ಸಿಲಿಂಡರ್ ಸ್ಫೋಟಕ್ಕೆ ಬೆಚ್ಚಿದ ಬಜಾರಗಲ್ಲಿ
ಸಿಲಿಂಡರ್ ಸ್ಫೋಟಕ್ಕೆ ಬೆಚ್ಚಿದ ಬಜಾರಗಲ್ಲಿ - ಮೂವರು ಮಹಿಳೆಯರು, ಇಬ್ಬರು ಮಕ್ಕಳಿಗೆ ಗಾಯ - ಜಿಲ್ಲಾಸ್ಪತ್ರೆಗೆ ದಾಖಲು ವಿಕ ಸುದ್ದಿಲೋಕ ಬೆಳಗಾವಿ ವಡಗಾವಿಯ ...
ಬೆಳಗಾವಿ: ವಡಗಾವಿಯ ಬಜಾರಗಲ್ಲಿಯಲ್ಲಿ ಬಲೂನ್ಗೆ ತುಂಬುವ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ತಾಯಿ, ಇಬ್ಬರು ಮಕ್ಕಳು ಸೇರಿ ಐವರು ಗಾಯಗೊಂಡಿದ್ದಾರೆ.
ಸೋನಾಳಗಲ್ಲಿಯ ಶಿಂಧೆ ಚಾಳದ ಸುನಂದಾ ಶಂಕರ ನಿಂಗರಾಣಿ (32), ಇವರ ಮಕ್ಕಳಾದ ಅಂಬಿಕಾ ಶಂಕರ ನಿಂಗರಾಣಿ (6), ಆಕಾಶ ಶಂಕರ ನಿಂಗರಾಣಿ (12), ತರಕಾರಿ ವ್ಯಾಪಾರಿ ಮಂಗಾಯಿ ನಗರದ ಪಾರ್ವತಿ ಶಾಮ್ ಕದಂ (65) ಹಾಗೂ ರಂಜನಾ ಶಾಮ್ ಕದಂ (45) ಗಾಯಗೊಂಡವರು. ಇವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುನಂದಾ ಅವರ ಬಲಗಾಲು ಮತ್ತು ಎಡಗೈ, ಆಕಾಶ್ಗೆ ಮುಖದ ಮೇಲೆ, ಅಂಬಿಕಾಗೆ ಮುಖ ಮತ್ತು ಬಲಗಾಲಿಗೆ, ಪಾರ್ವತಿಗೆ ಎಡಗೈ ಮತ್ತು ಬಲಗಾಲಿಗೆ, ರಂಜನಾ ಅವರ ಎಡಗಾಲು ಮತ್ತು ಎಡಗೈಗೆ ಗಾಯಗಳಾಗಿವೆ.
ಘಟನೆ ವಿವರ: ಬಜಾರಗಲ್ಲಿಯಲ್ಲಿ ಬಲೂನ್ ವ್ಯಾಪಾರ ಮಾಡುತ್ತಿದ್ದ ಶಂಕರ ಎನ್ನುವವರು ಬಲೂನಿಗೆ ಸಿಲಿಂಡರ್ ಮೂಲಕ ಅನಿಲ ತುಂಬುತ್ತಿದ್ದರು. ಇದೇ ವೇಳೆ ಇದ್ದಕ್ಕಿದ್ದಂತೆ ಸಿಲಿಂಡರ್ ಸ್ಫೊಧೀಟಗೊಂಡಿದೆ. ಪರಿಣಾಮ, ಇದೇ ಮಾರ್ಗವಾಗಿ ಹೋಗುತ್ತಿದ್ದ ಸುನಂದಾ ಹಾಗೂ ಆಕೆಯ ಮಕ್ಕಳಿಗೆ ಗಾಯಗಳಾಗಿವೆ. ಸಮೀಪದಲ್ಲಿ ತರಕಾರಿ ಮಾರುತ್ತಿದ್ದ ಪಾರ್ವತಿ ಕದಂ ಹಾಗೂ ರಂಜನಾ ಅವರಿಗೂ ಗಾಯಗಳಾಗಿವೆ.
ಘಟನೆ ನಡೆಯುತ್ತಿದ್ದಂತೆಯೇ ಸ್ಥಳದಲ್ಲಿ ಜನರು ಜಮಾಯಿಸಿದರು. ಸ್ಥಳಕ್ಕೆ ಬಂದ ಪೊಲೀಸರಿಗೆ ಜನರನ್ನು ಚದುರಿಸಲು ಹರಸಾಹಸ ಪಡಬೇಕಾಯಿತು. ಬಳಿಕ ಬಜಾರ್ಗಲ್ಲಿ ರಸ್ತೆ ಸಂಚಾರ ಬಂದ್ ಮಾಡಿ ಸ್ಥಳ ಪರಿಶೀಲನೆ ನಡೆಸಿದರು. ಪೊಲೀಸ್ ಉಪ ಆಯುಕ್ತ ಅನುಪಮ್ ಅಗರವಾಲ್, ಡಿಸಿಪಿ ಅಮರನಾಥ ರೆಡ್ಡಿ ಮತ್ತಿತರರು ಇದ್ದರು.