ಆ್ಯಪ್ನಗರ

ಕಾರ್‌- ಬೈಕ್‌ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ

ಖಾನಾಪುರ: ಬೆಳಗಾವಿ- ಚೋರ್ಲಾ ರಾಜ್ಯ ಹೆದ್ದಾರಿಯ ...

Vijaya Karnataka 10 May 2019, 5:00 am
ಖಾನಾಪುರ : ಬೆಳಗಾವಿ- ಚೋರ್ಲಾ ರಾಜ್ಯ ಹೆದ್ದಾರಿಯ ಕಣಕುಂಬಿ-ಜಾಂಬೋಟಿ ನಡುವೆ ಗುರುವಾರ ಬೆಳಗ್ಗೆ ಬೈಕ್‌ ಹಾಗೂ ಕಾರ್‌ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್‌ ಸವಾರರಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಡಿಕ್ಕಿಯಿಂದ ಹೊತ್ತಿಕೊಂಡ ಬೆಂಕಿಯಿಂದ ಎರಡೂ ವಾಹನಗಳು ಸುಟ್ಟು ಕರಕಲಾಗಿವೆ.
Vijaya Karnataka Web BEL-9KHANAPUR1


ಬೈಕ್‌ ಸವಾರರಾದ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ವಿಶ್ವನಾಥ ಗುಂಡಪ್ಪ ಬೋರಗಿ (32) ಮತ್ತು ಸುನಿಲ್‌ ಮಲ್ಲಿಕಾರ್ಜುನ ಬೋರಗಿ (25) ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ಇವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು ಪ್ರಾಥಮಿಕ ಚಿಕಿತ್ಸೆ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಕಳಿಸಲಾಗಿದೆ.

ವಿಶ್ವನಾಥ ಹಾಗೂ ಸುನಿಲ್‌ ಬಸವನ ಬಾಗೇವಾಡಿಯಿಂದ ರಾಯಲ್‌ ಎನ್‌ಫಿಲ್ಡ್‌ ಬೈಕ್‌ನಲ್ಲಿ ಗೋವಾಕ್ಕೆ ತೆರಳುತ್ತಿದ್ದರು. ಕಣಕುಂಬಿಯಿಂದ ಬೆಳಗಾವಿಯತ್ತ ಸಂಚರಿಸುತ್ತಿದ್ದ ವ್ಯಾಗನಾರ್‌ ಕಾರ್‌ ಹಾಗೂ ಬೈಕ್‌ ನಡುವೆ ಚಿಕಲೆ ಕ್ರಾಸ್‌ ಬಳಿ ಡಿಕ್ಕಿ ಸಂಭವಿಸಿದೆ.

ಸ್ಥಳಕ್ಕೆ ಖಾನಾಪುರ ಸಿಪಿಐ ಮೋತಿಲಾಲ್‌ ಪವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಿರ್ಲಕ್ಷ ತನದ ಚಾಲನೆಯ ಆರೋಪದಡಿ ಕಾರ್‌ ಚಾಲಕ, ತಾಲೂಕಿನ ದೇವಾಚಿಹಟ್ಟಿ ನಿವಾಸಿ ನಂದು ಸೀತಾರಾಮ ಬಾಮಣೆ ವಿರುದ್ಧ ದೂರು ದಾಖಲಾಗಿದೆ.

ಸಂಚಾರ ವ್ಯತ್ಯಯ: ಜಾಂಬೋಟಿ-ಕಣಕುಂಬಿ ಮಧ್ಯದಲ್ಲಿ ನಡೆದ ರಸ್ತೆ ಅಪಘಾತದ ಪರಿಣಾಮ ಬೆಳಗಾವಿ-ಗೋವಾ ಮಾರ್ಗದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಬೆಳಗಾವಿ ಪಣಜಿ ರಾಷ್ಟ್ರೀಯ ಹೆದ್ದಾರಿಯ ಖಾನಾಪುರ, ಲೋಂಡಾ - ಅನಮೋಡ ಮಾರ್ಗದಲ್ಲಿ ಚತುಷ್ಪಥ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಹೀಗಾಗಿ ಕಳೆದ ಹಲವು ದಿನಗಳಿಂದ ರಾಜ್ಯದಿಂದ ಗೋವಾದತ್ತ ಹೋಗಿಬರುವ ಎಲ್ಲ ವಾಹನಗಳು ಚೋರ್ಲಾ ಮಾರ್ಗದಲ್ಲೇ ಸಾಗುತ್ತಿವೆ. ಗುರುವಾರದ ಅಪಘಾತದ ಪರಿಣಾಮ ಚೋರ್ಲಾ ಹೆದ್ದಾರಿಯ ಎರಡೂ ಬದಿಗಳಲ್ಲಿ ನೂರಾರು ವಾಹನಗಳು ಕಿಮೀ ಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಭೇಟಿ ನೀಡಿದ ಜಾಂಬೋಟಿ ಹೊರಠಾಣೆಯ ಪೊಲೀಸರು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ