ಆ್ಯಪ್ನಗರ

ಇಂದು ಪಾಲಿಕೆ ಸಭೆ: ಜನಪ್ರತಿನಿಧಿಗಳ ಆಕ್ರೋಶ ಸಾಧ್ಯತೆ

ಯಾವುದೇ ಪ್ರಗತಿ ಕಾಣದ ಮಹಾನಗರ ಪಾಲಿಕೆ, ಸ್ಮಾರ್ಟ್‌ಸಿಟಿ ಯೋಜನೆ - ಅಭಿವೃದ್ಧಿಗಾಗಿ ಆಯುಕ್ತರ ಬೆನ್ನಿಗೆ ನಿಲ್ತಾರಾ ನೂತನ ಶಾಸಕರು?

Vijaya Karnataka 26 Jun 2018, 5:00 am
ಬೆಳಗಾವಿ: ಮಹಾನಗರ ಪಾಲಿಕೆಯ ಸರ್ವಸಾಧಾರಣ ಸಭೆ ಮಂಗಳವಾರ ನಡೆಯಲಿದೆ. ಲೋಕಸಭಾ ಸದಸ್ಯ ಸುರೇಶ ಅಂಗಡಿ, ನೂತನ ಶಾಸಕರಾದ ಅಭಯ ಪಾಟೀಲ, ಲಕ್ಷ್ಮಿ ಹೆಬ್ಬಾಳಕರ್‌, ಸತೀಶ ಜಾರಕಿಹೊಳಿ, ಅನಿಲ ಬೆನಕೆ ಸಹ ಪಾಲ್ಗೊಳ್ಳುವ ಸಾಧ್ಯತೆ ಇದೆ. ಅಜೆಂಡಾದಲ್ಲಿ ಅಂತಹ ಮಹತ್ವದ ವಿಷಯ ಇಲ್ಲದಿದ್ದರೂ ನಗರದ ಸಮಸ್ಯೆಗಳ ಹಿನ್ನೆಲೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಬಹುದು.
Vijaya Karnataka Web BLG-2506-2-52-25ABHAY


ಕಳೆದ 2 ತಿಂಗಳಿನಿಂದ ನಗರದಲ್ಲಿ ಕೆಲಸಗಳು ಸ್ತಬ್ಧವಾಗಿರುವ ಕುರಿತು ಸಭೆಯಲ್ಲಿ ಭಾರಿ ಗದ್ದಲ ನಡೆಯುವ ಸಾಧ್ಯತೆ ಇದೆ. ಶಾಸಕ ಅಭಯ ಪಾಟೀಲ ನಗರದ ಅಭಿವೃದ್ಧಿ ಮತ್ತು ತ್ಯಾಜ್ಯ ವಿಲೇವಾರಿ ಸಮಸ್ಯೆಗಳ ಕುರಿತು ಪ್ರಸ್ತಾಪಿಸುವ ಸಂಭವವಿದೆ. ಹಲವು ಅಧಿಕಾರಿಗಳು ಯಾವುದೇ ಕೆಲಸ ಮಾಡದೆ ಈ ಹಿಂದೆ ಅಂದಿನ ಶಾಸಕ ಫಿರೋಜ್‌ ಸೇಠ್‌ ಅವರ ಖಾಸಗಿ ಸೇವಕರಂತೆ ನಡೆದುಕೊಳ್ಳುತ್ತಿದ್ದ ಕುರಿತು ಶಾಸಕರಿಬ್ಬರೂ ಆಕ್ರೋಶಗೊಂಡಿದ್ದು, ಅಂತಹ ಅಧಿಕಾರಿಗಳ ವಿರುದ್ಧ ಗರಂ ಆಗುವ ಸಾಧ್ಯತೆ ಇದೆ.

''ಹಿಂದಿನ ಶಾಸಕರಂತೆ ಯಾವುದೇ ಅಧಿಕಾರಿಗಳನ್ನು ಮನೆಗೆ ಕರೆಸಿಕೊಳ್ಳುವುದಿಲ್ಲ. ಏನೇ ಕೆಲಸವಿದ್ದರೂ ಕಚೇರಿಯಲ್ಲಿಯೇ ಚರ್ಚಿಸುತ್ತೇನೆ. ಬೆಳಗ್ಗೆ 7 ಗಂಟೆಗೆ ಬೇಕಾದರೂ ಕಚೇರಿಗೆ ಹೋಗಿ ಕುಳಿತುಕೊಳ್ಳುತ್ತೇನೆ'', ಎಂದು ಶಾಸಕ ಅನಿಲ ಬೆನಕೆ ಈಗಾಗಲೇ ಹೇಳಿದ್ದಾರೆ. ಹಿಂದಿನ ಶಾಸಕರು ಆಯುಕ್ತ ಶಶಿಧರ ಕುರೇರ ಅವರಿಗೆ ಮುಕ್ತವಾಗಿ ಕೆಲಸ ನಿರ್ವಹಿಸಲು ಅವಕಾಶ ನೀಡಿಲ್ಲ ಎನ್ನುವ ಆರೋಪವೂ ಇದೆ. ಈ ಎಲ್ಲ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಗೆ ಮೇಜರ್‌ ಸರ್ಜರಿ ಆಗಬೇಕಿದ್ದು, ನೂತನ ಶಾಸಕರು ಆಯುಕ್ತರ ಬೆನ್ನಿಗೆ ನಿಂತು ಮಹಾನಗರದ ಸಮಸ್ಯೆಗಳಿಗೆ ಮುಕ್ತಿ ನೀಡಲಿದ್ದಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

2 ತಿಂಗಳಿಂದ ಸ್ವಚ್ಛತೆಯೂ ಇಲ್ಲ:

ಕಳೆದ 2 ತಿಂಗಳಲ್ಲಿ ಬೆಳಗಾವಿ ಮಹಾನಗರ ಸ್ವಚ್ಛತೆಯಲ್ಲೂ ತೀರಾ ಹಿಂದೆ ಬಿದ್ದಿದೆ. ಮಳೆಗಾಲ ಬಂದರೂ ಅಧಿಕಾರಿ-ಸಿಬ್ಬಂದಿ ತುರ್ತು ಕೆಲಸದತ್ತ ಗಮನ ಹರಿಸಲಿಲ್ಲ. ಇದರಿಂದಾಗಿ ನೂತನ ಶಾಸಕ ಅಭಯ ಪಾಟೀಲ ಕೂಡ ತೀವ್ರ ಆಕ್ರೋಶಗೊಂಡಿದ್ದು, ಈಗಾಗಲೆ ಅಧಿಕಾರಿಗಳ ಸಭೆ ನಡೆಸಿ ಕಿಡಿ ಕಾರಿದ್ದಾರೆ. ಅಲ್ಲದೆ ನಗರ ಪ್ರದಕ್ಷಿಣೆ ವೇಳೆ ಅಧಿಕಾರಿಗಳನ್ನು ಜತೆಗೆ ಕರೆದುಕೊಂಡು ಹೋಗುತ್ತಿರುವ ಶಾಸಕರು, ಎಲ್ಲೆಂದರಲ್ಲಿ ಕಸ ಬಿದ್ದಿರುವ ಕುರಿತು, ಗಟಾರಗಳನ್ನು ಸ್ವಚ್ಛಗೊಳಿಸದಿರುವ ಕುರಿತು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಸೋಮವಾರ ಸಂಜೆ ಕೂಡ ನಗರ ಕೋರೆಗಲ್ಲಿ, ಕಚೇರಿಗಲ್ಲಿ ಮೊದಲಾದ ಪ್ರದೇಶಗಳಿಗೆ ತೆರಳಿದ್ದ ಶಾಸಕರು ಅಲ್ಲಿನ ಅವ್ಯವಸ್ಥೆ ಕಂಡು ಕಿಡಿಕಾರಿದ್ದಾರೆ. ಮಂಗಳವಾರದ ಪಾಲಿಕೆ ಸಭೆಯಲ್ಲಿ ವಿಷಯ ಎತ್ತುವುದಾಗಿ ನಾಗರಿಕರಿಗೆ ಭರವಸೆ ನೀಡಿದ್ದಾರೆ.

2 ತಿಂಗಳು ರಜಾಕಾಲ: ಕುರೇರ ಗರಂ:

ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾದ ದಿನದಿಂದ ಇಲ್ಲಿಯವರೆಗೂ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್‌ಸಿಟಿ ಯೋಜನೆ ಸಂಪೂರ್ಣ ಸ್ತಬ್ಧವಾಗಿ, ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರೂ ಆಗಿರುವ ಸ್ಮಾರ್ಟ್‌ಸಿಟಿ ಎಂಡಿ ಶಶಿಧರ ಕುರೇರ್‌ ಅಧಿಕಾರಿ, ಸಿಬ್ಬಂದಿ ವಿರುದ್ಧ ಗರಂ ಆಗಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಬಾಗಲಕೋಟೆಗೆ ವರ್ಗಾವಣೆ ಹೊಂದಿದ್ದ ಕುರೇರ ಕಳೆದ ವಾರ ವಾಪಸ್ಸಾಗಿ ಈ ಎರಡೂ ಹುದ್ದೆಗಳ ಅಧಿಕಾರ ವಹಿಸಿಕೊಂಡಿದ್ದಾರೆ. ಅಲ್ಲಿಂದ ನಿತ್ಯವೂ ಸರಣಿ ಸಭೆಗಳನ್ನು ನಡೆಸುತ್ತಿರುವ ಅವರು, ಕೆಲಸದಲ್ಲಿ ಯಾವುದೇ ಪ್ರಗತಿಯಾಗದೆ ಅಧಿಕಾರಿ-ಸಿಬ್ಬಂದಿ ಸಂಪೂರ್ಣ ರಜೆಯ ಮೂಡ್‌ಗೆ ಹೋಗಿದ್ದ ಕುರಿತು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

''ಚುನಾವಣೆ ನೀತಿ ಸಂಹಿತೆ ಮತ್ತು ಕೆಲವು ಅಧಿಕಾರಿಗಳನ್ನು ಚುನಾವಣೆ ಕೆಲಸಕ್ಕೆ ನಿಯೋಜಿಸಿದ ಹಿನ್ನೆಲೆಯಲ್ಲಿ ಚುನಾವಣೆ ಪೂರ್ವ ಕೆಲಸ ಸ್ಥಗಿತಗೊಂಡಿದ್ದನ್ನು ಒಪ್ಪಿಕೊಳ್ಳಬಹುದು. ಆದರೆ ಚುನಾವಣೆ ಫಲಿತಾಂಶ ಬಂದು ತಿಂಗಳಾದರೂ ಯಾವುದೇ ಸಿಬ್ಬಂದಿ ಕೆಲಸದ ಮೂಡ್‌ಗೆ ಮರಳಿಲ್ಲ'', ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ವಿಶೇಷವೆಂದರೆ, ಕುರೇರ ವರ್ಗಾವಣೆಗೊಂಡ ಅವಧಿಯಲ್ಲಿ ಬಂದಿದ್ದ ಆಯುಕ್ತ ಕೃಷ್ಣೇಗೌಡ ತಾಯಣ್ಣವರ್‌ ಆರಂಭದಲ್ಲಿ ಚುನಾವಣೆ ಕೆಲಸದಲ್ಲಿ ಮಗ್ನರಾಗಿದ್ದರೆ ನಂತರ ವರ್ಗಾವಣೆ ಗೊಂದಲದಲ್ಲಿ ಮುಳುಗಿದ್ದರು. ಹಾಗಾಗಿ ಅವರೂ ಕೆಲಸ ಮಾಡಲು ಸಾಧ್ಯವಾಗಲಿಲ್ಲ, ಸಿಬ್ಬಂದಿಯೂ ಕೆಲಸದತ್ತ ಮುಖ ಮಾಡಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ