ಆ್ಯಪ್ನಗರ

ವಿಭಾಗ ಮಟ್ಟದ ಸಭೆ ಧಾರವಾಡದಲ್ಲಿ!

ಹಳ್ಳ ಹಿಡಿಯಿತೇ ಸಿಎಂ ಕುಮಾರಸ್ವಾಮಿ ಭರವಸೆ?

Vijaya Karnataka 13 Jun 2018, 5:00 am
ಬೆಳಗಾವಿ: ಅಧಿಕಾರಕ್ಕೆ ಬಂದರೆ ತಿಂಗಳಲ್ಲಿ ಒಂದು ವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕಚೇರಿ ನಡೆಸುವುದಾಗಿ ಹೇಳಿದ್ದ ಎಚ್‌.ಡಿ. ಕುಮಾರ ಸ್ವಾಮಿ ಅವರ ಮಾತು ಆರಂಭದಲ್ಲೇ ಹಳ್ಳಹಿಡಿದಿದೆ.
Vijaya Karnataka Web division level meeting in dharwad
ವಿಭಾಗ ಮಟ್ಟದ ಸಭೆ ಧಾರವಾಡದಲ್ಲಿ!


ಸಮ್ಮಿಶ್ರ ಸರಕಾರದ ಮೊದಲ ವಿಭಾಗಮಟ್ಟದ ಸಭೆಯನ್ನು ಮಂಗಳವಾರ ಬೆಳಗಾವಿ ಬಿಟ್ಟು ಧಾರವಾಡದ ಡಿಸಿ ಕಚೇರಿಯಲ್ಲಿ ನಡೆಸಲಾಗಿದೆ.

ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಮಂಗಳವಾರ ಬೆಳಗ್ಗೆ ಬೆಳಗಾವಿ ವಿಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪ್ರಕೃತಿ ವಿಕೋಪ ಪರಿಶೀಲನಾ ಸಭೆಯನ್ನು ನಡೆಸಿದರು. ವಿಭಾಗೀಯ ಕೇದ್ರ ಬೆಳಗಾವಿ ಇರುವಾಗ ಧಾರವಾಡದಲ್ಲಿ ಸಭೆ ಕರೆಯುವ ಔಚಿತ್ಯ ಏನಿತ್ತು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಸುಮಾರು 432 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿರುವ ಸುವರ್ಣ ವಿಧಾನಸೌಧ ಕಳೆದ ಐದು ವರ್ಷಗಳಿಂದಲೂ ಲೆಕ್ಕಕ್ಕಿಲ್ಲದಂತಿದೆ. ಕುಮಾರಸ್ವಾಮಿ ಅವರು ಸಿಎಂ ಆದ ಬಳಿಕ ಸೌಧಕ್ಕೆ ಮಹತ್ವ ಸಿಗಲಿದೆ ಎನ್ನುವ ಆಶಾ ಭಾವನೆ ಮೂಡಿತ್ತು. ಚುನಾವಣೆಗೂ ಮುನ್ನ ಅವರು ಪ್ರಚಾರ ಭಾಷಣದ ವೇಳೆ ಈ ಭಗ್ಗೆ ಭರವಸೆಯನ್ನೂ ನೀಡಿದ್ದರು.

ಈಗಾಗಲೇ ಬೆಳಗಾವಿ ವಿಮಾನ ನಿಲ್ದಾಣದಲ್ಲಿದ್ದ ವಿಮಾನಗಳು ಹುಬ್ಬಳ್ಳಿಗೆ ಸ್ಥಳಾಂತರವಾಗಿವೆ. ವಿಭಾಗ ಮಟ್ಟದ ಸಭೆಗಳು ಕೂಡ ಅಲ್ಲಿಯೇ ನಡೆದರೆ, ಬೆಳಗಾವಿ ಮಹತ್ವ ಕಡಿಮೆಯಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತೆ ಹಿನ್ನೆಲೆಗೆ ಸರಿಯಲಿದೆ ಎನ್ನುವ ಆತಂಕ ಮೂಡಿದೆ. ಆದರೆ, ನೂತನ ಸಚಿವರು ಬೆಳಗಾವಿ ಬಿಟ್ಟು ಧಾರವಾಡಕ್ಕೆ ಮಹತ್ವ ಕೊಟ್ಟಿದ್ದೇಕೆ ಎನ್ನುವ ಪ್ರಶ್ನೆ ಮೂಡಿದೆ.

ವಿಶೇಷವೆಂದರೆ, ಇದನ್ನು ಪ್ರತಿಭಟಿಸಬೇಕಾದ ಬೆಳಗಾವಿಯ ಜನಪ್ರತಿನಿಧಿಗಳೂ ಮೌನವಹಿಸಿರುವುದು ಆಶ್ಚರ್ಯ ಮೂಡಿಸಿದೆ. ಸಂಸದ ಸುರೇಶ ಅಂಗಡಿ, ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ್‌, ಮಹಾಂತೇಶ ಕೌಜಲಗಿ, ಅಂಜಲಿ ನಿಂಬಾಳಕರ್‌, ಪಿ.ರಾಜೀವ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು. ಬೆಳಗಾವಿ ಬಿಟ್ಟು ಧಾರವಾಡದಲ್ಲಿ ಸಭೆ ನಡೆಸಿರುವ ಬಗ್ಗೆ ಪ್ರತಿಭಟಿಸಿದ್ದರೆ ಮುಂದಿನ ದಿನಗಳಲ್ಲಾದರೂ ಇಂತಹ ಅವಾಂತರ ತಪ್ಪಿಸಬಹುದಿತ್ತು.

ಇಷ್ಟೊಂದು ದುಡ್ಡು ಖರ್ಚು ಮಾಡಿ ಸುವರ್ಣವಿಧಾನಸೌಧ ಕಟ್ಟಲಾಗಿದೆ. ಬೆಳಗಾವಿ ವಿಭಾಗೀಯ ಕೇಂದ್ರ. ಆದರೆ ಸರಕಾರ, ಸಚಿವರು ಈ ರೀತಿ ಬೆಳಗಾವಿ ಬಗ್ಗೆ ಅಸಡ್ಡೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಈ ಸಂಬಂಧ ಸಂಬಂಧಿಸಿದ ಸಚಿವರಿಗೆ ಮತ್ತು ಸರಕಾರಕ್ಕೆ ಪತ್ರ ಬರೆಯುತ್ತೇನೆ.
-ಅಭಯ ಪಾಟೀಲ, ಶಾಸಕ

ಸುವರ್ಣ ವಿಧಾನಸೌಧ ಇನ್ನು ಮುಂದೆ ಹೆಚ್ಚು ಚಟುವಟಿಕೆಯಿಂದ ಕಾರ್ಯನಿರ್ವಹಿಸಲಿದೆ ಎನ್ನುವ ನಿರೀಕ್ಷೆ ಜನರಲ್ಲಿ ಮೂಡಿದೆ. ಅದರಂತೆ ಹೆಚ್ಚು ಚಟುವಟಿಕೆಗಳು ಸೌಧದಲ್ಲಿ ನಡೆಯಬೇಕು. ಈ ಕುರಿತು ಪಕ್ಷದ ಹಿರಿಯರ ಗಮನಸೆಳೆಯುತ್ತೇನೆ'
-ಲಕ್ಷ್ಮಿ ಹೆಬ್ಬಾಳಕರ, ಶಾಸಕಿ

ವಿಭಾಗೀಯ ಕೇಂದ್ರವಾಗಿರುವ ಬೆಳಗಾವಿಯಲ್ಲಿ ಸುವರ್ಣಸೌಧ ಇದ್ದರೂ, ಧಾರವಾಡದ ಡಿಸಿ ಕಚೇರಿಯಲ್ಲಿ ಸಭೆ ನಡೆಸಿದ್ದು ಸರಿಯಲ್ಲ. ಅಲ್ಲಿ ಅಧಿಕಾರಿಗಳಿಗೂ ಕೂರಲು ಕುರ್ಚಿ ಇರಲಿಲ್ಲ. ಕಾಟಾಚಾರಕ್ಕೆ ಸಭೆ ಮಾಡಲಾಗಿದೆ. ಈ ರೀತಿ ಆದರೆ ಬೆಳಗಾವಿ ಮಹತ್ವ ಕಡಿಮೆ ಆಗುತ್ತದೆ. ಇನ್ನು ಮುಂದೆಯಾದರೂ, ಸುವರ್ಣಸೌಧವನ್ನು ಸರಿಯಾಗಿ ಬಳಸಿಕೊಳ್ಳಬೇಕು.
-ಸುರೇಶ ಅಂಗಡಿ, ಸಂಸದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ