ಆ್ಯಪ್ನಗರ

ಬೈನಾ ನಿರಾಶ್ರಿತರಿಂದ ವಿಧಾನಸೌಧದ ಎದುರು ಉಪವಾಸ ಸತ್ಯಾಗ್ರಹ

Vijaya Karnataka 31 Oct 2017, 5:00 am

ಪಣಜಿ: ಬೈನಾ ನಿರಾಶ್ರಿತರಿಗೆ ಕರ್ನಾಟಕ ಸರಕಾರ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡುವುದಾಗಿ ಆಶ್ವಾಸನೆಯನ್ನಷ್ಟೇ ನೀಡುತ್ತಿದೆ. ಕಳೆದ ಹಲವು ವರ್ಷಗಳಿಂದ ಗೋವಾದಲ್ಲಿ ಮನೆ ಕಳೆದುಕೊಂಡು ಬೀದಿಪಾಲಾದ ಕನ್ನಡಿಗರ ಕುಟುಂಬಗಳಿಗೆ ಇದುವರೆಗೂ ಪುನರ್ವಸತಿ ಲಭಿಸಿಲ್ಲ. ಬೈನಾ ನಿರಾಶ್ರಿತ ಕನ್ನಡಿಗರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷ ಣಾ ವೇದಿಕೆಯ ಪ್ರವೀಣ ಶೆಟ್ಟಿ ನೇತೃತ್ವದಲ್ಲಿ ನ.7ರಿಂದ ಬೆಂಗಳೂರಿನಲ್ಲಿ ವಿಧಾನಸೌಧದ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಕರ್ನಾಟಕ ರಕ್ಷ ಣಾ ವೇದಿಕೆಯ ಗೋವಾ ರಾಜ್ಯಾಧ್ಯಕ್ಷ ಮಂಜುನಾಥ ನಾಟೀಕಾರ್‌ ತಿಳಿಸಿದರು.

ವಾಸ್ಕೊದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಂಗಳೂರು ಚಲೋ ಉಪವಾಸ ಸತ್ಯಾಗ್ರಹದಲ್ಲಿ ಬೈನಾದಿಂದ 300ಕ್ಕೂ ಹೆಚ್ಚು ನಿರಾಶ್ರಿತ ಕನ್ನಡಿಗರು ತೆರಳಲಿದ್ದಾರೆ. ವಿವಿಧ ಸಂಘಟನೆಗಳೂ ಹೋರಾಟಕ್ಕೆ ಬೆಂಬಲ ನೀಡಿವೆ. ಗೋವಾ ಸರಕಾರ ಹಂತ ಹಂತವಾಗಿ ಬೈನಾದಲ್ಲಿ ಕನ್ನಡಿಗರ ಮನೆಗಳನ್ನು ತೆರವುಗೊಳಿಸುತ್ತಲೇ ಇದೆ. ಈವರೆಗೆ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸಿಕೊಟ್ಟಿಲ್ಲ. ಬೈನಾದಲ್ಲಿ ಪ್ರತಿ ಬಾರಿ ಮನೆ ತೆರವುಗೊಂಡಾಗ ಕರ್ನಾಟಕ ಸರಕಾರ ತನ್ನ ಪ್ರತಿನಿಧಿಗಳನ್ನು ಗೋವಾಕ್ಕೆ ಕಳಿಸಿ ನಿರಾಶ್ರಿತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡುವ ಭರವಸೆಯನ್ನಷ್ಟೇ ನೀಡುತ್ತಿದೆ. ಇದು ಕಳೆದ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ ಇದುವರೆಗೂ ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಾರಿಯ ಹೋರಾಟದಲ್ಲಿ ಬೈನಾ ನಿರಾಶ್ರಿತರಿಗೆ ಶಾಶ್ವತ ಪುನರ್ವಸತಿ ಲಭಿಸುವವರೆಗೂ ಹೋರಾಟ ಮಾಡಲಾಗುವುದು ಎಂದು ಅವರು ತಿಳಿಸಿದರು.

ಕರ್ನಾಟಕ ರಕ್ಷ ಣಾ ವೇದಿಕೆಯ ಗೋವಾ ಘಟಕದ ಕಾರ್ಯದರ್ಶಿ ಬಸ್ಸು ಚಲವಾದಿ, ಉಪಾಧ್ಯಕ್ಷ ವಿನಾಯಕ ಡಾಂಗೆ, ಬೈನಾ ನಿರಾಶ್ರಿತ ಸಂಘಟನೆಯ ಮುಖಂಡ ಪರಸಪ್ಪ ಛಲವಾದಿ ಇತರರು ಉಪಸ್ಥಿತರಿದ್ದರು.

Vijaya Karnataka Web bina refugees protest
ಬೈನಾ ನಿರಾಶ್ರಿತರಿಂದ ವಿಧಾನಸೌಧದ ಎದುರು ಉಪವಾಸ ಸತ್ಯಾಗ್ರಹ


ಬಾಗಲಕೋಟೆಯಲ್ಲಿ ವ್ಯವಸ್ಥೆ ಮಾಡಿ

ಬೈನಾ ನಿರಾಶ್ರಿತರಿಗೆ ಗೋವಾದಲ್ಲಿ ಪುನರ್ವಸತಿ ಕಲ್ಪಿಸಿಕೊಡಲು ಜಮೀನು ಖರೀದಿಸುವುದು ಕಷ್ಟ ಎಂದಾದರೆ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಪುನರ್ವಸತಿ ಕಲ್ಪಿಸಿಕೊಡಲಿ. ಬೈನಾದಲ್ಲಿ ನಿರಾಶ್ರಿತರಾಗಿರುವವರು ಬಹುತೇಕ ಮೂಲತಃ ಬಾಗಲಕೋಟೆ ಜಿಲ್ಲೆಯವರೇ ಆಗಿದ್ದಾರೆ ಎಂದು ಮಂಜುನಾಥ ನಾಟೀಕಾರ್‌ ಹೇಳಿದರು. ಗೋವಾದಲ್ಲಿ ನಿರಾಶ್ರಿತ ಕನ್ನಡಿಗರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡಲು ಗೋವಾ ಸರಕಾರ ಸಹಕಾರ ನೀಡುವುದು ದೂರದ ಮಾತು. ಇದರಿಂದಾಗಿ ಬಾಗಲಕೋಟೆ ಜಿಲ್ಲೆಯಲ್ಲಾದರೂ ನಿರಾಶ್ರಿತ ಕುಟುಂಬಗಳಿಗೆ ಶಾಶ್ವತ ಪುನರ್ವಸತಿ ವ್ಯವಸ್ಥೆ ಹಾಗೂ ಉದ್ಯೋಗ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ