ಆ್ಯಪ್ನಗರ

ಸತೀಶ್‌ ಜಾರಕಿಹೊಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಪಟ್ಟ, ಬೆಳಗಾವಿಯಲ್ಲಿ ಸಂಚಲನ ಸೃಷ್ಟಿಸಿದ 'ಕೈ' ನಡೆ

ಬೆಳಗಾವಿಯಲ್ಲಿ ಪಿಎಲ್‌ಡಿ ಬ್ಯಾಂಕ್‌ ರಾಜಕಾರಣದಿಂದ ಒಂದೇ ಪಕ್ಷದಲ್ಲಿದ್ದರೂ ಬದ್ಧ ಎದುರಾಳಿಗಳಂತಿದ್ದ ಡಿ.ಕೆ.ಶಿವಕುಮಾರ್‌ ಮತ್ತು ಸತೀಶ್‌ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಬೆಳಗಾವಿಯಲ್ಲೂ ಕಾಂಗ್ರೆಸ್‌ ಬೆಳೆಸುವ ಸವಾಲು ಸತೀಶ್‌ ಜಾರಕಿಹೊಳಿಗಿದೆ.

Vijaya Karnataka Web 11 Mar 2020, 9:23 pm
ಬೆಳಗಾವಿ: ತಾಲೂಕಿನ ಪಿಎಲ್‌ಡಿ ಬ್ಯಾಂಕ್‌ ರಾಜಕಾರಣದಿಂದ ಒಂದೇ ಪಕ್ಷದಲ್ಲಿದ್ದರೂ ಬದ್ಧ ಎದುರಾಳಿಗಳಂತೆ ವರ್ತಿಸಿದ್ದ ಮಾಜಿ ಸಚಿವರಾದ ಡಿ.ಕೆ. ಶಿವಕುಮಾರ್‌ ಮತ್ತು ಸತೀಶ್‌ ಜಾರಕಿಹೊಳಿ ಈಗ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
Vijaya Karnataka Web SATISH JARAKIHOLI


ಜತೆಗೆ ಮೈತ್ರಿ ಸರಕಾರಕ್ಕೆ ಪೆಟ್ಟು ಕೊಟ್ಟು ಜಿಲ್ಲೆಯ ಮೂರು ಕಾಂಗ್ರೆಸ್‌ ಕ್ಷೇತ್ರಗಳನ್ನು ಬಿಜೆಪಿಮಯ ಮಾಡಿರುವ ಸಹೋದರ ರಮೇಶ್‌ ಜಾರಕಿಹೊಳಿ ವಿರುದ್ಧ ತೊಡೆ ತಟ್ಟಿ ಮತ್ತೆ ಜಿಲ್ಲೆಯನ್ನು ಕಾಂಗ್ರೆಸ್‌ನ ಭದ್ರಕೋಟೆ ಮಾಡುತ್ತಾರಾ ಎನ್ನುವ ಹೊಸ ಚರ್ಚೆಯೂ ಹುಟ್ಟಿಕೊಂಡಿದೆ. ಪಕ್ಷದ ಸಮತೋಲನ ದೃಷ್ಟಿಯಿಂದ ಮೂರು ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಸಿ ಒಂದು ಹುದ್ದೆಗೆ ಸತೀಶ್‌ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಿರುವುದು ಜಿಲ್ಲೆಯ ರಾಜಕಾರಣದಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗುವ ಮುನ್ಸೂಚನೆ ನೀಡಿದೆ.

ಮೈತ್ರಿ ಸರಕಾರಕ್ಕೆ ಸವಾಲೊಡ್ಡಿ ಬಿಜೆಪಿ ಸೇರಿ ಸಚಿವರೂ ಆಗಿರುವ ರಮೇಶ್‌ ಜಾರಕಿಹೊಳಿಗೆ ಪರ್ಯಾಯ ಶಕ್ತಿಯಾಗಿ ಸತೀಶ್‌ ಜಾರಕಿಹೊಳಿ ಅವರನ್ನು ಗುರುತಿಸಿ, ಅವರ ಮೇಲೆ ಪಕ್ಷ ಸಂಘಟನೆ ಮಾಡುವ ದೊಡ್ಡ ಜವಾಬ್ದಾರಿ ಹೊರಿಸಲಾಗಿದೆ. ಅವರೀಗ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಐದಕ್ಕೆ ಇಳಿದಿರುವ ಕಾಂಗ್ರೆಸ್‌ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಇನ್ನುಳಿದವರನ್ನು ಯಾವ ರೀತಿಯಲ್ಲಿವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎನ್ನುವುದು ಬಹು ಚರ್ಚಿತ ವಿಷಯವಾಗಿ ಮಾರ್ಪಟ್ಟಿದೆ.

ಮರಳಿ ಮನೆಗೆ ಸವಾಲು
ರಮೇಶ್‌ ಜಾರಕಿಹೊಳಿ ಬಿಜೆಪಿ ಸೇರ್ಪಡೆಯೊಂದಿಗೆ ಕಮಲದ ಬೆನ್ನು ಹತ್ತಿರುವ ಕಾಂಗ್ರೆಸ್‌ ಕಾರ್ಯಕರ್ತರನ್ನು ಮತ್ತೆ ಮರಳಿ ಮನೆಗೆ ಕರೆತರುವ ಹೊಣೆ ಸತೀಶ್‌ ಜಾರಕಿಹೊಳಿ ಹೆಗಲೇರಿದೆ. ಇದರೊಂದಿಗೆ, ಛಿದ್ರಗೊಂಡಿರುವ ಮಾಜಿ ಶಾಸಕರನ್ನು ಒಗ್ಗೂಡಿಸುವುದು ಮಾತ್ರ ಸವಾಲಾಗಬಹುದು ಎನ್ನುತ್ತಾರೆ ಕಾಂಗ್ರೆಸ್‌ ಕಾರ್ಯಕರ್ತರು. ಡಿ.ಕೆ.ಶಿವಕುಮಾರ್‌ ಅಧ್ಯಕ್ಷ ಸ್ಥಾನಕ್ಕೇರಿರುವುದರಿಂದ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ರ್‌ಗೆ ಇನ್ನಷ್ಟು ಮಹತ್ವ, ಬಲ ಸಿಕ್ಕಂತಾಗಿದೆ. ಇದು ಸತೀಶ್‌ ಮತ್ತು ಲಕ್ಷ್ಮಿ ನಡುವೆ ಮತ್ತೊಂದು ಹಂತದ ಸಂಘರ್ಷಕ್ಕೆ ಕಾರಣವಾದರೂ ಆಶ್ಚರ್ಯಪಡಬೇಕಿಲ್ಲ ಎನ್ನುವ ಮಾತುಗಳು ಕಾಂಗ್ರೆಸ್‌ ಪಾಳೆಯದಲ್ಲಿ ಕೇಳಿಬರುತ್ತಿವೆ.

'ಕನಕಪುರ ಬಂಡೆ'ಗೆ ಕಾಂಗ್ರೆಸ್‌ ಅಧ್ಯಕ್ಷ ಪಟ್ಟ, ರಾಜ್ಯಾದ್ಯಂತ ಡಿಕೆಶಿ ಬೆಂಬಲಿಗರ ಸಂಭ್ರಮ

ಸತೀಶ್‌ ಜಾರಕಿಹೊಳಿ 1998ರಿಂದ 2008 ರವರೆಗೆ ವಿಧಾನಪರಿಷತ್‌ ಸದಸ್ಯರಾಗಿದ್ದರು. ಈ ನಡುವೆ 2004ರಲ್ಲಿಜವಳಿ ಸಚಿವರಾಗಿದ್ದರು. 2008ರಿಂದ ಇಲ್ಲಿಯವರೆಗೆ ಮೂರು ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದು 2013ರಿಂದ ಅಬಕಾರಿ, ಸಣ್ಣ ಕೈಗಾರಿಕೆ, ಅರಣ್ಯ ಖಾತೆಗಳ ಜತೆಗೆ ಜಿಲ್ಲಾಉಸ್ತುವಾರಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.

ಇವರೇ ರಾಜ್ಯ ಕಾಂಗ್ರೆಸ್‌ನ ಉಪ ಸಾರಥಿಗಳು, ಕಾರ್ಯಧ್ಯಕ್ಷರ ಸಂಕ್ಷಿಪ್ತ ಪ್ರೊಫೈಲ್‌ ಇಲ್ಲಿದೆ

ಹೈಕಮಾಂಡ್‌ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ಬೆಳಗಾವಿ ಸೇರಿ ರಾಜ್ಯದಲ್ಲಿ ಕಳೆದುಕೊಂಡಿರುವ ಸ್ಥಾನಗಳನ್ನು ಮರಳಿಪಡೆಯುವ ನಿಟ್ಟಿನಲ್ಲಿ ಪಕ್ಷ ಕಟ್ಟಲಾಗುವುದು ಎಂದು ಕೆಪಿಸಿಸಿಯ ನೂತನ ಕಾರ್ಯಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ನೂತನ ಪದಾಧಿಕಾರಿಗಳ ನೇಮಕದಿಂದ ಕೆಪಿಸಿಸಿ ಸಾರಥ್ಯಕ್ಕೆ ಹೊಸ ಶಕ್ತಿ ಬಂದಂತಾಗಿದೆ. ನನೆಗುದಿಗೆ ಬಿದ್ದಿದ್ದ ಜಿಲ್ಲಾ ಘಟಕಗಳ ಪದಾಧಿಕಾರಿಗಳ ನೇಮಕಕ್ಕೂ ಚಾಲನೆ ದೊರೆಯಲಿದೆ. ಪಕ್ಷಕ್ಕಾಗಿ ಶ್ರಮಿಸಿದ ಮೂಲ ಕಾರ್ಯಕರ್ತರಿಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಕಾಂಗ್ರೆಸ್‌ ಕಾರ್ಯಕರ್ತ ಬಸವರಾಜ್‌ ಶೇಗಾವಿ ಹೇಳಿದ್ದಾರೆ.

ಡಿಕೆ ಶಿವಕುಮಾರ್‌ ಹಿಂದೆ ಜೆಡಿಎಸ್‌ ಶಾಸಕರ ವಲಸೆ ಸಾಧ್ಯತೆ, ದಳಪತಿಗಳಿಗೆ ಆತಂಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ