ಆ್ಯಪ್ನಗರ

ಸಾರಿಗೆ ನಿಗಮದ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 27ರಂದು ‘ಬೆಂಗಳೂರು ಚಲೋ’

ಚಿಕ್ಕೋಡಿ: ''ಕೆಎಸ್‌ಆರ್‌ಟಿಸಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೂ...

Vijaya Karnataka 21 Jun 2019, 5:00 am
ಚಿಕ್ಕೋಡಿ: ''ಕೆಎಸ್‌ಆರ್‌ಟಿಸಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೂ.27ರಂದು ''ಬೆಂಗಳೂರು ಚಲೋ'' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ'' ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್‌ ಮತ್ತು ವರ್ಕರ್ಸ್‌ ಫೇಡರೇಷನ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅನಂತಸುಬ್ಬರಾವ್‌ ಹೇಳಿದರು.
Vijaya Karnataka Web BEL-20CKD1


ಅವರು, ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ''ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳು ನಷ್ಟದಲ್ಲಿವೆ ಎಂಬ ಕಾರಣ ನೀಡಿ ರಾಜ್ಯ ಸರಕಾರ ನಿವೃತ್ತ ಸಾರಿಗೆ ನೌಕರರ ವೇತನ ನೀಡದೆ ಸತಾಯಿಸುತ್ತಿದೆ. ಹೀಗೆ ನೆಪ ಹೇಳುವುದನ್ನು ಬಿಟ್ಟು ಈ ಕೂಡಲೇ ಮುಖ್ಯಮಂತ್ರಿಗಳು ನಿಗಮಕ್ಕೆ ಒಂದು ಸಾವಿರ ಕೋಟಿ ರೂ. ಹಣ ನೀಡಬೇಕು'' ಆಗ್ರಹಿಸಿದರು.

''ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರಿಗೆ ನಿಗಮಗಳ ಚಾಲಕರು ಮತ್ತು ನಿರ್ವಾಹಕರಿಗೆ ಕಾನೂನಿನ ಪ್ರಕಾರ ಹೆಚ್ಚುವರಿ ಸೇವಾಭತ್ಯೆ ನೀಡುತ್ತಿಲ್ಲ. ನೌಕರಿಗೆ ಹಾಜರಾದರೂ ನಿಗಮದಲ್ಲಿ ವಾಹನಗಳಿಲ್ಲ ಎಂಬಿತ್ಯಾದಿ ಕಾರಣಗಳನ್ನು ನೀಡಿ ಕರ್ತವ್ಯಕ್ಕೆ ಕಳುಹಿಸುತ್ತಿಲ್ಲ'' ಎಂದು ದೂರಿದರು.

''ರಾಜ್ಯದ ನಾಲ್ಕೂ ನಿಗಮಗಳಲ್ಲಿ ಕೆಲಸ ನಿರ್ವಹಿಸುತ್ತಿರುವ 1.20 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ವೈದ್ಯಕೀಯ ಸೌಲಭ್ಯಗಳಿಲ್ಲದೆ ಪರದಾಡುವಂತಾಗಿದೆ. ಸಾರಿಗೆ ಮೇಲಾಧಿಕಾರಿಯ ತಪಾಸಣೆ ಹೆಸರಿನಲ್ಲಿ ಕಾರ್ಮಿಕರ ವಿರುದ್ಧ ಪ್ರಕರಣಗಳು ದಾಖಲಾಗುತ್ತಿವೆ. ಹೀಗೆ ಕಳೆದ ಹತ್ತಾರು ವರ್ಷಗಳಿಂದ ನಡೆಯುತ್ತಿರುವ ಮೇಲಾಧಿಕಾರಿಗಳ ಕಿರಕುಳದಿಂದ ಬೇಸತ್ತು ಸಾಕಷ್ಟು ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ'' ಎಂದು ಗಂಭೀರ ಆರೋಪ ಮಾಡಿದರಲ್ಲದೆ, ''ಕಿರುಕುಳ ನೀಡಿದ ನಿಗಮದ ಮೇಲಧಿಕಾರಿಯ ವಿರುದ್ಧ ಕ್ರಮ ಜರುಗಿಸಬೇಕು'' ಎಂದು ಆಗ್ರಹಿಸಿದರು.

ಹೆದ್ದಾರಿ ಟೋಲ್‌ ಶುಲ್ಕ ನಿಲ್ಲಿಸಿ :
ನಾಲ್ಕು ನಿಗಮಗಳ ಹಣಕಾಸಿನ ಪರಸ್ಥಿತಿ ಶೋಚನೀಯವಾಗಿದೆ. ಹೀಗಾಗಿ ನಿಗಮಗಳಿಗೆ ಮೋಟಾರ್‌ ವೆಹಿಕಲ್‌ ತೆರಿಗೆ ರಿಯಾಯತಿ, ಡಿಸೇಲ್‌ ಮೇಲಿನ ಸುಂಕ ಕಡಿತ ಹಾಗೂ ಹೆದ್ದಾರಿ ಟೋಲ್‌ ಶುಲ್ಕ ನಿಲ್ಲಿಸುವಂತೆ ಆಗ್ರಹಿಸಿದರು. ರಾಜ್ಯದ ನಾಲ್ಕು ಸಾರಿಗೆ ನಿಗಮಗಳನ್ನು ವಿಭಜನೆ ಮಾಡಿದ ಮೇಲೆ ಎಲ್ಲ ನಿಗಮಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಇದನ್ನು ತಪ್ಪಿಸಲು ರಾಜ್ಯದಲ್ಲಿ ಒಂದೇ ನಿಗಮ ಮಾಡುವಂತೆ ಸರಕಾರವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಫೆಡರೇಷನ್‌ನ ರಾಜ್ಯ ಘಟಕದ ಜಂಟಿ ಕಾರ್ಯದರ್ಶಿ ರಾಜಗೋಪಾಲ, ಬಿ.ಎ. ಮುಕ್ಕೇರಿ ವೈ.ಆರ್‌. ಮಾಲವಾಡ, ಎಂ.ಎನ್‌. ಹೂಗಾರ, ಐ.ಎಂ. ಪಟೇಲ್‌, ಎ.ಕೆ. ಮಜಲಟ್ಟಿ, ನಿಸಾರ ಈಪ್ಪೇರಿ, ಇಮ್ರಾನ ಚಿಂಚಲಿ, ಎಸ್‌.ಬಿ. ಜಂಬಗಿ, ಐ.ಎಸ್‌. ಸಯ್ಯದ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ