ಬೆಳಗಾವಿ: ಲಕ್ಷ್ಮೇತಾಯಿ ಫೌಂಡೇಶನ್ನಿಂದ ತಾಲೂಕಿನ ಗ್ರಾಮೀಣ ಭಾಗದಲ್ಲಿ 15 ಕಡೆ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗುವುದು ಎಂದು ಫೌಂಡೇಶನ್ನ ಸಂಸ್ಥಾಪಕಿ, ಕಾಂಗ್ರೆಸ್ ಮಹಿಳಾ ವಿಭಾಗದ ರಾಜ್ಯ ಘಟಕದ ಅಧ್ಯಕ್ಷೆ ಲಕ್ಷ್ಮೇ ಹೆಬ್ಬಾಳಕರ ತಿಳಿಸಿದರು.
ತಾಲೂಕಿನ ರಣಕುಂಡೆ ಗ್ರಾಮದಲ್ಲಿ ಫೌಂಡೇಶನ್ ವತಿಯಿಂದ ನಿರ್ಮಿಸಿದ ಪ್ರಯಾಣಿಕರ ತಂಗುದಾಣದ ಉದ್ಘಾಟನೆ ಬಳಿಕ ಅವರು ಮಾತನಾಡಿದರು. ರಣಕುಂಡೆ ಗ್ರಾಮದ ವಿದ್ಯಾರ್ಥಿಗಳು ಪ್ರತಿ ದಿನ ಬಸ್ಗಾಗಿ ಬಿಸಿಲಲ್ಲಿ ನಿಲ್ಲುತ್ತಿದ್ದರು. ಇವರ ಸಮಸ್ಯೆಗೆ ಸ್ಥಳೀಯ ಶಾಸಕರು ಸ್ಪಂದಿಸಬೇಕಿತ್ತು. ಆದರೆ, ಯಾರೂ ಅವರ ಮನವಿಗೆ ಬೆಲೆ ಕೊಟ್ಟಿಲ್ಲ. ಅದಕ್ಕಾಗಿ ಫೌಂಡೇಶನ್ ವತಿಯಿಂದ ತಂಗುದಾಣ ನಿರ್ಮಿಸಿದ್ದೇವೆ ಎಂದರು.
ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಸಲುವಾಗಿ ಫೌಂಡೇಶನ್ ವತಿಯಿಂದ ಈಗಾಗಲೇ ಎರಡು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಈಗ ಫೌಂಡೇಶನ್ ವತಿಯಿಂಂದ ಇಬ್ಬರು ತಜ್ಞ ವೈದ್ಯರನ್ನು ನೇಮಕ ಮಾಡಿ, ಗ್ರಾಮೀಣ ಭಾಗದ ಜನರಿಗೆ ನಿರಂತರ ಆರೋಗ್ಯ ಸೇವೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ತಾಲೂಕಿನಲ್ಲಿ ಈಗಾಗಲೇ ಐವತ್ತಕ್ಕೂ ಹೆಚ್ಚು ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಬರಗಾಲದ ಸಂದರ್ಭದಲ್ಲಿ ಸಾಕಷ್ಟು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗಿದೆ. ಸರಕಾರಿ ಶಾಲೆಗಳಿಗೆ ಪ್ರೊಜೆಕ್ಟರ್ಗಳನ್ನು ಸಹ ನೀಡಲಾಗಿದೆ. ಫೌಂಡೇಶನ್ನಿಂದ ಇದೇ ರೀತಿ ಸಾಮಾಜಿಕ ಸೇವೆಗಳು ಮುಂದುವರಿಯಲಿವೆ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಂಕರಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮೋಹನ ಮೋರೆ, ಶಂಕರಗೌಡ ಪಾಟೀಲ, ಚರಣರಾಜ ಹಟ್ಟಿಹೊಳಿ, ಯಲ್ಲಪ್ಪಾ ಡೆಕೋಳಕರ, ಬುಡಾ ಮಾಜಿ ಅಧ್ಯಕ್ಷ ಯುವರಾಜ ಕದಂ ಹಾಜರಿದ್ದರು.