ಆ್ಯಪ್ನಗರ

ರಾಷ್ಟ್ರಪತಿ, ಗಣ್ಯರ ಆಗಮನ ಹಿನ್ನೆಲೆಯಲ್ಲಿ ಸಂಚಾರ ಮಾರ್ಗ ಬದಲು

ರಾಷ್ಟ್ರಪತಿ ಒಳಗೊಂಡು ಇತರೆ ಅತಿಗಣ್ಯವ್ಯಕ್ತಿಗಳು ಶನಿವಾರ ನಗರದಲ್ಲಿ ಜರುಗಲಿರುವ ಕೆಎಲ್‌ಎಸ್‌ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ...

Vijaya Karnataka 15 Sep 2018, 5:00 am
ಬೆಳಗಾವಿ: ರಾಷ್ಟ್ರಪತಿ ಒಳಗೊಂಡು ಇತರೆ ಅತಿಗಣ್ಯವ್ಯಕ್ತಿಗಳು ಶನಿವಾರ ನಗರದಲ್ಲಿ ಜರುಗಲಿರುವ ಕೆಎಲ್‌ಎಸ್‌ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವುದರಿಂದ ಇವರು ಸಂಚರಿಸುವ ಮಾರ್ಗದಲ್ಲಿ ಪೊಲೀಸರು ಸಾರ್ವಜನಿಕ ಸಂಚಾರ ನಿರ್ಬಂಧಿಸಿ, ಬದಲಿ ಮಾರ್ಗಗಳ ಬಳಕೆಗೆ ಸೂಚನೆ ನೀಡಿದ್ದಾರೆ.
Vijaya Karnataka Web kovind


ಗಣ್ಯರ ಪ್ರವಾಸ ಸಂದರ್ಭದಲ್ಲಿ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಇದು ಶನಿವಾರ ಬೆಳಗ್ಗೆ 8.30 ರಿಂದ ಮಧ್ಯಾಹ್ನ 1.30ರವರೆಗೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

ಬದಲಿ ಮಾರ್ಗಗಳು: ಸಾಂಬ್ರಾ ಅಂಡರ್‌ ಬ್ರಿಜ್‌, ಮಹಾಂತೇಶ ನಗರ ಅಂಡರ್‌ ಬ್ರಿಜ್‌, ಅಶೋಕ ಪಿಲ್ಲರ್‌ ವೃತ್ತದ ಮೂಲಕ ಹಾಯ್ದು ಬರುವ ಎಲ್ಲ ತರಕಾರಿ ವಾಹನಗಳು ಮೇಲೆ ಸೂಚಿಸಿದ ಸಮಯದಲ್ಲಿ ಅಲಾರವಾಡ ಅಂಡರ್‌ ಬ್ರಿಜ್‌, ಯಡಿಯೂರಪ್ಪ ಮಾರ್ಗದ ಮುಖಾಂತರ ಹಳೆ ಪಿಬಿ ರಸ್ತೆ ಬಳಸಿಕೊಂಡು ಸಂಚರಿಸಬೇಕು. ಗೋವಾ ಕಡೆಯಿಂದ ಬರುವ ಎಲ್ಲ ಸಾರಿಗೆ ಸಂಸ್ಥೆಯ ಬಸ್ಸುಗಳು ಪೀರನವಾಡಿ ನಾಕಾ ಹತ್ತಿರ ನಿಲುಗಡೆ ಮಾಡಬೇಕು. ಇಲ್ಲಿಂದಲೇ ಪ್ರಯಾಣಿಕರನ್ನು ಹತ್ತಿಸಿಕೊಂಡು ಮರಳಿ ಹೋಗಬೇಕು.

ಕೊಲ್ಲಾಪುರ, ಗೋಕಾಕ ಮತ್ತು ಧಾರವಾಡ ಕಡೆಗಳಿಂದ ಬರುವ ಬಸ್ಸುಗಳು ಅಶೋಕ ನಗರದ 4 ಲೇನ್‌ ರಸ್ತೆ ಮೇಲಿನ ಖಾಲಿ ಸ್ಥಳಕ್ಕೆ ಹೋಗಬೇಕು ಮತ್ತು ಅಲ್ಲಿಂದಲೇ ಕಾರ್ಯಾಚರಣೆ ಮಾಡಬೇಕು. ಇದೇ ರೀತಿ ನಗರ ಸಾರಿಗೆ (ಸಿಬಿಟಿ) ಬಸ್ಸುಗಳು ಅಶೋಕ ನಗರದ ಧರ್ಮನಾಥ ಸರ್ಕಲ್‌ನಿಂದ ಕಾರ್ಯಾಚರಣೆ ಮಾಡಬೇಕು. ಶನಿವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಎಲ್ಲ ದಿಕ್ಕುಗಳಿಂದ ನಗರ ಪ್ರವೇಶ ಮಾಡುವ ಭಾರಿ ವಾಹನಗಳು ನಗರದಲ್ಲಿ ಸಂಚರಿಸದಂತೆ ನಿಷೇಧಿಸಲಾಗಿದೆ.

ಗೋವಾ, ಖಾನಾಪುರ ಕಡೆಯಿಂದ ಬರುವವರು ದೇಸೂರ ಮೂಲಕವಾಗಿ ಕೆ.ಕೆ. ಕೊಪ್ಪ ಹಾಗೂ ಹಲಗಾ ಹತ್ತಿರದ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸೇರಿಕೊಳ್ಳಬೇಕು. ಇನ್ನು ಗೋಕಾಕ ಕಡೆಯಿಂದ ಬರುವವರು ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸೇರಿ ನಗರ ಪ್ರವೇಶಿಸದೆ ಕೆ.ಕೆ. ಕೊಪ್ಪ ಕ್ರಾಸ್‌ ಮೂಲಕ ದೇಸೂರ ಮಾರ್ಗವಾಗಿ ಗೋವಾ ರಸ್ತೆಗೆ ಸೇರಿಕೊಳ್ಳಬೇಕು. ಕೊಲ್ಲಾಪುರ ಕಡೆಯಿಂದ ಬರುವವರು ನಗರ ಪ್ರವೇಶಿಸದೆ ರಾಷ್ಟ್ರೀಯ ಹೆದ್ದಾರಿ ಹಿಡಿದು ಕೆ.ಕೆ. ಕೊಪ್ಪ ಕ್ರಾಸ್‌ ಮೂಲಕ ದೇಸೂರ ಮಾರ್ಗವಾಗಿ ಗೋವಾ ರಸ್ತೆ ಸೇರಿ ಮುಂದೆ ಸಾಗಬೇಕು.

ರಾಷ್ಟ್ರಪತಿಗಳು ನಗರದಲ್ಲಿ ಸಂಚರಿಸುವ ಸಾಂಬ್ರಾ ರಸ್ತೆ, ರಾಷ್ಟ್ರೀಯ ಹೆದ್ದಾರಿ-4, ಲೇಕ್‌ವ್ಯೂವ್‌ ಆಸ್ಪತ್ರೆ ರಸ್ತೆ, ಅಶೋಕ ಪಿಲ್ಲರ್‌ನಿಂದ ಚನ್ನಮ್ಮಾ ವೃತ್ತ, ಇಲ್ಲಿಂದ ಗೋಗಟೆ ಸರ್ಕಲ್‌, ಕಾಂಗ್ರೆಸ್‌ ರಸ್ತೆ, ಖಾನಾಪುರ ರಸ್ತೆ ಹಾಗೂ ಚನ್ನಮ್ಮ ಸರ್ಕಲ್‌ನಿಂದ ಕೃಷ್ಣದೇವರಾಯ (ಕೊಲ್ಲಾಪುರ) ಸರ್ಕಲ್‌ವರೆಗಿನ ರಸ್ತೆಯ ಎರಡೂ ಬದಿಯಲ್ಲಿ ಎಲ್ಲ ಮಾದರಿಯ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

ವಿಜಯಪುರ, ಬಾಗಲಕೋಟ, ನೇಸರಗಿ, ಯರಗಟ್ಟಿ, ಲೋಕಾಪುರ ಕಡೆಯಿಂದ ಬರುವ ವಾಹನಗಳು ಮಾರಿಹಾಳ ಪೊಲೀಸ್‌ ಠಾಣೆ ಪಕ್ಕದ ರಸ್ತೆಯಿಂದ ಸುಳೆಭಾವಿ ಮಾರ್ಗದ ಮೂಲಕ ಗೋಕಾಕ ರಸ್ತೆ ಸೇರಿಕೊಳ್ಳಬೇಕು. ಈ ಸಂಚಾರ ನಿರ್ಬಂಧ ಯಾವುದೇ ಆ್ಯಂಬುಲೆನ್ಸ್‌ ವಾಹನಗಳಿಗೆ ಅನ್ವಯಿಸುವುದಿಲ್ಲವೆಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

ಟಿಳಕವಾಡಿ ರೈಲ್ವೆ ಗೇಟ್‌ಗಳು ಬಂದ್‌

ಶನಿವಾರ ಟಿಳಕವಾಡಿ 1 ಮತ್ತು 2ನೇ ರೈಲ್ವೆಗೇಟ್‌ ಪೂರ್ಣ ಬಂದ್‌ ಇರಲಿದ್ದು, ಇಲ್ಲಿಂದ ಸಂಚರಿಸುವವರು ಕಪಿಲೇಶ್ವರ ಓವರ್‌ ಬ್ರಿಜ್‌ ಹಾಗೂ ಹಳೆ ಪಿಬಿ ರಸ್ತೆ ಓವರ್‌ ಬ್ರಿಜ್‌ಗಳನ್ನು ಬಳಸಿ ಸಂಚರಿಸಬೇಕು. ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವಿಸ್‌ ರಸ್ತೆಯ ಮೇಲೆ ಎಲ್ಲ ಮಾದರಿಯ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಇಲ್ಲಿ ವಾಹನ ನಿಲ್ಲಿಸುತ್ತಿದ್ದವರು ಬಾಕ್ಸೈಟ್‌ ರಸ್ತೆ ಹಾಗೂ ಅಲಾರವಾಡ ರಸ್ತೆ ಕಡೆಗೆ ಹೋಗಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ