ಆ್ಯಪ್ನಗರ

ಬೆಳಗಾವಿ ಬಣ ರಾಜಕಾರಣ ಬೂದಿ ಮುಚ್ಚಿದ ಕೆಂಡ

ಬೆಳಗಾವಿ ಬಣ ರಾಜಕಾರಣ ಬೂದಿ ಮುಚ್ಚಿದ ಕೆಂಡ ವಿಕ ಸುದ್ದಿಲೋಕ ಬೆಳಗಾವಿ ಬೆಳಗಾವಿ ತಾಲೂಕು ಪಿಎಲ್‌ಡಿ ...

Vijaya Karnataka 8 Sep 2018, 5:00 am
ಬೆಳಗಾವಿ: ಬೆಳಗಾವಿ ತಾಲೂಕು ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಹಿರಿಯರ ಮಧ್ಯಸ್ಥಿಕೆಯಿಂದ ಸುಖಾಂತ್ಯಗೊಂಡಿದೆ. ಆದರೆ, ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ಮತ್ತು ಜಾರಕಿಹೊಳಿ ಸಹೋದರರ ನಡುವಿನ ವೈಮನಸ್ಸು ಬೂದಿಮುಚ್ಚಿದ ಕೆಂಡದಂತಿದ್ದು, ಶುಕ್ರವಾರ ನಡೆದ ಚುನಾವಣೆ ಪ್ರಕ್ರಿಯೆಯುದ್ದಕ್ಕೂ ಅದು ಗೋಚರಿಸಿತು.
Vijaya Karnataka Web Laxmi Hebbalkar (red saree)new


ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತಾವು ಸೂಚಿಸಿದ ವ್ಯಕ್ತಿಗಳೇ ಆಯ್ಕೆಯಾಗಬೇಕು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ಮತ್ತು ಬೆಳಗಾವಿ ತಾಲೂಕಿನ ಕೆಲಭಾಗ ಒಳಗೊಂಡಿರುವ ಯಮಕನಮರಡಿ ಶಾಸಕ ಸತೀಶ್‌ ಜಾರಕಿಹೊಳಿ ಪಟ್ಟು ಹಿಡಿದಿದ್ದರು. ಈ ಮೊದಲು ಸಹೋದರನ ವಿರುದ್ಧ ಮುನಿಸಿಕೊಂಡಿದ್ದ ಸಚಿವ ರಮೇಶ್‌ ಜಾರಕಿಹೊಳಿ ಸಹ ಸತೀಶ್‌ ಬೆನ್ನಿಗೆ ನಿಂತರೆ, ನೀರಾವರಿ ಸಚಿವ ಡಿ.ಕೆ.ಶಿವಕುಮಾರ್‌ ಪರೋಕ್ಷವಾಗಿ ಲಕ್ಷ್ಮಿ ಹೆಬ್ಬಾಳಕರ್‌ ಅವರನ್ನು ಬೆಂಬಲಿಸಿದ್ದರಿಂದ ಪಿಎಲ್‌ಡಿ ಬ್ಯಾಂಕ್‌ ವಿವಾದ ರಾಜ್ಯಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಮುನ್ನಡೆಯಾದರೆ ಜಾರಕಿಹೊಳಿ ಸಹೋದರರು ಸಿಡಿದೆದ್ದು ರಾಜ್ಯ ಸರಕಾರವನ್ನೇ ಅಲ್ಲಾಡಿಸುವ ಮಾತುಗಳು ಕೇಳಿಬಂದಿದ್ದರಿಂದ ಬ್ಯಾಂಕ್‌ ಚುನಾವಣೆ ಮೇಲೆ ಇಡೀ ರಾಜ್ಯದ ಕಣ್ಣು ನೆಟ್ಟಿತ್ತು.

ಆದರೆ, ಕಾಂಗ್ರೆಸ್‌ನ ರಾಜ್ಯಮಟ್ಟದ ನಾಯಕರೇ ಬೆಳಗಾವಿಗೆ ಆಗಮಿಸಿ, ಎರಡೂ ಬಣದ ನಾಯಕರೊಂದಿಗೆ ಮಾತುಕತೆ ನಡೆಸಿ, ಸಂಧಾನ ಪ್ರಕ್ರಿಯೆ ನಡೆಸಿದ್ದರಿಂದ ಪ್ರಸ್ತುತ ಲಕ್ಷ್ಮಿ ಹೆಬ್ಬಾಳಕರ್‌ ಗೆದ್ದು ಸೋತಿದ್ದಾರೆ; ಜಾರಕಿಹೊಳಿ ಸಹೋದರರು ಸೋತು ಗೆದ್ದಂತಾಗಿದೆ. ತಮ್ಮ ಬಣದ ನಿರ್ದೇಶಕರೇ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದ ಸಮಾಧಾನ ಲಕ್ಷ್ಮಿ ಹೆಬ್ಬಾಳಕರದ್ದಾದರೆ, ಲಕ್ಷ್ಮಿ ಬಣದಲ್ಲಿದ್ದ ತಮ್ಮ ವಿರೋಧಿಯನ್ನು ಹೊರಗಿಟ್ಟು ಚುನಾವಣೆ ನಡೆಸಿದ್ದು ಸತೀಶ್‌ ಜಾರಕಿಹೊಳಿ ಬಣಕ್ಕೆ ತೃಪ್ತಿ ತಂದಿದೆ.

ಹಾಗಾದರೆ, ಈ ಜಟಾಪಟಿಯಲ್ಲಿ ನಿಜಕ್ಕೂ ಮಂಡಿಯೂರಿದ್ದು ಯಾರು ಎಂಬ ಜಿಜ್ಞಾಸೆಯ ನಡುವೆಯೇ ಶುಕ್ರವಾರದ ಎಲ್ಲ ಬೆಳವಣಿಗೆಗಳು ಜನರಿಗೆ ತಾತ್ಕಾಲಿಕ ಎನ್ನುವಂತೆ ಭಾಸವಾಗಿದ್ದು ಸುಳ್ಳಲ್ಲ. ಸಂಧಾನ ಪ್ರಕ್ರಿಯೆ ನಂತರವೂ ಲಕ್ಷ್ಮಿ ಹೆಬ್ಬಾಳಕರ್‌ ಮತ್ತು ಸತೀಶ್‌ ಜಾರಕಿಹೊಳಿ ಹೊರ ಹಾಕಿದ ಅಸಮಾಧಾನದ ಮಾತುಗಳು ಇಬ್ಬರ ನಡುವಿನ ಭಿನ್ನಾಭಿಪ್ರಾಯದ ಕಂದಕ ಇನ್ನೂ ಮುಚ್ಚಿಲ್ಲ, ಯಾವ ಹಂತದಲ್ಲಾದರೂ ಸ್ಫೋಟಗೊಳ್ಳಬಹುದೆನ್ನುವ ಸೂಚನೆ ನೀಡಿದವು.

ವಿವಾದಕ್ಕೆ ಕಾರಣರಾರು?
ಪಿಎಲ್‌ಡಿ ಬ್ಯಾಂಕಿಗೆ ಆಯ್ಕೆಗೊಂಡಿದ್ದ ೧೪ ನಿರ್ದೇಶಕರ ಪೈಕಿ ಈ ಮೊದಲು ಸತೀಶ್ ಜಾರಕಿಹೊಳಿ ಬಣದಲ್ಲಿದ್ದು, ಈಗ ಲಕ್ಷ್ಮಿ ಹೆಬ್ಬಾಳಕರ ಗುಂಪಿನಲ್ಲಿ ಕಾಣಿಸಿಕೊಂಡಿರುವ ಹುದಲಿ ಗ್ರಾಮದ ಬಾಪುಗೌಡ ಪಾಟೀಲ ಅವರನ್ನು ಯಾವುದೇ ಕಾರಣಕ್ಕೂ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬಾರದು ಎನ್ನುವುದು ಸತೀಶ್ ಬಣದ ಷರತ್ತು. ಆದರೆ, ಬಾಪುಗೌಡ ಪಾಟೀಲರನ್ನೇ ಅಧ್ಯಕ್ಷ ಅಥವಾ ಉಪಾಧ್ಯಕ್ಷರನ್ನಾಗಿ ಮಾಡುವುದು ಲಕ್ಷ್ಮಿ ಬಣದ ಪಟ್ಟು. ಜಿಲ್ಲಾ ಕಾಂಗ್ರೆಸ್ ನಾಯಕ ಬಾಪುಗೌಡ ಪಾಟೀಲ ವಿರುದ್ಧ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ವಿರುದ್ಧ ಕೆಲಸ ಮಾಡಿದ, ಜಾರಕಿಹೊಳಿಗೆ ಲಿಂಗಾಯತ ಸಮುದಾಯದ ವೋಟು ಬೀಳದಂತೆ, ತೆರೆಮರೆಯಲ್ಲಿ ಲಕ್ಷ್ಮಿ ಹೆಬ್ಬಾಳಕರ ಅಣತಿಯಂತೆ ಕೆಲಸ ಮಾಡಿ ಆರೋಪವಿದೆ. ಇದೇ ಕಾರಣದಿಂದ ಬಾಪುಗೌಡರನ್ನು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದಿಂದ ಹೊರಗಿಡಲು ಜಾರಕಿಹೊಳಿ ಬಣ ನಿರ್ಧರಿಸಿತ್ತು.

ಸಂಧಾನ ಸಭೆಯಲ್ಲಿ ನಡೆದದ್ದೇನು?
ರಾಜ್ಯ ಸರಕಾರಕ್ಕೂ ನಡುಕ ಸೃಷ್ಟಿಸಿದ್ದ ಪಿಎಲ್‌ಡಿ ಬ್ಯಾಂಕ್ ಸಮಸ್ಯೆ ಬಗೆಹರಿಸಲು ಶುಕ್ರವಾರ ಬೆಳಗ್ಗೆಯೇ ಬೆಳಗಾವಿಗೆ ಆಗಮಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಲಕ್ಷ್ಮಿ ಹೆಬ್ಬಾಳಕರ ಮತ್ತು ಸತೀಶ್ ಜಾರಕಿಹೊಳಿ ಜತೆಗೆ ಹಲವು ಸುತ್ತಿನ ಮಾತುಕತೆ ಮೂಲಕ ಸಂಧಾನ ಸಭೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬಾಪುಗೌಡ ಪಾಟೀಲ ಹೊರತು ಪಡಿಸಿ ನಮ್ಮ ವಿರೋ ಬಣದ ಯಾವುದೇ ನಿರ್ದೇಶಕರನ್ನು ಆಯ್ಕೆ ಮಾಡಿದರೂ ಕಣ್ಣುಮುಚ್ಚಿ ಸೈ ಎನ್ನುತ್ತೇವೆ ಎನ್ನುವ ಸತೀಶ್ ಜಾರಕಿಹೊಳಿ ಷರತ್ತು, ತಾವೇ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಬೇಕಾದಷ್ಟು ಬಹುಮತದ ನಿರ್ದೇಶಕರನ್ನು ಹೊಂದಿರುವ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿತು ಎನ್ನಲಾಗಿದೆ. ಸ್ಥಳೀಯ ಸಮಸ್ಯೆಗೆ ಪರಿಹಾರ ಮತ್ತು ರಾಜ್ಯ ಸರಕಾರಕ್ಕೆ ಬಂದಿರುವ ಗಂಡಾಂತರದಿಂದ ತಪ್ಪಿಸಿಕೊಳ್ಳಲು ವರಿಷ್ಠರ ಸೂಚನೆಯಂತೆ ಈಶ್ವರ ಖಂಡ್ರೆ, ಸತೀಶ್ ಷರತ್ತಿಗೆ ‘ಎಸ್’ ಹೇಳಿ, ಲಕ್ಷ್ಮಿ ಹೆಬ್ಬಾಳಕರ ಅವರ ಮನವೊಲಿಸಿದರು ಎಂದು ತಿಳಿದುಬಂದಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ