ಆ್ಯಪ್ನಗರ

ಒಗ್ಗಟ್ಟಿನ ಮಂತ್ರ ಜಪಿಸಿದ ಬೆಳಗಾವಿ ಶಾಸಕರು

ಒಗ್ಗಟ್ಟಿನ ಮಂತ್ರ ಜಪಿಸಿದ ಬೆಳಗಾವಿ ಶಾಸಕರು -ಪಕ್ಷ ಗಳು ಬೇರೆಯಾದರೂ ಒಟ್ಟಾಗಿ ನಗರದ ಅಭಿವೃದ್ಧಿ -ಲಕ್ಷ್ಮಿ ಹೆಬ್ಬಾಳಕರ, ಅಭಯ ಪಾಟೀಲ, ಅನಿಲ ಬೆನಕೆ ಭರವಸೆ ವಿಕ ಸುದ್ದಿಲೋಕ ...

Vijaya Karnataka 28 Jul 2018, 5:00 am
ಬೆಳಗಾವಿ: ''ನಾನು ಆಕಸ್ಮಿಕವಾಗಿ ಶಾಸಕಿಯಾಗಿಲ್ಲ. ವೈಯಕ್ತಿಕ ಜೀವನ ಮತ್ತು ರಾಜಕೀಯದಲ್ಲಿ ಹೋರಾಟದಿಂದ ಮೇಲೆ ಬಂದಿದ್ದೇನೆ. ಅದೇ ಹೋರಾಟ, ಸಂಘರ್ಷ ಬೆಳಗಾವಿ ನಗರದ ಅಭಿವೃದ್ಧಿಯಲ್ಲೂ ಮುಂದುವರಿಯುತ್ತದೆ'' ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ಹೇಳಿದರು.
Vijaya Karnataka Web BLG-2707-2-52-27MAHESH3


ಸ್ಥಳೀಯ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ವಕೀಲರ ಸಂಘ ಆಯೋಜಿಸಿದ್ದ ಶಾಸಕರಿಗೆ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ''ಪಕ್ಷ, ಸಿದ್ಧಾಂತ ಮತ್ತು ವಿಚಾರಗಳಲ್ಲಿ ರಾಜಕಾರಣಿಗಳ ನಿಲುವು ಬೇರೆ ಬೇರೆ ಆಗಿರಬಹುದು. ಆದರೆ, ನಗರದ ಅಭಿವೃದ್ಧಿ ವಿಷಯದಲ್ಲಿ ಉತ್ತರ, ದಕ್ಷಿಣ ಕ್ಷೇತ್ರಗಳ ಶಾಸಕರೊಂದಿಗೆ ಕೈ ಜೋಡಿಸಿ ಕೆಲಸ ಮಾಡಲು ನಾನು ಸಿದ್ಧ. ಅನುಭವಿ ಶಾಸಕ ಅಭಯ ಪಾಟೀಲ ಜತೆಗೂಡಿ ಅನಿಲ ಬೆನಕೆ ಮತ್ತು ನಾನು ಒಟ್ಟಾಗಿ ಕೆಲಸ ಮಾಡುತ್ತೇವೆ'' ಎಂದರು.

ಶಾಸಕ ಅಭಯ ಪಾಟೀಲ ಮಾತನಾಡಿ, ''ಬೆಂಗಳೂರು ನಂತರ ಅತಿ ಹೆಚ್ಚು ವಕೀಲರನ್ನು ಹೊಂದಿರುವ ಬೆಳಗಾವಿ ಬಾರ್‌ ಅಸೋಸಿಯೇಶನ್‌ ಕೆಲಸ ಮಾಡುವ ಜನಪ್ರತಿನಿಧಿಗಳ ಬೆನ್ನಿಗೆ ಸದಾ ನಿಲ್ಲುತ್ತಾ ಬಂದಿದೆ. ಈವರೆಗೆ ಜನಪ್ರತಿನಿಧಿಗಳ ಒಗ್ಗಟ್ಟು ಎಂದರೆ ಧಾರವಾಡ-ಹುಬ್ಬಳ್ಳಿ ಮಾತ್ರ ಎನ್ನುವ ಮಾತಿತ್ತು. ಇನ್ನು ಮುಂದೆ ಬೆಳಗಾವಿಯ ಮೂವರೂ ಶಾಸಕರು ಆ ಮಾತನ್ನು ಹುಸಿ ಮಾಡುತ್ತೇವೆ'' ಎಂದರು.

ಶಾಸಕ ಅನಿಲ ಬೆನಕೆ ಮಾತನಾಡಿ, ''ಬೆಳಗಾವಿ ಬಾರ್‌ ಅಸೋಸಿಯೇಶನ್‌ ಉಳಿದವುಗಳಿಗಿಂತ ಭಿನ್ನವಾಗಿದೆ. ವಾಸ್ತವ ನೆಲೆಗಟ್ಟಿನಲ್ಲಿ ಹೋರಾಟ ಮಾಡುತ್ತ ಬಂದಿರುವ ಬಾರ್‌ ಅಸೋಸಿಯೇಶನ್‌ ಹಿಂದೆ ಮೂವರೂ ಶಾಸಕರಿದ್ದೇವೆ. ನ್ಯಾಯಾಲಯ ಆವರಣದಲ್ಲಿ ಅಗತ್ಯವಾಗಿ ಬೇಕಿರುವ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಶೀಘ್ರ ಕೆಎಟಿ ಕಾರ್ಯಾರಂಭಿಸಲು ಮತ್ತು ಕೆಎಟಿ ಹೋರಾಟ ಸಂದರ್ಭದಲ್ಲಿ ವಕೀಲರ ಮೇಲೆ ದಾಖಲಾಗಿರುವ ಪ್ರಕರಣ ಕೈಬಿಡಲು ಸರಕಾರದ ಮೇಲೆ ಒತ್ತಡ ತರಲಾಗುವುದು'' ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್‌.ಎಸ್‌. ಕಿವಡಸಣ್ಣವರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಮುರುಘೇಂದ್ರಗೌಡ ಪಾಟೀಲ, ಎಚ್‌.ಎ. ಕೊಂಗಳಿ, ಹಿರಿಯ ನ್ಯಾಯವಾದಿಗಳಾದ ಎಂ.ಬಿ. ಝಿರಲಿ, ಎ.ಜಿ. ಮುಳವಾಡಮಠ, ಬಿ.ಜಿ. ಗಂಗಾಯಿ ಮತ್ತಿತರರು ಉಪಸ್ಥಿತರಿದ್ದರು.

ಕೈಗಾರಿಕೆ ಸ್ಥಾಪನೆಗೆ ಯತ್ನ: ಬೆಳಗಾವಿಯಲ್ಲಿ ಕೈಗಾರಿಕೆ ಮತ್ತು ಪ್ರವಾಸೋದ್ಯಮ ಆದ್ಯತೆ ಮೇರೆಗೆ ಬೆಳೆಯಬೇಕಿದೆ. ಈಗಾಗಲೇ ರಸಗೊಬ್ಬರ ಕೈಗಾರಿಕೆ ಸ್ಥಾಪನೆಗೆ ಕೇಂದ್ರ ಸಚಿವರು ಹಸಿರು ನಿಶಾನೆ ತೋರಿದ್ದು ಇನ್ನಷ್ಟು ಒತ್ತಡ ಹಾಕಿ ಬೆಳಗಾವಿಗೆ ತರಲಾಗುವುದು. ಬೆಳಗಾವಿ ವಕೀಲರ ಸಂಘಕ್ಕೆ ಪ್ರತ್ಯೇಕ ಕ್ಲಬ್‌ ಸ್ಥಾಪನೆಗೆ ಪ್ರಯತ್ನಿಸಲಾಗುವುದು. ನಗರದ ಸಂಚಾರ ವ್ಯವಸ್ಥೆ ಸುಧಾರಣೆಗೆ ಯೋಜನೆ ರೂಪಿಸಲಾಗುವುದು ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ