಂದು ಪಾಟೀಲ ಹೇಳಿದ್ದಾರೆ. ಸುಮಾರು 6 ಸಾವಿರ ಅಭಿಮಾನಿಗಳು ಭಾಗವಹಿಸಿದ್ದ ಸಭೆಯಲ್ಲಿ ಶ್ರೀಮಂತ ಪಾಟೀಲ್ ಈ ಹೇಳಿಕೆ ನೀಡಿದ್ದಾರೆ.

ಮಕ್ಕಳಾಣೆಗೂ ವ್ಯವಹಾರ ನಡೆದಿಲ್ಲ..

ಕಾಂಗ್ರೆಸ್‌ ಪಕ್ಷ ತೊರೆಯಲು ಹಣದ ಹೊಳೆ ಹರಿಸಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದದ್ದು. ನನ್ನ ಮಕ್ಕಳ ಮೇಲೆ ಆಣೆ ಮಾಡಿ ಹೇಳುತ್ತೇನೆ. ಇದರಲ್ಲಿ ಒಂದು ಪೈಸೆ ವ್ಯವಹಾರವೂ ನಡೆದಿಲ್ಲ ಎಂದು ಶ್ರೀಮಂತ ಪಾಟೀಲ್ ಹೇಳಿದರು. ಕಾಗವಾಡ ಕ್ಷೇತ್ರದ ಉಪಚುನಾವಣೆ ನಡೆಯುವುದಿಲ್ಲ. ನ್ಯಾಯ ನನ್ನ ಪರ ಇರಲಿದೆ ಎಂಬ ಭರವಸೆ ಇದೆ ಎಂದ ಅವರು, ನನ್ನ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಳ್ಳುತ್ತಿದ್ದೆ. ಈ ಬಗ್ಗೆ ವಿಧಾನಸಭಾಧ್ಯಕ್ಷರಿಗೆ ಮಾಹಿತಿ ನೀಡಿದ್ದೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲಎಂದರು.

ಯಡಿಯೂರಪ್ಪ ‘ಪುಗಸಟ್ಟೆ’ ಮುಖ್ಯಮಂತ್ರಿ ಅಲ್ಲ! ಹೈಕಮಾಂಡ್ ‘ಟೈಟ್’ ಮಾಡ್ತಿದೆ ಅಂದ್ರು ವಿಜಯೇಂದ್ರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ