ಆ್ಯಪ್ನಗರ

ಎಂಇಎಸ್‌ಗೆ ಸೆಡ್ಡು ಹೊಡೆದ ಪಾಲಿಕೆ ಸಭೆ

ಬೆಳಗಾವಿ : ಚುನಾವಣೆ ಸಮೀಪಿಸುತ್ತಿದ್ದಂತೆ ...

Vijaya Karnataka 18 Nov 2018, 5:00 am
ಬೆಳಗಾವಿ : ಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತ ವ್ಯವಸ್ಥೆ ಮತ್ತು ನಗರ ಅಭಿವೃದ್ಧಿಗೆ ಬೆನ್ನು ಕೊಡುವ ಹಳೇ ಚಾಳಿಯನ್ನು ಮತ್ತೆ ಮುಂದುವರಿಸಿದ ಪಾಲಿಕೆ ವಿರೋಧ ಪಕ್ಷದಲ್ಲಿರುವ ಎಂಇಎಸ್‌ ಸದಸ್ಯರು ಶನಿವಾರ ನಡೆದ ಪರಿಷತ್‌ ಸಭೆಯಲ್ಲಿ ಸಭಾತ್ಯಾಗ ಮಾಡಿದರು. ಆದರೆ, ಆಡಳಿತ ಪಕ್ಷ ಕೋರಂ ಬಲಾಬಲ ಆಧಾರದ ಮೇಲೆ ಸಭೆ ಮುಂದುವರಿಸಿ, ಚರ್ಚೆಗಿದ್ದ 17ರ ಪೈಕಿ ಏಳು ಪ್ರಸ್ತಾವಗಳಿಗೆ ಸರ್ವಾನುಮತದಿಂದ ಅನುಮೋದನೆ ನೀಡುವ ಮೂಲಕ ಎಂಇಎಸ್‌ಗೆ ತಕ್ಕ ಪಾಠ ಕಲಿಸಿತು.
Vijaya Karnataka Web BLG-1711-2-52-17MAHESH3B


2018ರ ಆ. 10ರಂದು ನಡೆದ ಪರಿಷತ್‌ ಸಭೆಯ ನಡಾವಳಿ ಸೇರಿದಂತೆ ನಗರದ ಅಟಲ್‌ಬಿಹಾರಿ ವಾಜಪೇಯಿ ಮಾರ್ಗದಲ್ಲಿ ವಾಜಪೇಯಿ ಅವರ ಮೂರ್ತಿ ಸ್ಥಾಪನೆ, ಅನಗೋಳದ ಸಂಭಾಜಿ ವೃತ್ತದಲ್ಲಿ ಧರ್ಮವೀರ ಸಂಭಾಜಿ ಮಹಾರಾಜರ ಮೂರ್ತಿ, ಬಾಕ್ಸೈಟ್‌ ರಸ್ತೆಯ ಜಿನಾಬುಕಲ್‌ ಕಾರ್ಖಾನೆ ಸಮೀಪದ ವೃತ್ತಕ್ಕೆ ಶ್ರೀ ವಾಲ್ಮಿಕಿ ವೃತ್ತ ನಾಮಕರಣ, ಬಸವೇಶ್ವರ ಉದ್ಯಾನವನದ ಶ್ರೀ ಬಸವೇಶ್ವರ ಮೂರ್ತಿ ಸುತ್ತಲೂ ಶಾಶ್ವತ ವೇದಿಕೆ ನಿರ್ಮಿಸುವುದು ಮತ್ತು ನಗರದ ವಿವಿಧ ಬಡಾವಣೆಗಳಲ್ಲಿನ ಪ್ರಮುಖ ರಸ್ತೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರಿಡುವ ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಯಿತು.

ನಡಾವಳಿ ಬಿಟ್ಟು ಚರ್ಚೆ:
ಈಚೆಗೆ ಶಿಮ್ಲಾ ಪ್ರವಾಸ ಕೈಗೊಂಡ ವಿಷಯವಾಗಿ ಸದಸ್ಯೆಯೊಬ್ಬರು ಪ್ರವಾಸ ಕೈಗೊಂಡಿದ್ದ ಸದಸ್ಯರ ವಿರುದ್ಧ ತಪ್ಪು ಪ್ರಚಾರ ಮಾಡುತ್ತಿದ್ದಾರೆ. ಅಲ್ಲದೆ, ಸಭೆಯ ನಡಾವಳಿ ತಯಾರಿಕೆಯಲ್ಲೂ ಸದಸ್ಯರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ನಡಾವಳಿ ಮೀರಿ ಚರ್ಚೆಗೆ ಮುಂದಾದ ಸದಸ್ಯ ರತನ್‌ ಮಾಸೇಕರ್‌ ವರ್ತನೆಗೆ ವಿರೋಧ ಪಕ್ಷದ ಸದಸ್ಯರು ಬೆಂಬಲಿಸಿದರು. ನಡಾವಳಿ ಪ್ರಕಾರ ನಿಮಗೆ ಅವಕಾಶ ಬಂದಾಗ ಮಾತನಾಡಬೇಕು ಎಂದು ಮೇಯರ್‌ ಹಾಗೂ ಆಡಳಿತ ಮಂಡಳಿ ಸದಸ್ಯರು ಸೂಚಿಸಿದರು. ಈ ವೇಳೆ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿ ಹೊರ ನಡೆದರು. ಮಧ್ಯಾಹ್ನದ ಅವಧಿಯ ಚರ್ಚೆಗೂ ವಿರೋಧ ಪಕ್ಷದ ಸದಸ್ಯರು ಗೈರಾಗಿದ್ದರಿಂದ ಕೋರಂ ಆಧಾರದ ಮೇಲೆ ಮೇಯರ್‌ ಸಭೆ ಮುಂದುವರಿಸಿದರು. ಸಭೆ ಮುಂದುವರಿಸಲು ಒಟ್ಟು 58 ಸದಸ್ಯರ ಪೈಕಿ 21 ಸದಸ್ಯರ ಹಾಜರಾತಿ ಕಡ್ಡಾಯ. ನಿಯಮದಂತೆ 23 ಸದಸ್ಯರು ಸಭೆಯಲ್ಲಿ ಹಾಜರಿದ್ದರು.

ಮೇಯರ್‌ ವಿರುದ್ಧ ಗರಂ ಆದ ಅಭಯ:
ಈಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ, ಕೇಂದ್ರ ಸಚಿವ ಅನಂತಕುಮಾರ, ಗದುಗಿನ ತೋಂಟದಾರ್ಯ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ಅಗಲಿಕೆಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಆರಂಭಗೊಂಡ ಪರಿಷತ್‌ ಸಭೆಯ ಆರಂಭದಲ್ಲೇ ಶಾಸಕ ಅಭಯ ಪಾಟೀಲ ಮೇಯರ್‌ ನಡವಳಿಕೆ ವಿರುದ್ಧ ಗರಂ ಆದರು. ನಗರ ಅಭಿವೃದ್ಧಿ ವಿಷಯ ಕುರಿತು ನಡೆಸುವ ಸಭೆಗಳ ಮಾಹಿತಿಯನ್ನೂ ಸ್ಥಳೀಯ ಶಾಸಕರಿಗೆ ನೀಡುತ್ತಿಲ್ಲ. ನಗರದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಬೆನ್ನು ಬಿದ್ದು ಕೆಲಸ ಮಾಡುತ್ತಿರುವ ಶಾಸಕರನ್ನೇ ಹೊರಗಿಟ್ಟು ಸಭೆ ನಡೆಸುತ್ತಿರುವುದು ಶಾಸಕರ ಹಕ್ಕುಚ್ಯುತಿಗೆ ಕಾರಣವಾಗುತ್ತದೆ. ಪಕ್ಷ ಬೇರೆಬೇರೆಯಾದರೂ ನಗರದ ಎಲ್ಲ ನಾಲ್ಕೂ ಜನ ಶಾಸಕರು ಅಭಿವೃದ್ಧಿ ವಿಷಯದಲ್ಲಿ ಒಂದಾಗಿದ್ದೇವೆ. ಆದರೆ, ಶಾಸಕರ ನಡುವೆ ಜಗಳ ತರುವ ಕೆಲಸ ಮೇಯರ್‌ ಮಾಡಬಾರದು. ಆದಾಗ್ಯೂ ಹಕ್ಕು ಚ್ಯುತಿ ಅಡಿ ದೂರು ನೀಡಿದರೆ ಮೇಯರ್‌ ಮಾಡಿದ ತಪ್ಪಿಗೆ ಅಧಿಕಾರಿಗಳು ಬಲಿಯಾಗುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌ ಬಸಪ್ಪ ಚಿಕ್ಕಲದಿನ್ನಿ ಮುಂದಿನ ದಿನಗಳಲ್ಲಿ ಸ್ಥಳೀಯ ಶಾಸಕರನ್ನು ಕಡೆಗಣಿಸುವುದಿಲ್ಲ ಎಂದು ಭರವಸೆ ನೀಡಿದರು.

ಕನ್ನಡದಲ್ಲೂ 'ಶಿವಚರಿತ':
ಸದಸ್ಯರ ಸಭಾತ್ಯಾಗಕ್ಕೂ ಮುಂಚೆ, ''ಕೆಲ ಅಭಿವೃದ್ಧಿ ಯೋಜನೆಗಳನ್ನು ಉದ್ದೇಶಪೂರ್ವಕ ಕೈ ಬಿಡಲಾಗುತ್ತಿದೆ. ಆ ಪೈಕಿ ಶಿವಾಜಿ ಉದ್ಯಾನವನದಲ್ಲಿನ 'ಶಿವಚರಿತ' ಯೋಜನೆಯೂ ಒಂದು'', ಎಂದು ಸದಸ್ಯ ಪಂಡರಿ ಪರಬ ಆರೋಪಿಸಿದಾಗ ತಿರುಗೇಟು ನೀಡಿದ ಶಾಸಕ ಅಭಯ ಪಾಟೀಲ, ''ಶಿವಚರಿತ' ಕುರಿತು ಸರಿಯಾದ ಮಾಹಿತಿ ಇಲ್ಲದೆ ಪಂಡರಿ ಪರಬ ಮಾತನಾಡುತ್ತಿದ್ದಾರೆ. 2012ರಲ್ಲಿ 'ಶಿವಚರಿತ' ಕಾರ್ಯಕ್ರಮ ರೂಪಿಸಿದ್ದು ನಾನೇ. ಆದರೆ, ಯೋಜನೆ ಅನುಷ್ಠಾನಕ್ಕೆ ಈ ಹಿಂದಿನ ಶಾಸಕರು ಮತ್ತು ಪಾಲಿಕೆಯ ಕೆಲ ಸದಸ್ಯರು ಅಡ್ಡಿ ಪಡಿಸಿದ್ದರು. ಅಂದು ವಿರೋಧಿಸಿದವರಿಗೆ ಇಂದು 'ಶಿವಚರಿತೆ' ಕುರಿತು ಮಾತನಾಡುವ ಅರ್ಹತೆ ಇಲ್ಲ'', ಎಂದರು. ''ನಾನು ಆರಂಭಿಸಿದ ಕೆಲಸ ಪೂರ್ಣಗೊಳಿಸುವ ಯೋಗ ನನಗೇ ಕೂಡಿ ಬಂದಿದೆ. ಮರಾಠಿ ಜತೆಗೆ ಕನ್ನಡ ಭಾಷೆಯಲ್ಲೂ 'ಶಿವಚರಿತ' ರೆಕಾರ್ಡ್‌ ಮಾಡಿ ಪ್ರತಿಯೊಬ್ಬರಿಗೂ ತಲುಪುವಂತೆ ಯೋಜನೆ ಅನುಷ್ಠಾನಗೊಳಿಸಲಾಗುವುದು'', ಎಂದರು.

ಪಾಲಿಕೆ ಚುನಾವಣೆ ಸಮೀಪಿಸುತ್ತಿದ್ದಂತೆ ಮರಾಠಿ ಮತದಾರರ ಅನುಕಂಪ ಗಿಟ್ಟಿಸಿಕೊಳ್ಳಲು ಎಂಇಎಸ್‌ ಸದಸ್ಯರು ಸಭಾತ್ಯಾಗ ಮಾಡುವುದು ಸಾಮಾನ್ಯ. ಪಾಲಿಕೆ ಅಧಿಕಾರ ತಪ್ಪಿದಾಗಲೆಲ್ಲ ಏನಾದರೂ ನೆಪಗಳನ್ನೊಡ್ಡಿ ಸಭೆಯ ಸಮಯ ಹಾಳು ಮಾಡುತ್ತಲೆ ಬಂದಿದ್ದಾರೆ.
- ದೀಪಕ ಜಮಖಂಡಿ. ಆಡಳಿತ ಪಕ್ಷದ ನಾಯಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ